ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ ಮಾಡಿಕೊಟ್ಟ ಪೊಲೀಸ್ ಅರೆಸ್ಟ್, ಏಜಂಟರನ್ನು ನಂಬಿ ಕುತ್ತು ತಂದುಕೊಂಡ ಪೊಲೀಸರು, ತನಿಖಾ ತಂಡ ಅಸ್ಸಾಮಿಗೆ !

22-06-26 10:21 pm       HK News Staffer   ಕ್ರೈಂ

ಬಜ್ಪೆ ಠಾಣೆಯಲ್ಲಿ 31 ಮಂದಿಗೆ ಅಕ್ರಮವಾಗಿ ಪೊಲೀಸ್ ಕ್ಲಿಯರೆನ್ಸ್ ನೀಡಲಾಗಿದೆ ಎಂಬ ಪ್ರಕರಣದ ಬಗ್ಗೆ ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ನೇತೃತ್ವದ ಪೊಲೀಸರು ಸಮಗ್ರ ತನಿಖೆಗೆ ಮುಂದಾಗಿದ್ದಾರೆ. ಇದೀಗ ತನಿಖೆಯ ಪ್ರವರ ತಿಳಿಯುತ್ತಲೇ ಠಾಣಾಧಿಕಾರಿಯ ಐಡಿಯನ್ನು ದುರುಪಯೋಗ ಮಾಡಿದ ಆರೋಪದಲ್ಲಿ ಬಜ್ಪೆ ಠಾಣೆಯ ಕಾನ್ಸ್ ಟೇಬಲ್ ಮಂಜುನಾಥ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

ಮಂಗಳೂರು, ಜೂನ್ 22: ಬಜ್ಪೆ ಠಾಣೆಯಲ್ಲಿ 31 ಮಂದಿಗೆ ಅಕ್ರಮವಾಗಿ ಪೊಲೀಸ್ ಕ್ಲಿಯರೆನ್ಸ್ ನೀಡಲಾಗಿದೆ ಎಂಬ ಪ್ರಕರಣದ ಬಗ್ಗೆ ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ನೇತೃತ್ವದ ಪೊಲೀಸರು ಸಮಗ್ರ ತನಿಖೆಗೆ ಮುಂದಾಗಿದ್ದಾರೆ. ಇದೀಗ ತನಿಖೆಯ ಪ್ರವರ ತಿಳಿಯುತ್ತಲೇ ಠಾಣಾಧಿಕಾರಿಯ ಐಡಿಯನ್ನು ದುರುಪಯೋಗ ಮಾಡಿದ ಆರೋಪದಲ್ಲಿ ಬಜ್ಪೆ ಠಾಣೆಯ ಕಾನ್ಸ್ ಟೇಬಲ್ ಮಂಜುನಾಥ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

ಜೂನ್ 9ರಿಂದ 12ರ ಮೂರು ದಿನಗಳ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ಅಸ್ಸಾಂ ಮೂಲದ 31 ಮಂದಿಗೆ ಬಜ್ಪೆ ಠಾಣೆಯಿಂದ ಪೊಲೀಸ್ ಕ್ಲಿಯರೆನ್ಸ್ ನೀಡಲಾಗಿತ್ತು. ಎಂಆರ್ ಪಿಎಲ್ ಅಥವಾ ಇನ್ನಿತರ ದೊಡ್ಡ ಕಂಪನಿಗಳು ಹೊರ ರಾಜ್ಯದ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ಕ್ರಿಮಿನಲ್ ಹಿನ್ನೆಲೆ ಇಲ್ಲ ಎನ್ನುವ ಬಗ್ಗೆ ಸ್ಥಳೀಯ ಠಾಣೆಯಿಂದ ಸರ್ಟಿಫಿಕೇಟ್ ತರಬೇಕಾಗುತ್ತದೆ. ಇದೇ ಕಾರಣಕ್ಕೆ ಸ್ಥಳೀಯ ಏಜಂಟರ ಮೂಲಕ 31 ಮಂದಿ ಬಜ್ಪೆ ಠಾಣೆಗೆ ಅರ್ಜಿ ಸಲ್ಲಿಸಿ ಸರ್ಟಿಫಿಕೇಟ್ ಪಡೆದಿದ್ದರು. 

ಎಂಆರ್ ಪಿಎಲ್ ಗುತ್ತಿಗೆ ನೌಕರರಾಗಿದ್ದು, ಉತ್ತರ ಭಾರತದಿಂದ ಬರುವ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಮಾಡಿಕೊಡುತ್ತಿದ್ದ ಭರತ್ ಎಕ್ಕಾರು ಮತ್ತು ರಾಮಚರಣ್ ಬಿಸ್ವಾಸ್ ಎನ್ನುವವರು ಪೊಲೀಸ್ ಸಿಬಂದಿ ಮೂಲಕ ಈ ಕೆಲಸ ಮಾಡಿಸಿದ್ದರು ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ಇವರಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದಿದ್ದವರ ಪೈಕಿ ಅಸ್ಸಾಂ ಮೂಲದ ಇಬ್ಬರು ಕಾರವಾರದ ಸೇನಾ ನೆಲೆಯಲ್ಲಿ ಗುತ್ತಿಗೆ ಕಾರ್ಮಿಕ ಹುದ್ದೆಗೆ ಅರ್ಜಿ ಹಾಕಿದ್ದರು. ಅದಕ್ಕೆ ಮಂಗಳೂರಿನ ಬಜ್ಪೆ ಠಾಣೆಯಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ತೋರಿಸಲಾಗಿತ್ತು. ಆದರೆ, ಸ್ಥಳೀಯ ಠಾಣೆಯಿಂದ ಬಿಟ್ಟು ಹೊರ ಜಿಲ್ಲೆಯಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ತೋರಿಸಿದ್ದು ಸಂಶಯಕ್ಕೆ ಕಾರಣವಾಗಿತ್ತು. ಈ ವಿಷಯ ತಿಳಿಯುತ್ತಲೇ ಕಾರವಾರ ಪೊಲೀಸರು ಮಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಬಗ್ಗೆ ಬಜ್ಪೆ ಠಾಣೆಯಲ್ಲಿ ಪರಿಶೀಲನೆ ನಡೆಸಿದಾಗ, ಮೂರು ದಿನಗಳ ಅವಧಿಯಲ್ಲಿ 31 ಜನರಿಗೆ ಅಕ್ರಮವಾಗಿ ಸರ್ಟಿಫಿಕೇಟ್ ನೀಡಿರುವುದು ಮತ್ತು ಈ ಬಗ್ಗೆ ಠಾಣೆಯಲ್ಲಿ ನಮೂದು ಮಾಡದಿರುವುದು ಬೆಳಕಿಗೆ ಬಂದಿತ್ತು.

ಠಾಣೆಯಲ್ಲಿ ಎಂಟ್ರಿಯೇ ಇರಲಿಲ್ಲ

ಬಜ್ಪೆ ಮತ್ತು ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಹಲವಾರು ಕಂಪನಿಗಳು ಇರುವುದರಿಂದ ಹೊರ ರಾಜ್ಯದವರು ತಾತ್ಕಾಲಿಕ ವಾಸದ ನೆಪದಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಮಾಮೂಲಿ ಆಗಿದೆ. ಕೆಲವೊಂದು ದಿನಗಳಲ್ಲಿ 10ಕ್ಕೂ ಹೆಚ್ಚು ಮಂದಿಗೆ ಕ್ಲಿಯರೆನ್ಸ್ ಕೊಡುವುದು ನಡೆಯುತ್ತದೆ. ಆದರೆ ಈ ರೀತಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುವ ಮೊದಲು ಆಯಾ ವ್ಯಕ್ತಿಯ ಬಗ್ಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ ಎನ್ನುವ ಬಗ್ಗೆ ಪೊಲೀಸ್ ಇಲಾಖೆಯ ಪೋರ್ಟಲ್ ನಲ್ಲಿ ವಿಚಾರಿಸಬೇಕು. ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ ಮೂಲದವರಾದರೆ ಅವರ ವಿಳಾಸ ಆಧರಿಸಿ ಆಯಾ ಠಾಣೆಯಿಂದ ಎನ್ಓಸಿ ತೆಗೆದುಕೊಳ್ಳಬೇಕಾಗುತ್ತದೆ.   

ಆದರೆ ಈ 31 ಮಂದಿಯ ಪ್ರಕರಣದಲ್ಲಿ ಬಜ್ಪೆ ಪೊಲೀಸರು ನಿಗದಿತ ಮಾನದಂಡವನ್ನು ಪಾಲನೆ ಮಾಡಿರಲಿಲ್ಲ. ಮೂರು ದಿನಗಳ ಅವಧಿಯಲ್ಲಿ ಒಟ್ಟು 33 ಮಂದಿಗೆ ಬಜ್ಪೆ ಠಾಣೆಯಿಂದ ಕ್ಲಿಯರೆನ್ಸ್ ಕೊಟ್ಟಿದ್ದರೂ ಇಬ್ಬರ ಬಗ್ಗೆ ಮಾತ್ರ ಠಾಣೆಯಲ್ಲಿ ನಮೂದಿಸಲಾಗಿತ್ತು. ಈ ಪೈಕಿ 20 ಮಂದಿ ಉತ್ತರ ಪ್ರದೇಶದವರಾಗಿದ್ದು, 11 ಮಂದಿ ಅಸ್ಸಾಂ ಮೂಲದ ಕಾರ್ಮಿಕರಾಗಿದ್ದು ಎಲ್ಲರೂ ಸದ್ಯಕ್ಕೆ ಎಂಆರ್ ಪಿಎಲ್ ಕಂಪನಿಯಲ್ಲಿ ಕೆಲಸಕ್ಕಿದ್ದಾರೆ ಎನ್ನುವ ಮಾಹಿತಿಯನ್ನು ಬಜ್ಪೆ ಪೊಲೀಸರು ನೀಡಿದ್ದಾರೆ. ಸಂಶಯ ಬಂದ ಕೂಡಲೇ ಇವರನ್ನು ಕರೆಸಿ ಠಾಣೆಯಲ್ಲಿ ವಿಚಾರಣೆ ನಡೆಸಿದ್ದು, ಏಜಂಟರ ಮೂಲಕ ಸರ್ಟಿಫಿಕೇಟ್ ಮಾಡಿಸಿದ್ದಾಗಿ ಮಾಹಿತಿ ನೀಡಿದ್ದರು. ಹೀಗಾಗಿ ಏಜಂಟರಾಗಿದ್ದ ಭರತ್ ಎಕ್ಕಾರು ಮತ್ತು ರಾಮಚರಣ್ ಬಿಸ್ವಾಸ್ ಎಂಬಿಬ್ಬರನ್ನು ಮತ್ತು ಇದಕ್ಕೆ ಸಹಕರಿಸಿದ ಬಜ್ಪೆ ಠಾಣೆಯ ಮಂಜುನಾಥ್ ಎಂಬ ಸಿಬಂದಿಯನ್ನು ಬಂಧಿಸಲಾಗಿದೆ.

ಪೊಲೀಸ್ ತನಿಖಾ ತಂಡ 31 ಮಂದಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಅಸ್ಸಾಂ ಮತ್ತು ಉತ್ತರ ಪ್ರದೇಶಕ್ಕೂ ತೆರಳಿದ್ದಾರೆ. ಅವರ ಹಿನ್ನೆಲೆ, ಕ್ರಿಮಿನಲ್ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಇವರಿಗೆ ದೇಶದ್ರೋಹದ ಕೃತ್ಯ, ಇನ್ನಿತರ ಕ್ರಿಮಿನಲ್ ಹಿನ್ನೆಲೆ ಇದೆಯೆಂಬ ಮಾಹಿತಿಗಳಿದ್ದವು.