ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ ಅವ್ಯವಹಾರ ಮೇಲ್ನೋಟಕ್ಕೆ ಪತ್ತೆ, 20 ಮಂದಿ ಮೇಲೆ ಎಫ್ಐಆರ್ ದಾಖಲಿಸಿ ಆಡಳಿತಾಧಿಕಾರಿ ನೇಮಿಸಲು ಎಸ್ಐಟಿ ಶಿಫಾರಸು

24-06-26 05:57 pm       HK News Staffer   ಕ್ರೈಂ

ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಸಂಗ್ರಹದಲ್ಲಿ 200 ಕೋಟಿ ಗೋಲ್ಮಾಲ್ ಆಗಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವು 150 ಪುಟಗಳ ಪ್ರಾಥಮಿಕ ವರದಿಯನ್ನು ಉತ್ತರ ಪದೇಶ ಸರ್ಕಾರಕ್ಕೆ ಸಲ್ಲಿಸಿದೆ. ಮೂಲಗಳ ಪ್ರಕಾರ, ಅಯೋಧ್ಯೆ ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್‌ನ ಯಾರಿಗೂ ಕ್ಲೀನ್‌ ಚಿಟ್ ನೀಡಿಲ್ಲ. ಜೊತೆಗೆ, 20ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಶಿಫಾರಸು ಮಾಡಿದೆ.

ಲಕ್ನೋ, ಜೂನ್ 24: ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಸಂಗ್ರಹದಲ್ಲಿ 200 ಕೋಟಿ ಗೋಲ್ಮಾಲ್ ಆಗಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವು 150 ಪುಟಗಳ ಪ್ರಾಥಮಿಕ ವರದಿಯನ್ನು ಉತ್ತರ ಪದೇಶ ಸರ್ಕಾರಕ್ಕೆ ಸಲ್ಲಿಸಿದೆ. ಮೂಲಗಳ ಪ್ರಕಾರ, ಅಯೋಧ್ಯೆ ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್‌ನ ಯಾರಿಗೂ ಕ್ಲೀನ್‌ ಚಿಟ್ ನೀಡಿಲ್ಲ. ಜೊತೆಗೆ, 20ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಶಿಫಾರಸು ಮಾಡಿದೆ. 

ಇದಲ್ಲದ, ಕಾಶಿ ವಿಶ್ವನಾಥ ಮಂದಿರದ ಮಾದರಿಯಲ್ಲಿ ಅಯೋಧ್ಯೆ ಆಡಳಿತದ ಮೇಲ್ವಿಚಾರಣೆಗೆ ಪ್ರತ್ಯೇಕ ಟ್ರಸ್ಟ್ ಪುನಾರಚಿಸಿ ಸಿಇಒ
ಮಾದರಿಯಲ್ಲಿ ಆಡಳಿತಾಧಿಕಾರಿ  ನೇಮಕ ಮಾಡುವಂತೆ ಸೂಚಿಸಿದೆ. ಅಯೋಧ್ಯೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಸಹಾಯಕ ರಾಮಶಂಕರ್ ಆಲಿಯಾಸ್ ಚಿನ್ನು ನಿವಾಸದಲ್ಲಿ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಂದಿರದಲ್ಲಿ 200 ಕೋಟಿ ರೂ. ಕಳವಾಗಿರುವ ಬಗ್ಗೆಯೂ ಅಂದಾಜಿಸಲಾಗಿದೆ. 

ಇದು ಗೌಪ್ಯ ತನಿಖೆಯ ಪ್ರಾಥಮಿಕ ವರದಿಯಾಗಿದ್ದರಿಂದ ತನಿಖೆಯಲ್ಲಿ ಕಂಡುಬಂದ ಅಂಶಗಳನ್ನು ತನಿಖಾ ತಂಡ ಬಹಿರಂಗ ಮಾಡಿಲ್ಲ. ಹಾಗೆಯೇ ದೇಣಿಗೆ ಸಂಗ್ರಹ, ಎಣಿಕೆ ಹಾಗೂ ಮೇಲ್ವಿಚಾರಣೆಯಲ್ಲಿ ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸಲು ಶಿಫಾರಸು ಮಾಡಲಾಗಿದೆ. ಇದೇ ವೇಳೆ, ಒಂದು ವಾರದೊಳಗಾಗಿ ಅಂತಿಮ ವರದಿಯನ್ನು ಸಲ್ಲಿಸುವುದಾಗಿ ಲಖ್ನೋ ವಿಭಾಗದ ಆಯುಕ್ತ ವಿಜಯ್ ವಿಶ್ವಾಸ್ ನೇತೃತ್ವದ ಮೂವರು ಸದಸ್ಯರ ವಿಶೇಷ ತನಿಖಾ ತಂಡ ತಿಳಿಸಿದೆ. 

ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರುಪಯೋಗವಾಗಿದೆ ಎಂದು ಆರೋಪ ಭಾರೀ ವಿವಾದ ರೂಪ ಪಡೆಯುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ತನಿಖಾ ತಂಡವನ್ನು ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಆದರೆ ತನಿಖಾ ವರದಿ ಬಗ್ಗೆ ಆಕ್ಷೇಯ ವ್ಯಕ್ತಪಡಿಸಿರುವ ಎಸ್ಪಿ ನಾಯಕ ದೀಪಕ್ ರಂಜನ್, ತನಿಖೆಯಲ್ಲಿ ಕೆಳಮಟ್ಟದ ವ್ಯಕ್ತಿಗಳನ್ನು ಮಾತ್ರ ಗುರಿಯಾಗಿಸಲಾಗಿದೆ. ಉನ್ನತ ಹಾಗೂ ಪ್ರಭಾವಿ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುವ ಗೊಡವೆಗೆ ಹೋಗಿಲ್ಲ. ಆದ್ದರಿಂದ ತನಿಖಾ ವರದಿಯಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. 

ತನಿಖಾ ವರದಿಯು ಅಯೋಧ್ಯೆ ರಾಮಮಂದಿರದ ಮೇಲ್ವಿಚಾರಣೆ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸಿದೆ. ಟ್ರಸ್ಟ್ ಅಧಿಕಾರಿಗಳು ಹುಂಡಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಗೋಚರಿಸಿರುವುದನ್ನು ಬೊಟ್ಟು ಮಾಡಿದೆ. ಅಲ್ಲದೆ, ದೇಗುಲಕ್ಕೆ ಟ್ರಸ್ಟ್ ಸಂಬಂಧಿಗಳೇ ಅಧಿಕಾರಿಗಳಾಗಿ ನೇಮಕವಾಗಿದ್ದು ಇವರಿಗೆ ಹಣ ಎಣಿಕೆ ಸಿಬ್ಬಂದಿ ನಡುವೆ ಸಂಪರ್ಕ ಇರುವ ಬಗ್ಗೆ ಪರಿಶೀಲಿಸಲಾಗಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ಹೆಚ್ಚುವರಿ ಸಮಯವನ್ನೂ ಎಸ್‌ಐಟಿ ಕೇಳಿದ್ದು ಇದೇ ವೇಳೆ, ಕಾಣಿಕೆ ನಗದು ಎಣಿಸುತ್ತಿದ್ದ 40ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪ್ರಕರಣ ಹೊರಬಂದ ಬಳಿಕ ಕೆಲಸದಿಂದ ತೆಗೆದು ಹಾಕಲಾಗಿದೆ. ಅಯೋಧ್ಯೆ ಮಂದಿರ ಹೆಸರಲ್ಲಿ ದೇಶಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗಿದ್ದು 3500 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ ಎನ್ನಲಾಗಿತ್ತು.‌