ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್‌-ಇನ್ ರಿಲೇಷನ್ ಶಿಪ್ ವಿರೋಧಿಸಿದ ಕುಟುಂಬವನ್ನೇ ಫಿನಿಷ್ ಮಾಡಿದ ರಾಕ್ಷಸಿ ; ಪ್ರಿಯಕರನ ಜೊತೆ ಸೇರಿ ತಂದೆ-ತಾಯಿ, ತಂಗಿಯ ಭೀಕರ ಹತ್ಯೆ !

23-06-26 12:57 pm       HK News Staffer   ಕ್ರೈಂ

ರಾಜಧಾನಿ ಬೆಂಗಳೂರಿನಲ್ಲಿ ಕುಟುಂಬವನ್ನೇ ಬೆಚ್ಚಿಬೀಳಿಸುವಂತಹ ಭೀಕರ ತ್ರಿವಳಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು, ಜೂನ್ 23: ರಾಜಧಾನಿ ಬೆಂಗಳೂರಿನಲ್ಲಿ ಕುಟುಂಬವನ್ನೇ ಬೆಚ್ಚಿಬೀಳಿಸುವಂತಹ ಭೀಕರ ತ್ರಿವಳಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಲಿವ್-ಇನ್ ರಿಲೇಷನ್‌ಶಿಪ್‌ಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ, ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿ ಎಸ್ಕೇಪ್‌ ಆಗಿರುವ ಘಟನೆ ಕೆ.ಆರ್. ಪುರಂ ವ್ಯಾಪ್ತಿಯ ಸಿಗೇಹಳ್ಳಿಯ ಡಾಮ್ನಿಕ್ ಲೇಔಟ್‌ನ ‘ಸಾಯಿ ಗ್ರೀನ್ ಅಪಾರ್ಟ್‌ಮೆಂಟ್’ನಲ್ಲಿ ತಡರಾತ್ರಿ ನಡೆದಿದೆ.

ಸೋಮಸುಂದರ್ (55), ಅವರ ಪತ್ನಿ ಮುತ್ತುಲಕ್ಷ್ಮಿ (48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ (20) ಕೊಲೆಯಾದ ದುರ್ದೈವಿಗಳು. ಪ್ರಕರಣದ ಪ್ರಮುಖ ಆರೋಪಿಗಳಾದ ಸೋಮಸುಂದರ್ ಅವರ ಹಿರಿಯ ಪುತ್ರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಘಟನೆ ಬಳಿಕ ಪರಾರಿಯಾಗಿದ್ದಾರೆ.

ಮಾಹಿತಿಯ ಪ್ರಕಾರ, ಶ್ವೇತಾ ಕಳೆದ ಕೆಲವು ಸಮಯದಿಂದ ಕೆನತ್ ಎಂಬಾತನೊಂದಿಗೆ ಮದುವೆಯಾಗದೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಮಗಳ ಈ ಸಂಬಂಧಕ್ಕೆ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಮಾತನಾಡಿ ಮಗಳನ್ನು ಮನೆಗೆ ವಾಪಸ್ ಕರೆತರಲು ಸೋಮಸುಂದರ್ ಅವರು ಪತ್ನಿ ಮುತ್ತುಲಕ್ಷ್ಮಿ ಹಾಗೂ ಕಿರಿಯ ಮಗಳು ಸುಪ್ರಿಯಾ ಜೊತೆ ಶ್ವೇತಾ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು.

ಮನೆಯೊಳಗೆ ಈ ವಿಚಾರವಾಗಿ ಮಾತುಕತೆ ಆರಂಭವಾದರೂ, ಕೆಲವೇ ಕ್ಷಣಗಳಲ್ಲಿ ಅದು ತೀವ್ರ ವಾಗ್ವಾದಕ್ಕೆ ತಿರುಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪಿದ ವೇಳೆ ಶ್ವೇತಾ ಮತ್ತು ಪ್ರಿಯಕರ ಕೆನತ್ ಇಬ್ಬರೂ ಸೇರಿ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಚಾಕುವಿನಿಂದ ಮನಬಂದಂತೆ ದಾಳಿ ನಡೆಸಿದ್ದಾರೆ.

ದಾಳಿಯ ತೀವ್ರತೆಗೆ ಮುತ್ತುಲಕ್ಷ್ಮಿ ಮತ್ತು ಸುಪ್ರಿಯಾ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ಕೂಡ ರಕ್ತಸ್ರಾವದಿಂದ ನರಳುತ್ತಿದ್ದರೂ, ಅಪಾರ್ಟ್‌ಮೆಂಟ್‌ನಿಂದ ಹೊರಬಂದು ಸಹಾಯಕ್ಕಾಗಿ ಪ್ರಯತ್ನಿಸಿದ್ದಾರೆ. ಮೆಟ್ಟಿಲುಗಳ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕಂಡ ಸ್ಥಳೀಯರು ತಕ್ಷಣ ‘112’ ತುರ್ತು ಸೇವೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಸೋಮಸುಂದರ್ ಅವರನ್ನು ತುರ್ತುವಾಗಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆಗಾಗಿ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಸಾವನ್ನಪ್ಪುವ ಮುನ್ನ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಘಟನೆಯ ಸಂಪೂರ್ಣ ವಿವರವನ್ನು ತಿಳಿಸಿದ್ದಾರೆ.

“ನನ್ನ ದೊಡ್ಡ ಮಗಳು ತನ್ನ ಬಾಯ್‌ಫ್ರೆಂಡ್ ಜೊತೆ ಲಿವಿಂಗ್‌ನಲ್ಲಿ ಇದ್ದಳು. ಇದು ಸರಿಯಲ್ಲ ಎಂದು ಬುದ್ಧಿವಾದ ಹೇಳಲು ಬಂದಿದ್ದೆವು. ಆದರೆ ಮಗಳು ಮತ್ತು ಆಕೆಯ ಬಾಯ್‌ಫ್ರೆಂಡ್ ನಮ್ಮ ಮೇಲೆ ಚಾಕುವಿನಿಂದ ದಾಳಿ ಮಾಡಿದರು. ನನ್ನ ಹೆಂಡತಿ ಮತ್ತು ಚಿಕ್ಕ ಮಗಳು ಮನೆಯೊಳಗಿದ್ದಾರೆ” ಎಂದು ಅವರು ಪೊಲೀಸರ ಮುಂದೆ ಹೇಳಿರುವುದಾಗಿ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೆ.ಆರ್. ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪರಾರಿಯಾಗಿರುವ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಘಟನೆ ಬಗ್ಗೆ ಸೆಕ್ಯುರಿಟಿ ಗಾರ್ಡ್​ ಹೇಳಿದ್ದಿಷ್ಟು:"ಮೊನ್ನೆ ತಂದೆ-ತಾಯಿ ಮತ್ತು ತಂಗಿ ಹಳ್ಳಿಯಿಂದ ಬಂದಿದ್ದಾರೆ ಎಂದು ಅವರನ್ನು ಶ್ವೇತಾ ಮನೆಯೊಳಗೆ ಕರೆದೊಯ್ದಿದ್ದಳು. ಆಕೆಯ ತಂದೆ ಮನೆಯಲ್ಲಿ ಬ್ಯಾಗ್ ಮತ್ತು ಸಾಮಾನುಗಳನ್ನೆಲ್ಲ ಇಟ್ಟು ಮತ್ತೆ ವಾಪಸ್ ಹೊರಗಡೆ ಬಂದಿದ್ದರು. ಅದಾದ ಮೇಲೆ ಮತ್ತೆ ಹೋಗಿದ್ದರು. ನಿನ್ನೆ ಸಂಜೆ ಅವರು ಹೊರಗಡೆ ಸುತ್ತಾಡಿ ಆಮೇಲೆ ಇಲ್ಲಿಗೆ ವಾಪಸ್ ಮನೆಗೆ ಬಂದ ಬಳಿಕ ಈ ರೀತಿಯ ಘಟನೆ ನಡೆದಿದೆ. ನನಗೆ ರಾತ್ರಿ 9 ಗಂಟೆಗೆ ಸುಮಾರಿಗೆ ಈ ರೀತಿ ಘಟನೆಯಾಗಿರುವುದು ಗೊತ್ತಾಗಿದೆ" ಎಂದು ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ವೀರ್ ಬಹದ್ದೂರ್ ಮಾಹಿತಿ ನೀಡಿದ್ದಾರೆ.