ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 98 ಲಕ್ಷ ರೂ. ದೋಚಿದ ಸೈಬರ್ ಖದೀಮರು ; ಚಿನ್ನದ ಮೇಲೆ ಸಾಲ ಪಡೆದು ವಂಚಕರ ಖಾತೆಗೆ ಹಣ ಜಮಾ ಮಾಡಿದ ಅಜ್ಜಿ !

08-06-26 10:41 pm       HK News Desk   ಕ್ರೈಂ

ಸೈಬರ್ ವಂಚಕರು ಇದೀಗ ಐಪಿಎಸ್ ಅಧಿಕಾರಿಗಳ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು, ಜೂನ್ 8: ಸೈಬರ್ ವಂಚಕರು ಇದೀಗ ಐಪಿಎಸ್ ಅಧಿಕಾರಿಗಳ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರ ಡಿಸಿಪಿ ಎಂದು ನಂಬಿಸಿ 60 ವರ್ಷದ ಮಹಿಳೆಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿ ಬರೋಬ್ಬರಿ 98.40 ಲಕ್ಷ ರೂಪಾಯಿ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ.

ಬೊಮ್ಮನಹಳ್ಳಿ ನಿವಾಸಿ ಸ್ವರ್ಣಲತಾ ಡಿ.ಎಸ್ (60) ವಂಚನೆಗೆ ಒಳಗಾದವರಾಗಿದ್ದು, ಅವರ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸುಪ್ರೀಂ ಕೋರ್ಟ್ ವಾರಂಟ್ ಇದೆ’ ಎಂದು ಬೆದರಿಕೆ ; 

ಮಾರ್ಚ್ 18ರಂದು ಮಹಿಳೆಗೆ ವಾಟ್ಸಾಪ್ ಕರೆ ಮಾಡಿದ್ದ ಸೈಬರ್ ಖದೀಮ, ತಾನು ದೆಹಲಿ ಪೊಲೀಸ್ ಇಲಾಖೆಯ ಡಿಸಿಪಿ ಭೀಷಮ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಮಹಿಳೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ.

ಇದರ ಜೊತೆಗೆ, “ನಿಮ್ಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ತನಿಖೆಗೆ ಸಹಕರಿಸದಿದ್ದರೆ ನಿಮ್ಮ ಕುಟುಂಬಕ್ಕೂ ಸಮಸ್ಯೆಯಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾನೆ.

ವಿಡಿಯೋ ಕಾಲ್‌ನಲ್ಲಿ ಪೊಲೀಸರಂತೆ ನಾಟಕ;

ನಂತರ ಮತ್ತೊಬ್ಬ ಆರೋಪಿ ‘ರವಿಕುಮಾರ್’ ಎಂಬ ಹೆಸರಿನಲ್ಲಿ ಕರೆ ಮಾಡಿ, ಮಹಿಳೆಯನ್ನು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ್ದಾನೆ. ಡಿಸಿಪಿ ಎಂದು ಹೇಳಿಕೊಂಡ ವ್ಯಕ್ತಿಯೊಂದಿಗೆ ವಿಡಿಯೋ ಕಾಲ್ ನಡೆಸಿ, ನಿಜವಾಗಿಯೂ ಪೊಲೀಸ್ ಅಧಿಕಾರಿಗಳೇ ಮಾತನಾಡುತ್ತಿರುವಂತೆ ನಂಬಿಕೆ ಮೂಡಿಸಿದ್ದಾರೆ.

ಪ್ರತಿದಿನ ತಮ್ಮ ಚಟುವಟಿಕೆಗಳ ಮಾಹಿತಿ ನೀಡಬೇಕು ಹಾಗೂ ವಿಚಾರಣೆಗಾಗಿ ದೆಹಲಿಗೆ ಹಾಜರಾಗಬೇಕು ಎಂದು ಸೂಚಿಸಿ, ಮಹಿಳೆಯನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸಿದ್ದಾರೆ.

ಚಿನ್ನದ ಮೇಲೆ ಸಾಲ ಪಡೆದು ಹಣ ವರ್ಗಾವಣೆ:

‘ತನಿಖೆಗಾಗಿ ಬ್ಯಾಂಕ್ ಖಾತೆ ಪರಿಶೀಲನೆ ಅಗತ್ಯ. ನಿಮ್ಮ ಖಾತೆಯಲ್ಲಿರುವ ಹಣವನ್ನು ನಮ್ಮ ಸೂಚನೆಯ ಖಾತೆಗೆ ವರ್ಗಾಯಿಸಿ. ತನಿಖೆ ಪೂರ್ಣಗೊಂಡ ಬಳಿಕ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುವುದು’ ಎಂದು ನಂಬಿಸಿದ್ದಾರೆ.

ಸೈಬರ್ ಖದೀಮರ ಮಾತು ನಂಬಿದ ಮಹಿಳೆ, ತಮ್ಮ ಉಳಿತಾಯದ ಹಣ ಮಾತ್ರವಲ್ಲದೆ ಚಿನ್ನದ ಮೇಲೆ ಸಾಲ ಪಡೆದು ಬಂದ ಹಣವನ್ನೂ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ಎರಡು ತಿಂಗಳಲ್ಲಿ 98.40 ಲಕ್ಷ ರೂ. ಕಳವು

ಮಾರ್ಚ್ 24ರಿಂದ ಮೇ 29ರವರೆಗೆ ಹಂತ ಹಂತವಾಗಿ ಆರ್‌ಟಿಜಿಎಸ್ ಮೂಲಕ ಒಟ್ಟು 98.40 ಲಕ್ಷ ರೂಪಾಯಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಆರೋಪಿಗಳು ವಂಚನೆ ಎಸಗಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐಟಿ ಕಾಯ್ದೆ ಹಾಗೂ ಸಂಬಂಧಿತ ಕಲಂಗಳಡಿ ತನಿಖೆ ಮುಂದುವರಿಸಿದ್ದಾರೆ.

ಪೊಲೀಸ್, ಸಿಬಿಐ, ಇಡಿ ಅಥವಾ ನ್ಯಾಯಾಲಯಗಳು ವಾಟ್ಸಾಪ್ ಕರೆ ಮೂಲಕ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಯಾವುದೇ ತನಿಖೆಯ ಹೆಸರಿನಲ್ಲಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಸೂಚಿಸುವುದಿಲ್ಲ. ಅಪರಿಚಿತರಿಂದ ಇಂತಹ ಕರೆ ಬಂದರೆ ತಕ್ಷಣ ಕರೆ ಕಡಿತಗೊಳಿಸಿ 1930 ಸೈಬರ್ ಹೆಲ್ಪ್‌ಲೈನ್ ಅಥವಾ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ. ಭಯ ಅಥವಾ ಆತಂಕದಲ್ಲಿ ಹಣ ವರ್ಗಾವಣೆ ಮಾಡುವ ಮುನ್ನ ಕುಟುಂಬ ಸದಸ್ಯರು ಅಥವಾ ಪೊಲೀಸರ ಸಲಹೆ ಪಡೆಯುವುದು ಅತ್ಯಗತ್ಯ.