ಪರಿಷತ್ ಸ್ಥಾನ ಕೊಡಿಸುವುದಾಗಿ ಹೇಳಿ ಒಂದೂವರೆ ಕೋಟಿ ಪೀಕಿಸಿದ ಖದೀಮರು ; ಕಾಂಗ್ರೆಸ್ ಎಂಎಲ್ಸಿ ಆಸೆಗೆ ಹೋದ ಮಂಗಳೂರಿನ ಮಹಿಳೆಗೆ ಚೊಂಬು ! ಮಾಧ್ಯಮ ಸಲಹೆಗಾರನ ಹೆಸರಲ್ಲಿ ಬಲೆಗೆ

30-07-26 12:18 pm       HK News Staffer   ಕ್ರೈಂ

ವಿಧಾನಪರಿಷತ್‌ ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ, ತನಗೆ ಪ್ರಭಾವಿ ನಾಯಕರ ಜೊತೆ ನಂಟು ಹೊಂದಿರುವುದಾಗಿ ಹೇಳಿ, ಮಂಗಳೂರು ಮೂಲದ ಮಹಿಳೆಯೊಬ್ಬರಿಂದ ಬರೋಬ್ಬರಿ 1.50 ಕೋಟಿ ರೂ. ಪಡೆದು ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು, ಜುಲೈ 30 : ವಿಧಾನಪರಿಷತ್‌ ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ, ತನಗೆ ಪ್ರಭಾವಿ ನಾಯಕರ ಜೊತೆ ನಂಟು ಹೊಂದಿರುವುದಾಗಿ ಹೇಳಿ, ಮಂಗಳೂರು ಮೂಲದ ಮಹಿಳೆಯೊಬ್ಬರಿಂದ ಬರೋಬ್ಬರಿ 1.50 ಕೋಟಿ ರೂ. ಪಡೆದು ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ರಾಜಕೀಯ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಆಕಾಂಕ್ಷಿಗಳನ್ನು ಟಾರ್ಗೆಟ್ ಮಾಡುತ್ತಿರುವ ವಂಚಕರ ಜಾಲದ ಕರಾಳ ಮುಖ ಪೊಲೀಸರ ತನಿಖೆಯಿಂದ ಹೊರಬಂದಿದೆ. ಖಾಸಗಿ ಟ್ರಸ್ಟ್ ಒಂದರ ಮೂಲಕ ಕ್ಯಾನ್ಸ‌ರ್ ಮುಕ್ತ ಅಭಿಯಾನ ಸೇರಿದಂತೆ ವಿವಿಧ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಂಗಳೂರು ಮೂಲದ ಮಹಿಳೆಗೆ ಯರಿಸ್ವಾಮಿ ಎಂಬಾತನ ಪರಿಚಯವಾಗಿತ್ತು.

ತಾನು ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರನೆಂದು ಪರಿಚಯಿಸಿಕೊಂಡಿದ್ದ ಆರೋಪಿ, ಪ್ರಭಾವಿ ರಾಜಕಾರಣಿಗಳೊಂದಿಗೆ ತನಗಿರುವ ನಂಟು ಹಾಗೂ ಆಪ್ತವಾಗಿರುವ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸವನ್ನು ಗಳಿಸಿದ್ದನು. ಮಹಿಳೆಯ ಸಮಾಜ ಸೇವೆಯನ್ನು ಗಮನಿಸಿದ ಆಪಾದಿತ, ನೀವು ಇಷ್ಟೊಂದು ಸಮಾಜಸೇವೆ ಮಾಡುತ್ತಿದ್ದೀರಲ್ಲ, ನಿಮಗೆ ವಿಧಾನಪರಿಷತ್ ಸದಸ್ಯೆಯಾಗುವ ಅರ್ಹತೆಯಿದೆ. 5 ಕೋಟಿ ರೂಪಾಯಿ ನೀಡಿದರೆ ಹೈಕಮಾಂಡ್ ಮಟ್ಟದಲ್ಲಿ ಮಾತನಾಡಿ ಎಂಎಲ್‌ಸಿ ಸ್ಥಾನ ಕೊಡಿಸುತ್ತೇನೆ ಎಂದು ಗಾಳ ಹಾಕಿದ್ದ. ಆರಂಭದಲ್ಲಿ ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಮಹಿಳೆ ಹಿಂಜರಿದಾಗ, ಮಾತುಕತೆ ನಡೆಸಿ ಕೊನೆಗೆ 1.50 ಕೋಟಿ ರೂಪಾಯಿಗೆ ಒಪ್ಪಂದ ಕುದುರಿಸಲಾಗಿತ್ತು.

ಹಂತ ಹಂತವಾಗಿ ಹಣ ವಸೂಲಿ

ಆರೋಪಿ ಯರಿಸ್ವಾಮಿ ತನ್ನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಎಂಬವರ ಮೂಲಕ 2024ರ ಆಗಸ್ಟ್‌ನಿಂದ 2025ರ ಜನವರಿ ವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಹಣ ಸಂಗ್ರಹಿಸಿದ್ದ. ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿಯ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯ ಸುತ್ತಮುತ್ತ ಹಣವನ್ನು ಹಸ್ತಾಂತರಿಸಿಕೊಳ್ಳಲಾಗಿತ್ತು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ಕೇವಲ ಆರ್ಥಿಕ ವಂಚನೆ ಮಾತ್ರವಲ್ಲದೆ, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ನಂಬಿಸಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದಿದ್ದ ಯರಿಸ್ವಾಮಿ, ಅಲ್ಲಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಯ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ದಾಖಲಾಗಿದೆ. ಈ ವೇಳೆ ಎಚ್ಚೆತ್ತುಕೊಂಡ ಮಹಿಳೆ ತೀವ್ರ ಪ್ರತಿರೋಧ ಒಡ್ಡಿದ್ದಲ್ಲದೆ, ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿಗೆ ವಾಪಸಾದ ಬಳಿಕ ತಮಗೆ ಮೋಸ ನಡೆದಿರುವುದನ್ನು ಅರಿತ ಮಹಿಳೆ, ತಾವು ನೀಡಿದ್ದ ಹಣವನ್ನು ವಾಪಸ್‌ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಆರೋಪಿಗಳು ಹಣ ಮರಳಿಸದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸರು, ಪ್ರಮುಖ ಆರೋಪಿ ಯರಿಸ್ವಾಮಿ ಹಾಗೂ ಆತನ ಸಹಚರರಾದ ಬಸವರಾಜ್‌ ಮತ್ತು ಸಿದ್ದರಾಜು ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಹಾಗೂ ದೌರ್ಜನ್ಯ ದೂರಿನಡಿ ಎಫ್‌ಐಆರ್ ದಾಖಲಿಸಿದ್ದಾರೆ.