ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ; ತಮಿಳುನಾಡಿನಲ್ಲಿ ತೀವ್ರ ಸಂಚಲನ ಎಬ್ಬಿಸಿದ್ದ ಪ್ರಕರಣ, ಆರೋಪಿಗೆ ಡಬಲ್ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ

26-05-26 11:56 am       HK News Staffer   ಕ್ರೈಂ

ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ಹಾಗೂ ಸಂಚಲನ ಸೃಷ್ಟಿಸಿದ್ದ 12ನೇ ತರಗತಿ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಧರ್ಮ ಮುನೀಶ್ವರನ್‌ ಎಂಬಾತನಿಗೆ ತೂತುಕುಡಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ ಡಬಲ್ ಮರಣದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.

ಚೆನ್ನೈ, ಮೇ 26: ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ಹಾಗೂ ಸಂಚಲನ ಸೃಷ್ಟಿಸಿದ್ದ 12ನೇ ತರಗತಿ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಧರ್ಮ ಮುನೀಶ್ವರನ್‌ ಎಂಬಾತನಿಗೆ ತೂತುಕುಡಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ ಡಬಲ್ ಮರಣದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. 

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶೆ ಪ್ರೀತಾ ಅವರು, “ಪ್ರಾಸಿಕ್ಯೂಷನ್ ಆರೋಪಿಯ ಮೇಲಿನ ಎಲ್ಲಾ ಅಪರಾಧಗಳನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದೆ. ಈ ಕ್ರೂರ ಅಪರಾಧವು ಸಮಾಜದ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ” ಎಂದು ಬಣ್ಣಿಸಿ ಎರಡು ಗಲ್ಲು ಶಿಕ್ಷೆಯ ಆದೇಶ ಪ್ರಕಟಿಸಿದರು. ಅತ್ಯಾಚಾರ ಮತ್ತು ಕೊಲೆಗೆ ಮರಣದಂಡನೆ ವಿಧಿಸುವುದರ ಜೊತೆಗೆ, ಬಾಲಕಿಗೆ ಗಂಭೀರ ದೈಹಿಕ ಗಾಯ ಉಂಟು ಮಾಡಿ ದೌರ್ಜನ್ಯ ಎಸಗಿದ್ದಕ್ಕಾಗಿ ಒಂದು ವರ್ಷದ ಕಠಿಣ ಜೈಲು ಶಿಕ್ಷೆಯನ್ನೂ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಕೀಲೆ ಎಲ್ಲಮ್ಮಾಳ್ ಕಿಸ್ಸಿಂಜರ್ ಅವರು ಗರಿಷ್ಠ ಶಿಕ್ಷೆಗಾಗಿ ಬಲವಾದ ವಾದ ಮಂಡಿಸಿದ್ದರು. 

ತೂತುಕುಡಿ ಜಿಲ್ಲೆಯ ವಿಲಾತಿಕುಲಂ ಬಳಿಯ ವೇದನಾಥಂ ಗ್ರಾಮದ ವಿದ್ಯಾರ್ಥಿನಿ 2026ರ ಮಾರ್ಚ್ 10ರಂದು ನಾಪತ್ತೆಯಾಗಿದ್ದಳು. ಆ ರಾತ್ರಿಯೇ ಪೋಷಕರು ಕುಲತ್ತೂರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ನಿರ್ಲಕ್ಷ್ಯ ವಹಿಸಿ ಮರುದಿನ ಮಹಿಳಾ ಪೊಲೀಸ್ ಠಾಣೆಗೆ ಹೋಗುವಂತೆ ಕಳುಹಿಸಿದ್ದರು. ಮರುದಿನ ಮಹಿಳಾ ಠಾಣೆಗೆ ಹೋದಾಗಲೂ ವ್ಯಾಪ್ತಿಯ ನೆಪ ಹೇಳಿ ವಿಳಂಬ ಮಾಡಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ವೇದನಾಥಂ ಅರಣ್ಯದಲ್ಲಿ ಬಾಲಕಿಯ ಶವ ದೌರ್ಜನ್ಯ ಎಸಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರ ಬೇಜವಾಬ್ದಾರಿತನ ಖಂಡಿಸಿ ಹೆದ್ದಾರಿ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ತೀವ್ರ ಟೀಕೆಗಳ ಬೆನ್ನಲ್ಲೇ, ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮಾರ್ಚ್ 12 ರಂದು ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಪ್ರವೀಣಾ ಅವರನ್ನು ಅಮಾನತುಗೊಳಿಸಲಾಗಿತ್ತು.

ಆರೋಪಿಯ ಬಂಧನಕ್ಕೆ ಆಗ್ರಹಿಸಿ ಸಂತ್ರಸ್ತ ಬಾಲಕಿಯ ಕುಟುಂಬಸ್ಥರು 10 ದಿನಗಳ ಕಾಲ ಶವ ಸ್ವೀಕರಿಸಲು ನಿರಾಕರಿಸಿದ್ದರಿಂದ ಶವ ಶವಾಗಾರದಲ್ಲೇ ಉಳಿಯುವಂತಾಗಿತ್ತು. ಇದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ತಿರುನಲ್ವೇಲಿ ರೇಂಜ್ ಡಿಐಜಿ ಹಾಗೂ ತೂತುಕುಡಿ ಎಸ್‌ಪಿ ಮದನ್ ನೇತೃತ್ವದ 10ಕ್ಕೂ ಹೆಚ್ಚು ವಿಶೇಷ ತಂಡಗಳು ಹುಡುಕಾಟ ನಡೆಸಿದರೂ ಆರಂಭದಲ್ಲಿ ಕೊಲೆಯ ಸುಳಿವು ಸಿಕ್ಕಿರಲಿಲ್ಲ. ಆದರೆ, ಮಾರ್ಚ್ 19 ರಂದು ಅರಣ್ಯದ ಹತ್ತಿರದ ವಿಂಡ್ ಟರ್ಬೈನ್ (ಗಾಳಿ ಯಂತ್ರ) ಒಂದರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಾಯಲ್ಗುಡಿ ಮೂಲದ ಧರ್ಮ ಮುನೀಶ್ವರನ್ ಸಿಕ್ಕಿಬಿದ್ದಿದ್ದ. 

ವಿಚಾರಣೆ ವೇಳೆ ಆರೋಪಿ ಧರ್ಮ ಈಗಾಗಲೇ ವೃದ್ಧ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಮತ್ತೊಂದು ಗಂಭೀರ ಪ್ರಕರಣ ಎದುರಿಸುತ್ತಿರುವುದು ಬೆಳಕಿಗೆ ಬಂದಿತ್ತು. ಆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾಗಲೇ ಶಾಲಾ ಬಾಲಕಿಯನ್ನು ಹೊತ್ತೊಯ್ದು ಭೀಕರ ಕೃತ್ಯ ಎಸಗಿದ್ದನು. ಈತ ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಮೇ 5 ರಂದು ಬಿಗಿ ಭದ್ರತೆಯ ನಡುವೆ ವಿಚಾರಣೆ ಆರಂಭಗೊಂಡು ಮೇ 21ಕ್ಕೆ ಮುಕ್ತಾಯಗೊಂಡಿದ್ದು, ಮೇ 25 ರಂದು ನ್ಯಾಯಾಲಯವು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ನೀಡಲಾದ ಅತ್ಯಂತ ಅಪರೂಪದ ತೀರ್ಪು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.