ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮುಂಬೈ ಪೊಲೀಸರ ಬೆಲೆಗೆ ಬಿದ್ದ ಉಡುಪಿ ಮೂಲದ ಮಹಿಳೆ

10-07-26 08:22 pm       HK News Staffer   ಕ್ರೈಂ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಸಿಗುತ್ತದೆ ಎಂದು ನಂಬಿಸಿ ಸುಮಾರು 10 ಲಕ್ಷ ರೂ. ವಂಚನೆ ಎಸಗಿದ ಆರೋಪದ ಮೇಲೆ ಉಡುಪಿ ಮೂಲದ ಮಹಿಳೆಯನ್ನು ಮುಂಬೈನ ಕಾಂದಿವಲಿ ಪಶ್ಚಿಮ ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ ಹಾಗೂ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಂಬೈ, ಜು. 10: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಸಿಗುತ್ತದೆ ಎಂದು ನಂಬಿಸಿ ಸುಮಾರು 10 ಲಕ್ಷ ರೂ. ವಂಚನೆ ಎಸಗಿದ ಆರೋಪದ ಮೇಲೆ ಉಡುಪಿ ಮೂಲದ ಮಹಿಳೆಯನ್ನು ಮುಂಬೈನ ಕಾಂದಿವಲಿ ಪಶ್ಚಿಮ ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ ಹಾಗೂ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಕೊಳಲಗಿರಿ ಕುಕಿಕಟ್ಟೆ ನಿವಾಸಿ ದೀಪಿಕಾ ಮನೋಜ್ ಶೆಟ್ಟಿ ಎಂದು ಗುರುತಿಸಲಾಗಿದೆ. 60 ವರ್ಷದ ರಜನಿ ದಯಾನಂದ ಶೆಟ್ಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧನ ಕ್ರಮ ಕೈಗೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ದೂರುದಾರರ ಸಂಬಂಧಿ ಹರೀಶ್ ಶೆಟ್ಟಿ ಅವರು ಷೇರು ದಲ್ಲಾಳಿ ಸಂಸ್ಥೆಯಾದ ನಿರ್ಮಲ್ ಬ್ಯಾಂಗ್ ಎಂಬ ಸ್ಟಾಕ್ ಬ್ರೋಕರ್ ಏಜನ್ಸಿ ಹೊಂದಿದ್ದರು. ಅಲ್ಲಿ ದೀಪಿಕಾ ಕೆಲಸ ಮಾಡುತ್ತಿದ್ದ ಕಾರಣ ರಜನಿಗೆ ಆಕೆಯ ಪರಿಚಯವಾಗಿತ್ತು. 2024ರ ಸೆಪ್ಟೆಂಬರ್‌ನಲ್ಲಿ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಭೇಟಿಯ ವೇಳೆ, ₹1 ಲಕ್ಷ ಹೂಡಿಕೆ ಮಾಡಿದರೆ ಮೂರು ತಿಂಗಳ ಬಳಿಕ ಪ್ರತಿ ತಿಂಗಳು ಶೇ.20ರಷ್ಟು (₹60,000) ಲಾಭ ದೊರೆಯುತ್ತದೆ ಎಂದು ದೀಪಿಕಾ ಭರವಸೆ ನೀಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಕೆಯ ಮಾತು ನಂಬಿದ ರಜನಿ, 2024ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಆರ್‌ಟಿಜಿಎಸ್ (RTGS) ಮೂಲಕ ಹಂತ ಹಂತವಾಗಿ ಒಟ್ಟು ₹9 ಲಕ್ಷವನ್ನು ದೀಪಿಕಾ ಅವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು. ಇದೇ ವೇಳೆ ರಜನಿಯ ಸಹೋದರ ಹರೀಶ್ ಶೆಟ್ಟಿಯವರು ತಮ್ಮ ಭಾರತ್ ಬ್ಯಾಂಕ್ ಖಾತೆಯಿಂದ ₹2 ಲಕ್ಷವನ್ನು ದೀಪಿಕಾ ಖಾತೆಗೆ ಜಮೆ ಮಾಡಿದ್ದರು.

ಹಣ ಪಡೆದ ಬಳಿಕ ದೀಪಿಕಾ ಭರವಸೆ ನೀಡಿದ ಲಾಭವನ್ನಾಗಲಿ, ಹೂಡಿಕೆ ಮಾಡಿದ ಮೂಲಧನವನ್ನಾಗಲಿ ಹಿಂದಿರುಗಿಸಲಿಲ್ಲ ಎಂದು ಆರೋಪಿಸಲಾಗಿದೆ. ನಿರಂತರವಾಗಿ ಹಣ ವಾಪಸ್ ಕೇಳಿದಾಗ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು ₹8,58,600 ಮೊತ್ತದ ಚೆಕ್‌ಗಳನ್ನು ನೀಡಿದ್ದಳು. ಆದರೆ ಖಾತೆಯಲ್ಲಿ  ಹಣವಿಲ್ಲದ ಕಾರಣ ಎಲ್ಲಾ ಚೆಕ್‌ಗಳು ಬೌನ್ಸ್ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ದೀಪಿಕಾ ದೂರುದಾರರ ಸಂಪರ್ಕವನ್ನೇ ತಪ್ಪಿಸಲು ಆರಂಭಿಸಿದ್ದಳು. ತಾವು ವಂಚನೆಗೆ ಒಳಗಾಗಿರುವುದು ಖಚಿತವಾದ ನಂತರ ರಜನಿ ಕಾಂದಿವಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಪೊಲೀಸ್ ಇನ್‌ಸ್ಪೆಕ್ಟರ್ ಕರಣ್ ಗುನಾಜಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಸೋಹನ್ ಸುರೇಶ್ ರಾವ್ ಕದಂ ಪ್ರಕರಣದ ತನಿಖೆ ನಡೆಸಿದರು. ಬಂಧನದ ಬಳಿಕವೂ ವಂಚನೆಗೆ ಸಂಬಂಧಿಸಿದ ಹಣವನ್ನು ಹಿಂದಿರುಗಿಸಲು ವಿಫಲವಾದ ಹಿನ್ನೆಲೆಯಲ್ಲಿ ದೀಪಿಕಾ ಶೆಟ್ಟಿಯನ್ನು ಮುಂಬೈನ ನಾಗಪಾಡದಲ್ಲಿರುವ ಬೈಕುಲ್ಲಾ ಮಹಿಳಾ ಜಿಲ್ಲಾ ಕಾರಾಗೃಹಕ್ಕೆ ನ್ಯಾಯಾಂಗ ಬಂಧನದಡಿ ಕಳುಹಿಸಲಾಗಿದೆ.