ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ ಪೋಸ್ಟ್ ; ಕಾಸರಗೋಡಿನಲ್ಲಿ ಪೊಲೀಸ್ ಅಧಿಕಾರಿ ಅಮಾನತು

25-05-26 04:26 pm       HK News Staffer   ಕ್ರೈಂ

ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪಿನಲ್ಲಿ ವಿವಾದಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ವೆಳ್ಳರಿಕುಂಡು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸುಜಿತ್ ಅವರನ್ನು ಅಮಾನತು ಮಾಡಲಾಗಿದೆ.

ಕಾಸರಗೋಡು, ಮೇ 25: ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪಿನಲ್ಲಿ ವಿವಾದಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ವೆಳ್ಳರಿಕುಂಡು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸುಜಿತ್ ಅವರನ್ನು ಅಮಾನತು ಮಾಡಲಾಗಿದೆ. 

ರಾಜಕೀಯ ಪ್ರೇರಿತ ಸಂದೇಶದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ತೀವ್ರ ವಿವಾದಕ್ಕೆ ಕಾರಣವಾಗುತ್ತಲೇ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಬಿ.ವಿ.ವಿಜಯ ಭರತ್ ರೆಡ್ಡಿ ಅವರು ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ‘ಪೊಲೀಸ್ ಫ್ರೆಂಡ್ಸ್’ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಸಿಪಿಒ ಸುಜಿತ್ ಅವರು ವಿವಾದಾತ್ಮಕ ಸಂದೇಶ ಪೋಸ್ಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಉಲ್ಲೇಖಿಸಿ ಪೋಸ್ಟ್‌ ಹಾಕಿದ್ದು, ಸ್ಥಳೀಯ ಮುಸ್ಲಿಂ ಲೀಗ್ ನಾಯಕ ಕೆ.ಎಂ. ಶಾಜಿ ಅವರನ್ನು ಗುರಿಯಾಗಿಸಿ ‘ಕಮ್ಯುನಲಿಸ್ಟ್ ‘ ಎಂದು ಸಂದೇಶದಲ್ಲಿ ಕರೆಯಲಾಗಿತ್ತು. 

ಸರ್ಕಾರದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಧಿಕೃತ ಗ್ರೂಪ್‌ನಲ್ಲಿ ಸರ್ಕಾರಿ ನೌಕರನೊಬ್ಬ ಇಂತಹ ರಾಜಕೀಯ ಹೇಳಿಕೆ ನೀಡಿರುವುದನ್ನು ಗ್ರೂಪ್‌ನಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಪ್ರಶ್ನಿಸಿದ್ದರು. ಇದರ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಲೀಕ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಸ್ಪಿ ಭರತ್ ರೆಡ್ಡಿ ನಿರ್ದೇಶನದ ಮೇರೆಗೆ ಜಿಲ್ಲಾ ಅಪರಾಧ ವಿಭಾಗದ ಡಿವೈಎಸ್ಪಿ ಬಾಲಚಂದ್ರನ್ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಪೊಲೀಸ್ ಸಿಬ್ಬಂದಿ ಯಾವುದೇ ಕಾರಣಕ್ಕೂ ರಾಜಕೀಯ ಹೇಳಿಕೆಗಳನ್ನು ನೀಡಬಾರದು ಮತ್ತು ಇಲಾಖೆಯ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಈ ಹಿಂದೆ ಅಳಿಕೋಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮುಸ್ಲಿಂ ಲೀಗ್ ನಾಯಕ ಕೆ.ಎಂ. ಶಾಜಿ ಅವರು ಸದ್ಯ ಮಲಪ್ಪುರಂ ಜಿಲ್ಲೆಯ ವೆಂಗಾರ ಕ್ಷೇತ್ರದ ಶಾಸಕನಾಗಿದ್ದು ಅವರ ವಿರುದ್ಧ ಪೋಸ್ಟ್ ಹಾಕಿದ್ದು ಪೊಲೀಸ್ ಅಧಿಕಾರಿಗೆ ದುಬಾರಿಯಾಗಿದೆ.‌