ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾಜಿಕ ಕಾರ್ಯಕರ್ತೆ ಮಹಿಳೆ ವಿರುದ್ಧ ಬರ್ಕೆ ಠಾಣೆಯಲ್ಲಿ ಕೇಸು ದಾಖಲು

08-06-26 11:10 pm       HK News Desk   ಕ್ರೈಂ

ಬಂಟ ಮತ್ತು ಬಿಲ್ಲವ ಜಾತಿಗಳನ್ನು ಗುರಿಯಾಗಿಸಿ ಅವಮಾನಕಾರಿ ರೀತಿಯಲ್ಲಿ ಹೇಳಿಕೆ ನೀಡಿ ಜಾಲತಾಣದಲ್ಲಿ ವೈರಲ್ ಮಾಡಿರುವ ಆರೋಪದಲ್ಲಿ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಜೂನ್ 8: ಬಂಟ ಮತ್ತು ಬಿಲ್ಲವ ಜಾತಿಗಳನ್ನು ಗುರಿಯಾಗಿಸಿ ಅವಮಾನಕಾರಿ ರೀತಿಯಲ್ಲಿ ಹೇಳಿಕೆ ನೀಡಿ ಜಾಲತಾಣದಲ್ಲಿ ವೈರಲ್ ಮಾಡಿರುವ ಆರೋಪದಲ್ಲಿ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆಯ ರಾಕೇಶ್ ಎಂಬವರು ಬರ್ಕೆ ಠಾಣೆಗೆ ದೂರು ನೀಡಿ, ಅನಿತಾ ಎಂಬ ಮಹಿಳೆ ತನ್ನ ಫೇಸ್ಬುಕ್ ನಲ್ಲಿ ವಿಡಿಯೋ ಹರಿಯಬಿಟ್ಟು ಶೆಟ್ಟಿ ಮತ್ತು ಬಿಲ್ಲವ ಜಾತಿಯವರಷ್ಟು ಹಲ್ಕಟ್ ಬೇರೆ ಯಾರೂ ಇಲ್ಲ. ಇವರಿಗಿಂತ ಮುಸ್ಲಿಮರು ಆಗಬಹುದು, ಏನಾದ್ರೂ ಸಹಾಯ ಮಾಡುತ್ತಾರೆ ಎಂದು ನಿಂದಿಸಿ ವಿಡಿಯೋ ಮಾಡಿದ್ದಾರೆ. ಜಾತಿಗಳ ಮಧ್ಯೆ ವೈಷಮ್ಯ ಮೂಡಿಸಿ ಪ್ರಚೋದನಕಾರಿ ರೀತಿಯಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. 



ಇದರಂತೆ ಬರ್ಕೆ ಠಾಣೆಯಲ್ಲಿ ಅನಿತಾ ಕಾಸರಗೋಡು ಎಂಬ ಮಹಿಳೆ ವಿರುದ್ಧ ಕಲಂ 196, 353(2) ಮತ್ತು 352 ಅಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಇದೇ ವೇಳೆ, ಬಿರುವೆರ್ ಕುಡ್ಲ ಸಂಸ್ಥಾಪಕ, ಅಧ್ಯಕ್ಷ ಉದಯ ಪೂಜಾರಿ ಅವರು ಅನಿತಾ ಕಾಸರಗೋಡು ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಅವರ ಹೇಳಿಕೆಯಿಂದ ಲಕ್ಷಾಂತರ ಬಿಲ್ಲವ ಹಾಗೂ ಬಂಟ ಸಮುದಾಯದ ಜನರ ಧಾರ್ಮಿಕ ಮತ್ತು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವಂತಹ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ತ್ವರಿತ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.