ಸತ್ಯನಾರಾಯಣ ಪೂಜೆ ಮುಗಿಸಿ ನದಿಗೆ ಇಳಿದವರು ಜಲಸಮಾಧಿ ; ಮಂತ್ರಾಲಯದ ಬಳಿ ಘೋರ ದುರಂತ, ಐವರ ದುರ್ಮರಣ

31-05-26 02:24 pm       HK News Staffer   ಕ್ರೈಂ

ರಾಜ್ಯದಲ್ಲಿ ಜಲ ದುರಂತಗಳ ಸರಣಿ ಮುಂದುವರಿದಿದ್ದು, ಆಂಧ್ರಪ್ರದೇಶದ ಮಂತ್ರಾಲಯ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ರಾಯಚೂರು, ಮೇ 31: ರಾಜ್ಯದಲ್ಲಿ ಜಲ ದುರಂತಗಳ ಸರಣಿ ಮುಂದುವರಿದಿದ್ದು, ಆಂಧ್ರಪ್ರದೇಶದ ಮಂತ್ರಾಲಯ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮೃತರನ್ನು ಹೈದರಾಬಾದ್ ಮೂಲದ ಯುವನ ಚಂದ್ರ (5), ಸತೀಶ್ (35), ಮಂತ್ರಾಲಯ ಗ್ರಾಮದ ರಾಘವೇಂದ್ರ (25), ಧನುಷ್ (23) ಹಾಗೂ ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸತ್ಯನಾರಾಯಣ ಪೂಜೆ ಬಳಿಕ ಸಂಭವಿಸಿದ ದುರಂತ:

ಮಂತ್ರಾಲಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಬಂದಿದ್ದ ಕುಟುಂಬಸ್ಥರು ಮತ್ತು ಸಂಬಂಧಿಕರು ಕಾರ್ಯಕ್ರಮದ ಬಳಿಕ ತುಂಗಭದ್ರಾ ನದಿಗೆ ತೆರಳಿದ್ದರು. ಈ ವೇಳೆ ನದಿಯ ಆಳ ಹಾಗೂ ಹರಿವಿನ ತೀವ್ರತೆಯನ್ನು ಅರಿಯದೆ ನೀರಿಗೆ ಇಳಿದ ಪರಿಣಾಮ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಆಂಧ್ರಪ್ರದೇಶ ಎಸ್‌ಡಿಆರ್‌ಎಫ್ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು. ಮೊದಲಿಗೆ ಧನುಷ್ ಅವರ ಮೃತದೇಹ ಪತ್ತೆಯಾಗಿದ್ದು, ಬಳಿಕ ಸತೀಶ್ ಹಾಗೂ ಅವರ ಪುತ್ರ ಯುವನ ಚಂದ್ರನ ಮೃತದೇಹಗಳು ಪತ್ತೆಯಾಗಿದ್ದವು. ನಂತರ ರಾಘವೇಂದ್ರ ಮತ್ತು ಸಂಧ್ಯಾ ಅವರ ಮೃತದೇಹಗಳನ್ನೂ ಪತ್ತೆಹಚ್ಚಲಾಗಿದೆ.

ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ:

ಘಟನೆಯಲ್ಲಿ ಐವರು ಜೀವ ಕಳೆದುಕೊಂಡಿರುವುದು ಕುಟುಂಬಸ್ಥರನ್ನು ತೀವ್ರ ದುಃಖಕ್ಕೆ ತಳ್ಳಿದೆ. ಪೂಜೆಯ ಸಂಭ್ರಮದಲ್ಲಿ ಒಂದಾಗಿದ್ದ ಕುಟುಂಬ ಕ್ಷಣಾರ್ಧದಲ್ಲಿ ಶೋಕ ಸಾಗರದಲ್ಲಿ ಮುಳುಗಿದ್ದು, ಸಂಬಂಧಿಕರ ಆಕ್ರಂದನ ಮನಕಲಕುವಂತಿದೆ.

ರಾಜ್ಯದಲ್ಲಿ ಮುಂದುವರಿದ ಜಲ ದುರಂತಗಳ ಸರಣಿ:

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಜಲ ದುರಂತಗಳು ಹೆಚ್ಚಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪ ಕಪ್ಪೆ ಚಿಪ್ಪು ಸಂಗ್ರಹಿಸಲು ತೆರಳಿದ್ದ 11 ಮಂದಿ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ.

ಅದರ ಬೆನ್ನಲ್ಲೇ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿಯಾಗಿದ್ದರು. ಇದೀಗ ತುಂಗಭದ್ರಾ ನದಿಯಲ್ಲಿ ಐವರು ಮೃತಪಟ್ಟಿರುವ ಘಟನೆ ರಾಜ್ಯವನ್ನು ಮತ್ತೆ ಬೆಚ್ಚಿಬೀಳಿಸಿದೆ.