ಮಂಜೇಶ್ವರ; ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಾಲಕಿಯರು ಸೇರಿ ನಾಲ್ವರು ವಿದ್ಯಾರ್ಥಿಗಳು ಏಕಕಾಲದಲ್ಲಿ ನಾಪತ್ತೆ ! ಪೊಲೀಸರ ತನಿಖೆ

14-06-26 05:08 pm       HK News Staffer   ಕ್ರೈಂ

ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಂದೇ ದಿನ ಇಬ್ಬರು ಹೆಣ್ಮಕ್ಕಳು ಸೇರಿ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ದಿಢೀರ್ ಕಣ್ಮರೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಾಸರಗೋಡು, ಜೂನ್ 14: ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಂದೇ ದಿನ ಇಬ್ಬರು ಹೆಣ್ಮಕ್ಕಳು ಸೇರಿ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ದಿಢೀರ್ ಕಣ್ಮರೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಕುಂಜತ್ತೂರಿನ ಸ್ವಾಗತ್ ಹೊಟೇಲ್ ಬಳಿಯ ನಿವಾಸಿಗಳಾದ ಯಾಸಿರ್ ಹುಸೇನ್ (16) ಮತ್ತು ಆತನ ಸ್ನೇಹಿತ ಸುಲ್ತಾನ್ (15) ಎಂಬಿಬ್ಬರು ಶನಿವಾರ ಸಂಜೆ 5.30 - 6 ಗಂಟೆ ಸುಮಾರಿಗೆ ಕಾಣೆಯಾಗಿದ್ದಾರೆ. ಇವರು ಹತ್ತಿರದ ಸಂಬಂಧಿಕರಾಗಿದ್ದು ಏಕಕಾಲದಲ್ಲಿ ನಾಪತ್ತೆಯಾಗಿದ್ದರಿಂದ ಹೆತ್ತವರು ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. 

ಮತ್ತೊಂದು ಪ್ರಕರಣದಲ್ಲಿ ವರ್ಕಾಡಿ ನೀರೊಳಿಕೆ ಎಂಬಲ್ಲಿ ಶ್ರೀಮಾತಾ ಬಾಲಿಕಾಶ್ರಮದ ಹಾಸ್ಟೆಲ್ ನಿಂದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದಾರೆ. ಕಾಸರಗೋಡು ಕೇಳುಗುಡ್ಡೆಯ ನಿವಾಸಿ ಕೆ.ವಿ ಅನನ್ಯ (17) ಮತ್ತು ಉರ್ಡೂರು ನಿವಾಸಿ ಅಮೃತಾ (16) ನಾಪತ್ತೆಯಾದವರು. ಶನಿವಾರ ಸಂಜೆ ಹಾಸ್ಟೆಲ್ ನಿಂದ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದು ಬಾಲಿಕಾಶ್ರಮದ ವತಿಯಿಂದ ಪೊಲೀಸ್ ದೂರು ನೀಡಲಾಗಿದೆ. ಇವರ ಬಗ್ಗೆ ಮಾಹಿತಿ ಲಭಿಸಿದಲ್ಲಿ ಮಂಜೇಶ್ವರ ಠಾಣೆಗೆ ಮಾಹಿತಿ ನೀಡಲು ತಿಳಿಸಲಾಗಿದೆ.