ಬ್ರೇಕಿಂಗ್ ನ್ಯೂಸ್
31-07-26 09:47 pm HK News Staffer ಕ್ರೈಂ
ಮಂಗಳೂರು, ಜುಲೈ 31: ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸ್ನೇಹಿತನ ಜೊತೆಗಿದ್ದ ಯುವತಿಯನ್ನು ಏಳು ಮಂದಿ ಸೇರಿ ಬಲವಂತದಿಂದ ಸಾಮೂಹಿಕ ಅತ್ಯಾಚಾರಗೈದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ ಕೋರ್ಟ್ 20 ವರ್ಷಗಳ ಶಿಕ್ಷೆ ವಿಧಿಸಿದೆ.
2018ರ ನವೆಂಬರ್ 17ರಂದು ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ತೋಟ ಬೆಂಗ್ರೆ ಬೀಚ್ಗೆ ತೆರಳಿ ಕುಳಿತು ಮಾತನಾಡುತ್ತಿದ್ದ ವೇಳೆ, ಏಳು ಮಂದಿ ಅಪರಿಚಿತರು ಬಂದು ಯುವತಿಯ ಸ್ನೇಹಿತನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿ, ಯುವತಿಯ ಮೇಲೆರಗಿ ಬಲವಂತವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದರು. ಘಟನೆಯ ನಂತರ ಭಯದಿಂದ ಯುವತಿ ಯಾರಿಗೂ ವಿಷಯ ತಿಳಿಸಿರಲಿಲ್ಲ. ಎರಡು ದಿನಗಳ ಬಳಿಕ ಆರೋಪಿಗಳು ಕರೆ ಮಾಡಿ ಮತ್ತೆ ಬರುವಂತೆ ಸೂಚಿಸಿದ್ದರು.
ಯುವತಿ ಬಳಿಕ ತನ್ನ ಮನೆಯವರಿಗೆ ವಿಷಯ ತಿಳಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 60/2018 ರಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 376(ಡಿ), 323, 354, 506 ಐಪಿಸಿ ಹಾಗೂ ಕಲಂ 3(1)(w)(i), 3(2)(v)(va) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದು, ಅವರ ಪೈಕಿ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರಾಗಿದ್ದರು. ಉಳಿದ ಆರೋಪಿತರಾದ ಪ್ರಜ್ವಲ್ @ ಪಜ್ಜು, ಅರುಣ್ ಅಮೀನ್ @ ಅರುಣ್ ಎಸ್., ಆದಿತ್ಯ ಸಾಲಿಯಾನ್ @ ಆದಿತ್ಯ ಹಾಗೂ ಅಬ್ದುಲ್ ರಿಯಾಝ್ @ ರಿಯಾಝ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಾಲಕರನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಪ್ರಾಥಮಿಕ ತನಿಖೆಯನ್ನು ಅಂದಿನ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಕಲಾವತಿ ಅವರು ಕೈಗೊಂಡಿದ್ದರು. ನಂತರ ಅಂದಿನ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಮಂಜುನಾಥ ಶೆಟ್ಟಿ ಅವರು ತನಿಖೆಯನ್ನು ಮುಂದುವರಿಸಿದ್ದರು. ಬಳಿಕ ಶ್ರೀನಿವಾಸ ಗೌಡ, ಐಪಿಎಸ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವು ಸ್ಪೆಷಲ್ ಕೇಸ್ ನಂ. 31/2019 ರಂತೆ ವಿಚಾರಣೆಗೆ ಒಳಪಟ್ಟಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ್ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು. ಇದೇ ಜುಲೈ 27ರಂದು ನ್ಯಾಯಾಲಯವು ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 341, 323, 354, 376(ಡಿ), 506 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಕಲಂ 3(1)(w)(i) ಮತ್ತು 3(2)(v)(va) ಅಡಿಯಲ್ಲಿ ಆರೋಪಗಳು ಸಾಬೀತಾಗಿರುವುದಾಗಿ ತೀರ್ಪು ನೀಡಿತ್ತು.
ಅನಂತರ, ಜುಲೈ 30ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಆರೋಪಿಗಳಿಗೆ ಕಲಂ 376(ಡಿ) ಐಪಿಸಿ ಅಡಿಯಲ್ಲಿ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000/- ದಂಡ, ಕಲಂ 354 ಐಪಿಸಿ ಅಡಿಯಲ್ಲಿ ತಲಾ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000/- ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 1 ತಿಂಗಳ ಕಾರಾಗೃಹ ಶಿಕ್ಷೆ, ಕಲಂ 506 ಐಪಿಸಿ ಅಡಿಯಲ್ಲಿ ತಲಾ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹2,000/- ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 15 ದಿನಗಳ ಕಾರಾಗೃಹ ಶಿಕ್ಷೆ, ಕಲಂ 323 ಐಪಿಸಿ ಅಡಿಯಲ್ಲಿ ತಲಾ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹1,000/- ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 15 ದಿನಗಳ ಕಾರಾಗೃಹ ಶಿಕ್ಷೆ, ಕಲಂ 341 ಐಪಿಸಿ ಅಡಿಯಲ್ಲಿ ತಲಾ ₹500/- ದಂಡ ವಿಧಿಸಿದ್ದಾರೆ.
ಇದಲ್ಲದೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ನೊಂದ ಯುವತಿಗೆ ₹60,000/- ಪರಿಹಾರ ಮಂಜೂರು ಮಾಡಲಾಗಿದೆ.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
01-08-26 10:25 pm
HK News Staffer
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm