Assault on police Mangalore: ಗಸ್ತಿನಲ್ಲಿದ್ದ ಉರ್ವಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಯುವಕರಿಂದ ಹಲ್ಲೆ ; ಕೋಡಿಕಲ್ ನಲ್ಲಿ ಘಟನೆ, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

24-05-26 06:44 pm       Mangalore Correspondent   ಕ್ರೈಂ

ರಾತ್ರಿ ವೇಳೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಉರ್ವಾ ಠಾಣೆ ಕಾನ್‌ಸ್ಟೇಬಲ್‌ ಒಬ್ಬರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ಹಲ್ಲೆ ನಡೆಸಿ ಪರಾರಿಯಾಗಿದ್ದು, ಇದರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಮಂಗಳೂರು, ಮೇ 24: ರಾತ್ರಿ ವೇಳೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಉರ್ವಾ ಠಾಣೆ ಕಾನ್‌ಸ್ಟೇಬಲ್‌ ಒಬ್ಬರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ಹಲ್ಲೆ ನಡೆಸಿ ಪರಾರಿಯಾಗಿದ್ದು, ಇದರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ನಗರದ ಉರ್ವ ಠಾಣೆ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಬಳಿ ಶನಿವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ಥಳದಲ್ಲಿ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ ಕರ್ತವ್ಯ ನಿರತರಾಗಿದ್ದ ವೇಳೆ ದ್ವಿಚಕ್ರ ವಾಹನವೊಂದರಲ್ಲಿ ಇಬ್ಬರು ಯುವಕರು ಅತಿ ವೇಗವಾಗಿ ಸಾಗಿದ್ದರು. ವಾಹನ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಲೆಕ್ಕಿಸದೆ ತೆರಳಿದ್ದರು. ಆನಂತರ ಅದೇ ಮಾರ್ಗದಲ್ಲಿ ಬಂದಿದ್ದ ಯುವಕರು ಸಿಮೆಂಟ್‌ ಶೀಟ್‌ನ ತುಂಡನ್ನು ಹಿಡಿದು ಪೊಲೀಸ್‌ ಕಾನ್‌ಸ್ಟೇಬಲ್ ಒಬ್ಬರ ಮೇಲೆ ನೇರವಾಗಿ ಹೊಡೆದು ಪರಾರಿಯಾಗಿದ್ದಾರೆ.

ಪೊಲೀಸ್‌ ಕಾನ್‌ಸ್ಟೇಬಲ್‌ ಹನುಮಂತ ಕಂಠಿ ಎಂಬವರು ಏಟಿನಿಂದ ತಪ್ಪಿಸಿಕೊಳ್ಳಲು ಕೆಳಕ್ಕೆ ಬಗ್ಗಿದ್ದರಿಂದ ಹಲ್ಲೆಯಿಂದ ಪಾರಾಗಿದ್ದಾರೆ. ಆದರೂ ತಲೆಯ ಭಾಗಕ್ಕೆ ಪೆಟ್ಟು ಬಿದ್ದು ಗಾಯವಾಗಿದೆ ಎಂದು ಉರ್ವಾ ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.