Mumbai Train Murder, Mangalore: ಮುಂಬೈ ಲೋಕಲ್ ಟ್ರೈನಲ್ಲಿ ಕ್ಲುಲ್ಲಕ ವಿಚಾರಕ್ಕೆ ಯುವಕನ ಕೊಲೆ ; ಸದ್ದಿಲ್ಲದೆ ಮಂಗಳೂರಿಗೆ ಎಸ್ಕೇಪ್ ಆಗಲು ಯತ್ನಿಸಿದ್ದ ಆರೋಪಿ ರೋಶನ್ ಸುವರ್ಣ, ಕೆಲವೇ ಗಂಟೆಯಲ್ಲಿ ಬಲೆಗೆ ಕೆಡವಿತ್ತು 400 ಸಿಸಿಟಿವಿ- ಕಾರ್ಗೋ ಟೀ ಶರ್ಟ್ ಸುಳಿವು !

26-06-26 07:35 pm       HK News Staffer   ಕ್ರೈಂ

ಮುಂಬೈ ಲೋಕಲ್ ಟ್ರೈನಲ್ಲಿ ರೈಲಿನ ಡೋರ್ ಹಾಕುವ ವಿಚಾರದಲ್ಲಿ ಇಬ್ಬರು ಯುವಕರ ಮಧ್ಯೆ ಕಿರಿಕ್ ಆಗಿತ್ತು. ಕುಡಿದ ಮತ್ತಿನಲ್ಲಿದ್ದ ರೋಶನ್ ಸುವರ್ಣ(30) ಎಂಬ ಯುವಕ, ತನ್ನ ಬ್ಯಾಗಿನಲ್ಲಿದ್ದ ಚೂರಿಯಿಂದ ಕಿರಿಕ್ ಮಾಡಿದ್ದ ಮಯಾಂಕ್ ಲೋಹರ್(21) ಎಂಬಾತನ ಹೊಟ್ಟೆಗೆ ಇರಿದು ರೈಲಿನಿಂದ ಹೊರಕ್ಕೆ ಹಾರಿ ಪರಾರಿಯಾಗಿದ್ದ. ಬಳಿಕ ತನ್ನ ಮಂಗಳೂರಿಗೆ ಪಲಾಯನ ಮಾಡಲು ನೋಡುತ್ತಿದ್ದಾಗಲೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮುಂಬೈ, ಜೂನ್ 26: ಮುಂಬೈ ಲೋಕಲ್ ಟ್ರೈನಲ್ಲಿ ರೈಲಿನ ಡೋರ್ ಹಾಕುವ ವಿಚಾರದಲ್ಲಿ ಇಬ್ಬರು ಯುವಕರ ಮಧ್ಯೆ ಕಿರಿಕ್ ಆಗಿತ್ತು. ಕುಡಿದ ಮತ್ತಿನಲ್ಲಿದ್ದ ರೋಶನ್ ಸುವರ್ಣ(30) ಎಂಬ ಯುವಕ, ತನ್ನ ಬ್ಯಾಗಿನಲ್ಲಿದ್ದ ಚೂರಿಯಿಂದ ಕಿರಿಕ್ ಮಾಡಿದ್ದ ಮಯಾಂಕ್ ಲೋಹರ್(21) ಎಂಬಾತನ ಹೊಟ್ಟೆಗೆ ಇರಿದು ರೈಲಿನಿಂದ ಹೊರಕ್ಕೆ ಹಾರಿ ಪರಾರಿಯಾಗಿದ್ದ. ಬಳಿಕ ತನ್ನ ಮಂಗಳೂರಿಗೆ ಪಲಾಯನ ಮಾಡಲು ನೋಡುತ್ತಿದ್ದಾಗಲೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದ ಮಂಗಳೂರು ಮೂಲದ ಯುವಕ ಒಂದು ಕ್ಷಣದ ಸಿಟ್ಟಿನಲ್ಲಿ ತನ್ನ ಕೈಲಿದ್ದ ಚೂರಿಯಿಂದ ಇರಿದು ಇನ್ನೊಬ್ಬ ಯುವಕನ ಕೊಲೆಗೆ ಕಾರಣವಾಗಿದ್ದು ಮುಂಬೈನಲ್ಲಿ ದೊಡ್ಡ ಸುದ್ದಿಯಾಗಿದೆ. ಮುಂಬೈನ ಚರ್ಚ್‌ಗೇಟ್- ನಲಸೋಪಾರಾ ನಡುವೆ ಸಾಗುತ್ತಿದ್ದ ಎಸಿ ಲೋಕಲ್ ಟ್ರೈನ್‌ನ ಫಸ್ಟ್‌ ಕ್ಲಾಸ್ ಬೋಗಿಯಲ್ಲಿ ಈ ಘಟನೆ ನಡೆದಿದೆ. ಭಾರಿ ಮಳೆಯಾಗುತ್ತಿದ್ದ ಕಾರಣ ರೈಲಿನ ಮುಚ್ಚಿದ್ದ ಬಾಗಿಲನ್ನು ತೆರೆಯುವ ವಿಚಾರದಲ್ಲಿ ಮೀರಾ ರೋಡ್ - ಅಂಧೇರಿ ನಿವಾಸಿಯಾದ ರೋಶನ್ ಸುವರ್ಣ ಮತ್ತು ವಿರಾರ್ ನಿವಾಸಿ ಮಯಾಂಕ್ ಲೋಹರ್ ನಡುವೆ ವಾಗ್ವಾದ ನಡೆದಿತ್ತು. ರೋಶನ್ ಬಾಗಿಲು ತೆರೆದಾಗ ಮಳೆನೀರು ಒಳಗೆ ಬಡಿದಿದ್ದರಿಂದ ಮಯಾಂಕ್ ಬಾಗಿಲನ್ನು ಮತ್ತೆ ಮುಚ್ಚಿದ್ದ. ಇದರಿಂದ ಜಗಳ ಶುರುವಾಗಿದ್ದು ಸಹ ಪ್ರಯಾಣಿಕರು ರೋಶನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ತೀವ್ರ ಅವಮಾನಕ್ಕೊಳಗಾದ ರೋಶನ್, ಗೋರೆಗಾಂವ್ ಮತ್ತು ಮಲಾಡ್ ನಿಲ್ದಾಣಗಳ ಮಧ್ಯೆ ರೈಲು ಚಲಿಸುತ್ತಿದ್ದಾಗ ತನ್ನ ಬ್ಯಾಗ್‌ನಿಂದ ಚಾಕು ತೆಗೆದು ಮಯಾಂಕ್‌ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದಿದ್ದ. ಆದರೆ ಕೃತ್ಯ ನಡೆದ ಬೆನ್ನಲ್ಲೇ ರೈಲಿನಿಂದ ಹಾರಿ ಪರಾರಿಯಾಗಿದ್ದ ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಅಲ್ಲಿನವರಿಗೆ ಇರಲಿಲ್ಲ. 

ಮಂಗಳೂರಿಗೆ ಎಸ್ಕೇಪ್ ಆಗಲು ಪ್ಲಾನ್

ಕೊಲೆ ಮಾಡಿದ ನಂತರ ಬೊರಿವಿಲಿ ನಿಲ್ದಾಣದಲ್ಲಿ ರೈಲು ನಿಲ್ಲುವ ಮುನ್ನವೇ ರೋಶನ್ ಕೆಳಗೆ ಜಿಗಿದು ಪರಾರಿಯಾಗಿದ್ದನು. ಅಲ್ಲಿಂದ ಆಟೋ ರಿಕ್ಷಾ ಮೂಲಕ ಮೀರಾ ರೋಡ್‌ನಲ್ಲಿರುವ ತನ್ನ ಮನೆಗೆ ತಲುಪಿದ ಆತ, ಯಾರಿಗೂ ಘಟನೆಯ ಬಗ್ಗೆ ತಿಳಿಸದೆ ಸ್ನಾನ ಮಾಡಿ ಕೆಲವು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಕೆಲ ದಿನಗಳ ಮಟ್ಟಿಗೆ ಮಂಗಳೂರಿಗೆ ತೆರಳುತ್ತಿರುವುದಾಗಿ ಹೆತ್ತವರಿಗೆ ತಿಳಿಸಿ, ಮನೆಯಿಂದ ಹೊರಟು ಪನ್ವೇಲ್‌ಗೆ ಓಲಾ ಕ್ಯಾಬ್ ಬುಕ್ ಮಾಡಿದ್ದ. ಪನ್ವೇಲ್‌ನಿಂದ ಮಂಗಳೂರಿಗೆ ಹೊರಡುವ ಮಧ್ಯಾಹ್ನ 3 ಗಂಟೆಯ ಬಸ್ ಟಿಕೆಟ್‌ ಅನ್ನೂ ಬುಕ್ ಮಾಡಿಕೊಂಡಿದ್ದ.

ಟೀ ಶರ್ಟ್ ನೀಡಿತ್ತು ಸುಳಿವು 

ಕೊಲೆ ಬಗ್ಗೆ ತಿಳಿಯುತ್ತಲೇ ಆರೋಪಿ ಪತ್ತೆಗಾಗಿ ಬೊರಿವಿಲಿ ರೈಲ್ವೇ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು. ಚರ್ಚ್‌ ಗೇಟ್‌ನಿಂದ ನಲಸೋಪಾರಾ ವರೆಗಿನ ಸುಮಾರು 400ಕ್ಕೂ ಹೆಚ್ಚು ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಜಾಲಾಡಿದ ಪೊಲೀಸರಿಗೆ ಪ್ರಮುಖ ಸುಳಿವು ಸಿಕ್ಕಿತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ರೋಶನ್ ಧರಿಸಿದ್ದ ಟೀ ಶರ್ಟ್ ಮೇಲಿದ್ದ ಕಾರ್ಗೋ ಕಂಪನಿಯ ಲೋಗೋ ಸ್ಪಷ್ಟವಾಗಿ ಕಂಡಿತ್ತು. ಅಂಧೇರಿ ವಿಮಾನ ನಿಲ್ದಾಣದ ಬಳಿಯಿರುವ ಕಾರ್ಗೋ ಸಂಸ್ಥೆಗೆ ಭೇಟಿ ನೀಡಿದ ಪೊಲೀಸರು ಆರೋಪಿಯ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದರು.

ಕೂಡಲೇ ಆರೋಪಿಯ ಲೊಕೇಶನ್ ಟ್ರ್ಯಾಕ್ ಮಾಡಿದಾಗ ಆತ ಮೀರಾ ರೋಡ್‌ನಿಂದ ಪನ್ವೇಲ್ ಕಡೆಗೆ ಪ್ರಯಾಣಿಸುತ್ತಿರುವುದು ಪತ್ತೆಯಾಯಿತು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಪನ್ವೇಲ್ ರೈಲ್ವೇ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ರೋಶನ್‌ನನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದರು. ಕೊಲೆ ನಡೆದ ಕೇವಲ 15 ಗಂಟೆಗಳ ಒಳಗೆ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದರು.

ಬಂಧನದ ವೇಳೆ ಹೈಡ್ರಾಮಾ! 

ಪೊಲೀಸರು ಸುತ್ತುವರಿದು ವಶಕ್ಕೆ ಪಡೆಯುತ್ತಲೇ ರೋಶನ್ ಗಾಬರಿಗೊಂಡಿದ್ದು ತಾನು ಇರಿದ ಯುವಕನ ಸ್ಥಿತಿ ಹೇಗಿದೆ ಎಂದು ಪೊಲೀಸರನ್ನು ಆತಂಕದಿಂದ ಪ್ರಶ್ನಿಸಿದ್ದ. ಆತ ಜಾಲತಾಣದಲ್ಲಿ ಸಾವಿನ ಸುದ್ದಿಯನ್ನು ನೋಡಿ ತಿಳಿದುಕೊಂಡಿದ್ದರೂ, ಪೊಲೀಸರು ಯುವಕ ಗಾಬರಿಯಿಂದ ಇನ್ನೇನಾದ್ರೂ ತಪ್ಪು ಹೆಜ್ಜೆ ಇಡಬಾರದು ಎಂಬ ಮುನ್ನೆಚ್ಚರಿಕೆಯಿಂದ "ಮಯಂಕ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಸಾಮಾಜಿಕ ಜಾಲತಾಣದ ಸುದ್ದಿಗಳು ಸುಳ್ಳು" ಎಂದು ನಂಬಿಸಿ ಆತನನ್ನು ಬೊರಿವಿಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಗೆ ತಲುಪಿದ ಬಳಿಕವಷ್ಟೇ ಕೊಲೆ ಆರೋಪದಡಿ ಬಂಧಿಸುತ್ತಿರುವುದಾಗಿ ತಿಳಿಸಲಾಯಿತು. 

ರೋಶನ್ ಸುವರ್ಣ ಮತ್ತು ಕುಟುಂಬ ಮಂಗಳೂರು ಮೂಲದವರಾಗಿದ್ದರೂ ಮುಂಬೈನಲ್ಲಿ ನೆಲೆಸಿದ್ದು, ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಏರ್ಪೋರ್ಟ್ ಬಳಿಯಲ್ಲಿ ಕಾರ್ಗೋ ಕಂಪನಿಯಲ್ಲಿ ತಂದೆ- ಮಗ ಕೆಲಸ ಮಾಡುತ್ತಿದ್ದರು. ರೋಶನ್ ಮಂಗಳವಾರ ತನ್ನ ಶಿಫ್ಟ್ ಮುಗಿಸಿ ಮನೆಗೆ ತೆರಳುವ ವೇಳೆ ಫುಲ್ ಬಾಟಲ್ ರಮ್ ಹೊಟ್ಟೆಗೆ ಇಳಿಸಿಕೊಂಡಿದ್ದ. ಆನಂತರ, ಬೊರಿವಿಲಿ ಹೋಗುವ ಲೋಕಲ್ ಟ್ರೈನು ಹತ್ತಿದ್ದ. ಕೆಲದಿನಗಳ ಹಿಂದಷ್ಟೇ ಆತನ ಗೆಳೆಯ ಒಂದು ಚಾಕು ಕೊಟ್ಟಿದ್ದು ಅದನ್ನು ತನ್ನ ಬ್ಯಾಗಿನಲ್ಲಿ ಇರಿಸಿದ್ದ. ಆದರೆ ಅದೇ ಚಾಕು, ಕುಡಿತದ ಅಮಲು ಯುವಕನನ್ನು ಈಗ ಜೈಲು ಸೇರುವಂತೆ ಮಾಡಿದೆ.