ಮೊಬೈಲ್ ಚಟ ಬಿಟ್ಟು ಬಿಡುವಂತೆ ಗದರಿದ ತಾಯಿ; ಸುಳ್ಯದಲ್ಲಿ ಮನೆಯನ್ನೇ ಬಿಟ್ಟು ತೆರಳಿದ 16ರ ಬಾಲಕ ನಾಪತ್ತೆ

02-06-26 09:27 pm       HK News Staffer   ಕ್ರೈಂ

ಮೊಬೈಲ್ ಚಟ ಬಿಡುವಂತೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ನೊಂದುಕೊಂಡ 16 ವರ್ಷದ ಬಾಲಕ ಮನೆಯನ್ನೇ ಬಿಟ್ಟು ನಿಗೂಢ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ನಡೆದಿದೆ.

ಸುಳ್ಯ, ಜೂನ್ 2: ಮೊಬೈಲ್ ಚಟ ಬಿಡುವಂತೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ನೊಂದುಕೊಂಡ 16 ವರ್ಷದ ಬಾಲಕ ಮನೆಯನ್ನೇ ಬಿಟ್ಟು ನಿಗೂಢ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ನಡೆದಿದೆ. 

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿಯಾಗಿದ್ದು, ಪ್ರಸ್ತುತ ಸುಳ್ಯದ ಬೋರುಗುಡ್ಡೆಯಲ್ಲಿ ಪೋಷಕರೊಂದಿಗೆ ವಾಸವಿದ್ದ ಸೈಯದ್ ಆಲಿ ಸೈಯದ್ ಗೌಸ (16) ನಾಪತ್ತೆಯಾದ ಬಾಲಕ. ಬಾಲಕನ ತಾಯಿ ಸಲ್ಮಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಕೆ ಪತಿ ಹಾಗೂ ಮಗನೊಂದಿಗೆ ವಾಸವಿದ್ದಾರೆ. ಮೇ 30ರಂದು ಬೆಳಗ್ಗೆ ಬಾಲಕ ಸೈಯದ್ ಆಲಿ ಸತತವಾಗಿ ಮೊಬೈಲ್ ನೋಡುತ್ತಿದ್ದುದಕ್ಕೆ ತಾಯಿ ಬೈದು, ಮೊಬೈಲ್ ನೋಡುವುದನ್ನೇ ಬಿಟ್ಟು ಬಿಡಬೇಕೆಂದು ಬುದ್ಧಿಮಾತು ಹೇಳಿದ್ದರು. ಇದರಿಂದ ನೊಂದಿದ್ದ ಬಾಲಕ, ಸ್ವಲ್ಪ ಸಮಯದ ಬಳಿಕ ಯಾರಿಗೂ ಹೇಳದೆ ಮನೆಯಿಂದ ತೆರಳಿದ್ದಾನೆ. 

ಎಷ್ಟು ಹೊತ್ತಾದರೂ ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಪೋಷಕರು, ಆತನ ಗೆಳೆಯರ ಬಳಿ, ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಯಾವುದೇ ಸುಳಿವು ಲಭ್ಯವಾಗದೆ ತಾಯಿ ಸಲ್ಮಾ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಳ್ಯ ಪೊಲೀಸರು ಅಪರಾಧ ಕ್ರಮಾಂಕ: 73/2026, ಕಲಂ: 137 (2) BNS ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.