ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಇಬ್ಬರು ಯುವತಿಯರ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್ ; ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರು, ‘ಮದ್ವೆ ಆಗ್ಬೇಕು, ಆದ್ರೆ ಸಮಾಜ ಒಪ್ತಿಲ್ಲ, ಒಟ್ಟಿಗೆ ಬದುಕಲು ಆಗದಿದ್ದರೆ, ಒಟ್ಟಿಗೇ ಸಾಯೋಣ' ಎಂದ ಪ್ರೇಮಿಗಳು

07-08-26 12:35 pm       HK News Staffer   ಕ್ರೈಂ

ಆಗಸ್ಟ್ 06 ಬೆಂಗಳೂರಿನಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಯುವತಿಯರ ಸಾವಿನ ಹಿಂದೆ ಮನಕಲಕುವ ಕಾರಣ ಬೆಳಕಿಗೆ ಬಂದಿದೆ.

ಬೆಂಗಳೂರು, ಆಗಸ್ಟ್ 07: ಆಗಸ್ಟ್ 06 ಬೆಂಗಳೂರಿನಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಯುವತಿಯರ ಸಾವಿನ ಹಿಂದೆ ಮನಕಲಕುವ ಕಾರಣ ಬೆಳಕಿಗೆ ಬಂದಿದೆ. 22 ವರ್ಷದ ಸಿರ್ಜನಾ ಮತ್ತು 23 ವರ್ಷದ ರಿತಾ ಪರಸ್ಪರ ಪ್ರೀತಿಸುತ್ತಿದ್ದು, ಒಟ್ಟಿಗೆ ಬದುಕುವ ಕನಸು ನನಸಾಗುವುದಿಲ್ಲ ಎಂಬ ನೋವಿನಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಘಟನೆ ನಡೆದ ತಕ್ಷಣ ಪೊಲೀಸರು ತನಿಖೆ ಆರಂಭಿಸಿ, ಮೃತ ಯುವತಿಯರ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿದರು. ಈ ವೇಳೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವ ಆಸೆ ಹೊಂದಿದ್ದರು. ಆದರೆ ಕುಟುಂಬ ಮತ್ತು ಸಮಾಜ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಭಯವೇ ಅವರನ್ನು ಈ ದುರ್ಘಟನೆಯತ್ತ ತಳ್ಳಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

'ಒಟ್ಟಿಗೆ ಬದುಕಲು ಆಗದಿದ್ದರೆ, ಒಟ್ಟಿಗೇ ಸಾಯೋಣ'

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿರ್ಜನಾ ಮತ್ತು ರಿತಾ ಒಟ್ಟಿಗೆ ಜೀವನ ಸಾಗಿಸಲು ಬಯಸಿದ್ದರು. ಆದರೆ ಸಮಾಜದ ವಿರೋಧ ಮತ್ತು ಕುಟುಂಬದ ಒತ್ತಡದಿಂದ ತಮ್ಮ ಸಂಬಂಧಕ್ಕೆ ಭವಿಷ್ಯವಿಲ್ಲ ಎಂಬ ಆತಂಕದಲ್ಲಿ ಇಬ್ಬರೂ ಒಂದೇ ಸಮಯದಲ್ಲಿ ನೇಣಿಗೆ ಶರಣಾಗಿ ಜೀವ ಕೊಟ್ಟಿದ್ದಾರೆ ಎನ್ನಲಾಗಿದೆ.

ಚಿಕ್ಕ ವಯಸ್ಸಿನಿಂದಲೇ ಜೊತೆಯಾಗಿ ಬೆಳೆದಿದ್ದರು

ಸಿರ್ಜನಾ ಮತ್ತು ರಿತಾ ಸಂಬಂಧಿಕರಾಗಿದ್ದು, ನೇಪಾಳದಲ್ಲಿ ಒಟ್ಟಿಗೆ ಓದಿ ಬೆಳೆದಿದ್ದರು. ಬಾಲ್ಯದಿಂದಲೇ ಇಬ್ಬರೂ ಬೇರ್ಪಡದೆ ಇದ್ದ ಕಾರಣ, ಅವರ ಬಗ್ಗೆ ಊರಿನಲ್ಲಿ ಮಾತುಕತೆಗಳು ಆರಂಭವಾಗಿದ್ದವು. ಇದಾದ ಬಳಿಕ ಕುಟುಂಬಸ್ಥರು ಇಬ್ಬರನ್ನೂ ಬೆಂಗಳೂರಿಗೆ ಕರೆಸಿಕೊಂಡಿದ್ದರು.
ಬೆಂಗಳೂರುಗೆ ಬಂದ ನಂತರವೂ ಅವರು ಬೇರೆ ಬೇರೆ ಕಡೆ ವಾಸವಾಗಿದ್ದರೂ, ವಾರದಲ್ಲಿ ಮೂರು-ನಾಲ್ಕು ಬಾರಿ ಭೇಟಿಯಾಗಿ ಸಮಯ ಕಳೆಯುತ್ತಿದ್ದರು. ರಿತಾ ಫ್ರೇಜರ್ ಟೌನ್‌ನಲ್ಲಿ, ಸಿರ್ಜನಾ ಜಕ್ಕೂರಿನಲ್ಲಿ ವಾಸವಾಗಿದ್ದರು.

ಮದುವೆ ಮಾತೇ ಅಂತಿಮ ನಿರ್ಧಾರಕ್ಕೆ ಕಾರಣ?

ಘಟನೆ ನಡೆದ ದಿನ ಇಬ್ಬರೂ ಸಂಬಂಧಿಕರ ಮನೆಗೆ ಊಟಕ್ಕೆ ತೆರಳಿದ್ದರು. ಇದೇ ವೇಳೆ ಕುಟುಂಬದಲ್ಲಿ ಮದುವೆ ವಿಷಯ ಪ್ರಸ್ತಾಪವಾಗಿತ್ತು. "ಸಮಾಜ ನಮ್ಮನ್ನು ಒಟ್ಟಿಗೆ ಬದುಕಲು ಬಿಡುವುದಿಲ್ಲ" ಎಂದು ಇಬ್ಬರೂ ಮಾತನಾಡಿಕೊಂಡಿದ್ದರು ಎನ್ನಲಾಗಿದೆ. ಈ ಭಾವನಾತ್ಮಕ ಒತ್ತಡವೇ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.