ರಿವರ್ಸ್ ಮಾಡುವಾಗ ನಿಯಂತ್ರಣ ತಪ್ಪಿ ತೋಡಿಗೆ ಉರುಳಿ ಬಿದ್ದ ಶಾಲಾ ಬಸ್ ; 7 ವಿದ್ಯಾರ್ಥಿಗಳಿಗೆ ಗಾಯ, ತಪ್ಪಿದ ಭಾರಿ ಅನಾಹುತ

10-07-26 05:29 pm       HK News Staffer   ಕ್ರೈಂ

ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಸರಳೆಬೆಟ್ಟು-ಕೊಡಂಗೆ ದೇವಸ್ಥಾನದ ಬಳಿ ಇಂದು ಶಾಲಾ ಬಸ್ ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸಮಯಪ್ರಜ್ಞೆ ಹಾಗೂ ಅದೃಷ್ಟದಿಂದ ಮತ್ತೊಂದು ದೊಡ್ಡ ದುರಂತ ತಪ್ಪಿದಂತಾಗಿದೆ.

ಮಣಿಪಾಲ, ಜು.10: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಸರಳೆಬೆಟ್ಟು-ಕೊಡಂಗೆ ದೇವಸ್ಥಾನದ ಬಳಿ ಇಂದು ಶಾಲಾ ಬಸ್ ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸಮಯಪ್ರಜ್ಞೆ ಹಾಗೂ ಅದೃಷ್ಟದಿಂದ ಮತ್ತೊಂದು ದೊಡ್ಡ ದುರಂತ ತಪ್ಪಿದಂತಾಗಿದೆ.

ಮಣಿಪಾಲದ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಸುಮಾರು 20 ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸರಳೆಬೆಟ್ಟು ಕೊಡಂಗೆ ದೇವಸ್ಥಾನದ ಸಮೀಪದ ತಿರುವಿನಲ್ಲಿ ಬಸ್ ಚಾಲಕ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದಿದೆ.

ಅಪಘಾತದಲ್ಲಿ ಬಸ್‌ನಲ್ಲಿದ್ದ ಏಳು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರಲ್ಲಿ ಓರ್ವ ಬಾಲಕಿಯ ತಲೆಗೆ ತೀವ್ರ ಪೆಟ್ಟಾಗಿರುವ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ಧಾವಿಸಿ ಬಸ್‌ನಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದರು. ಮಾಹಿತಿ ತಿಳಿಯುತ್ತಿದ್ದಂತೆ ಮಣಿಪಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಈ ನಡುವೆ ಸ್ಥಳೀಯರು ಘಟನೆಯ ಬಗ್ಗೆ ಆತಂಕಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಪ್ರತಿದಿನ ಶಾಲಾ ಬಸ್ ಹತ್ತಲು ಐದಾರು ಮಕ್ಕಳು ರಸ್ತೆ ಬಲಭಾಗದಲ್ಲಿ ನಿಲ್ಲುತ್ತಿದ್ದರು. ಆದರೆ ಇಂದು ಮಾತ್ರ ಅವರು ರಸ್ತೆ ಎಡಭಾಗದಲ್ಲಿ ನಿಂತಿದ್ದ ಕಾರಣ ಬಸ್ ಅವರ ಮೇಲೆ ಉರುಳುವ ಅಪಾಯ ತಪ್ಪಿದೆ. ಮಕ್ಕಳು ಎಂದಿನಂತೆ ಅದೇ ಸ್ಥಳದಲ್ಲಿ ನಿಂತಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಬಳಿಕ ಶಾಲಾ ಮಕ್ಕಳ ಸುರಕ್ಷತೆ, ಬಸ್ ಚಾಲಕರ ಎಚ್ಚರಿಕೆ ಹಾಗೂ ಶಾಲಾ ವಾಹನಗಳ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.