ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರೂ ದರ್ಶನ್ ಹಲ್ಲೆ ಮಾಡುವುದನ್ನು ನಿಲ್ಲಿಸಲಿಲ್ಲ; ಎದೆ ಮೇಲೆ ನಿಂತು ಸಿಗರೇಟ್‌ನಿಂದ ಸುಟ್ಟರು, ದರ್ಶನ್ ವಿರುದ್ಧ ಮಾಫಿ ಸಾಕ್ಷಿ ಪ್ರದೋಷ್ ಗಂಭೀರ ಆರೋಪ!

09-08-26 12:03 pm       HK News Staffer   ಕ್ರೈಂ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಎ-14 ಪ್ರದೋಷ್ ಎಸ್. ಕ್ಷಮಾದಾನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಎ-2 ನಟ ದರ್ಶನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ.

Photo credits : PUBLIC TV

ಬೆಂಗಳೂರು, ಆಗಸ್ಟ್ 09:  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಎ-14 ಪ್ರದೋಷ್ ಎಸ್. ಕ್ಷಮಾದಾನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಎ-2 ನಟ ದರ್ಶನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ.

ಪ್ರದೋಷ್ ಅರ್ಜಿಯಲ್ಲಿರುವ ಆರೋಪಗಳ ಪ್ರಕಾರ, ಕೊಲೆ ನಡೆದ ಸ್ಥಳಕ್ಕೆ ದರ್ಶನ್ ಅವರೇ ನಿರ್ದೇಶನ ನೀಡಿದ್ದರು. ರೇಣುಕಾಸ್ವಾಮಿಗೆ ದರ್ಶನ್ ನಿಂದಿಸಿ, ಕಪಾಳಕ್ಕೆ ಹೊಡೆದು ಬಳಿಕ ಹಲ್ಲೆ ಮುಂದುವರಿಸಿದ್ದರು ಎಂದು ಆರೋಪಿಸಲಾಗಿದೆ.

ಪವಿತ್ರಾ ಗೌಡ ಅವರಿಗೂ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಯುವಂತೆ ದರ್ಶನ್ ಸೂಚಿಸಿದ್ದರು ಎನ್ನಲಾಗಿದೆ. ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರೂ ದರ್ಶನ್ ಹಲ್ಲೆ, ಒದೆಯುವುದನ್ನು ನಿಲ್ಲಿಸಲಿಲ್ಲ ಎಂದು ಪ್ರದೋಷ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ಇನ್ನೂ ಗಂಭೀರ ಆರೋಪವಾಗಿ, ದರ್ಶನ್ ರೇಣುಕಾಸ್ವಾಮಿ ಎದೆ ಮೇಲೆ ನಿಂತು ಸಿಗರೇಟ್‌ನಿಂದ ಸುಟ್ಟಿದ್ದರು ಎಂದು ಹೇಳಲಾಗಿದೆ. ಈ ಹಲ್ಲೆಯನ್ನು ತಡೆಯಲು ತಾನು ದರ್ಶನ್ ಅವರ ಕಾಲನ್ನು ದೂರ ಸರಿಸಿದ್ದಾಗಿಯೂ ಪ್ರದೋಷ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಮೃತಪಟ್ಟ ವಿಚಾರ ತಿಳಿದ ಬಳಿಕ ದರ್ಶನ್ ತಮ್ಮ ಗನ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಅರ್ಜಿಯಲ್ಲಿ ಕೇಳಿಬಂದಿದೆ.

ಪ್ರಕರಣ ಮುಚ್ಚಿಹಾಕಲು ಯತ್ನ ಆರೋಪ;

ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ದರ್ಶನ್ ಭಾಗಿಯಾಗಿದ್ದರು ಎಂದು ಪ್ರದೋಷ್ ಆರೋಪಿಸಿದ್ದಾರೆ. ನಾಗರಾಜ್‌ಗೆ ₹5 ಲಕ್ಷ ಹಾಗೂ ವಿನಯ್‌ಗೆ ₹10 ಲಕ್ಷ ನೀಡುವ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. ಮೃತದೇಹವನ್ನು ಸ್ಥಳಾಂತರಿಸಿ, ಘಟನೆ ಬೇರೆಡೆ ನಡೆದಂತೆ ಸುಳ್ಳು ಕಥೆ ಸೃಷ್ಟಿಸಿ ಪೊಲೀಸರಿಗೆ ಹೇಳಿಕೆ ನೀಡುವಂತೆ ಸೂಚಿಸಲಾಗಿತ್ತು ಎಂಬ ಗಂಭೀರ ಆರೋಪವನ್ನೂ ಪ್ರದೋಷ್ ಮಾಡಿದ್ದಾರೆ.

“ನಾನು ಕೊಲೆಯಲ್ಲಿ ಭಾಗಿಯಾಗುವ ಉದ್ದೇಶ ಹೊಂದಿರಲಿಲ್ಲ”;

ತಮ್ಮ ಅರ್ಜಿಯಲ್ಲಿ ಪ್ರದೋಷ್, ತಾನು ಕೊಲೆಯಲ್ಲಿ ಭಾಗಿಯಾಗುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಹಲ್ಲೆ ತಡೆಯಲು ಪ್ರಯತ್ನಿಸಿದ್ದೆ. ರೇಣುಕಾಸ್ವಾಮಿಗೆ ಆಹಾರ, ನೀರು ಹಾಗೂ ಬಟ್ಟೆಯ ವ್ಯವಸ್ಥೆ ಮಾಡಿದ್ದೆ ಎಂದು ತಿಳಿಸಿದ್ದಾರೆ.

ರೇಣುಕಾಸ್ವಾಮಿ ಮೃತಪಟ್ಟ ವಿಚಾರ ತಿಳಿದು ತಾನು ಭಯಗೊಂಡಿದ್ದೆ. ಬಳಿಕ ದರ್ಶನ್ ಅವರ ಒತ್ತಡ ಮತ್ತು ಬೆದರಿಕೆಯಿಂದ ಮುಂದಿನ ಬೆಳವಣಿಗೆಗಳಲ್ಲಿ ಭಾಗಿಯಾಗಬೇಕಾಯಿತು ಎಂದು ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ನಾನು ಸಿದ್ಧನಿದ್ದೇನೆ. ಆದ್ದರಿಂದ ನನಗೆ ಕ್ಷಮಾದಾನ ನೀಡಿ ಅಪ್ರೂವರ್ ಆಗಲು ಅವಕಾಶ ನೀಡಬೇಕು ಎಂದು ಎ-14 ಪ್ರದೋಷ್ ಎಸ್. ನ್ಯಾಯಾಲಯವನ್ನು ಕೋರಿದ್ದಾರೆ.