ಬ್ರೇಕಿಂಗ್ ನ್ಯೂಸ್
09-08-26 03:34 pm HK News Staffer ಕ್ರೈಂ
ಉಡುಪಿ, ಆ.8: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಮೂವರು ಶಾರ್ಪ್ ಶೂಟರ್ಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಎ1 ಆರೋಪಿ ರಾಜು, ಎ2 ಆರೋಪಿ ಅನಮೋಲ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವರ ವಿರುದ್ಧ ಹಲವು ರಾಜ್ಯಗಳಲ್ಲಿ ಕೊಲೆ, ಹಲ್ಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸುದ್ದಿಗೋಷ್ಠಿಯಲ್ಲಿ ಆರೋಪಿಗಳ ಕ್ರೈಂ ಡೈರಿಯನ್ನು ಬಿಚ್ಚಿಟ್ಟಿದ್ದಾರೆ. ಆರೋಪಿ ರಾಜು ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ ಹಾಗೂ ದರೋಡೆ ಸೇರಿದಂತೆ ಒಟ್ಟು 26 ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
ಗುತ್ತಿಗೆ ವಿಚಾರಕ್ಕೆ ಹತ್ಯೆ; ₹2–3 ಕೋಟಿ ವಹಿವಾಟಿನಲ್ಲಿ ವೈಮನಸ್ಸು!
ಡೇವಿಡ್ ಡಿಸೋಜಾ ಯುಪಿಸಿಎಲ್ ಕಂಪನಿಯಲ್ಲಿ ಗುತ್ತಿಗೆ ಕೆಲಸ ಮಾಡಿಕೊಂಡಿದ್ದರು. ಸುಮಾರು ₹2ರಿಂದ ₹3 ಕೋಟಿ ಮೊತ್ತದ ಗುತ್ತಿಗೆ ವ್ಯವಹಾರಕ್ಕೆ ಸಂಬಂಧಿಸಿ ಡೇವಿಡ್ ಹಾಗೂ ಮತ್ತೊಬ್ಬ ಗುತ್ತಿಗೆದಾರನ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ಕಾರಣಕ್ಕೆ ಉತ್ತರ ಭಾರತದ ವ್ಯಕ್ತಿಯೊಬ್ಬರು ಸುಪಾರಿ ನೀಡಿ ಡೇವಿಡ್ ಅವರನ್ನು ಹತ್ಯೆ ಮಾಡಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಎಸ್ಪಿ ಹೇಳಿದ್ದಾರೆ.
ಆರೋಪಿಗಳು ಎರಡು ತಿಂಗಳ ಹಿಂದೆಯೇ ಮುದರಂಗಡಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಕೃತ್ಯಕ್ಕೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಹತ್ಯೆಗೆ ಸಹಕರಿಸಿದ ಸ್ಥಳೀಯರು ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
9 ಎಂಎಂ ಪಿಸ್ತೂಲಿನಿಂದ ಗುಂಡು; ಶೂಟರ್ ಖಾತೆಗೆ ₹2 ಲಕ್ಷಕ್ಕೂ ಹೆಚ್ಚು ಹಣ!
ಎ1 ಆರೋಪಿ ರಾಜು 9 ಎಂಎಂ ಪಿಸ್ತೂಲಿನಿಂದ ತೀರಾ ಹತ್ತಿರದಿಂದಲೇ ಗುಂಡು ಹಾರಿಸಿ ಡೇವಿಡ್ ಡಿಸೋಜಾ ಅವರನ್ನು ಹತ್ಯೆ ಮಾಡಿದ್ದಾನೆ. ಹತ್ಯೆಗೂ ಮುನ್ನ ಹಾಗೂ ಹತ್ಯೆಯ ಬಳಿಕ ಹಂತ ಹಂತವಾಗಿ ಶೂಟರ್ ರಾಜು ಅವರ ಬ್ಯಾಂಕ್ ಖಾತೆಗೆ ₹2 ಲಕ್ಷಕ್ಕೂ ಹೆಚ್ಚು ಹಣ ಪಾವತಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಣದ ಮೂಲ ಹಾಗೂ ಸುಪಾರಿ ನೀಡಿದವರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
500ಕ್ಕೂ ಹೆಚ್ಚು ಪೊಲೀಸರಿಂದ ಬಲೆ
ಹತ್ಯೆ ನಡೆದ ಬಳಿಕ ಆರೋಪಿಗಳು ಉಡುಪಿ ಜಿಲ್ಲೆಯಿಂದ ಹೊರ ಹೋಗದಂತೆ ಜಿಲ್ಲೆಯ ಗಡಿಭಾಗಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ಉಡುಪಿ ಹಾಗೂ ಭಟ್ಕಳ ರೈಲ್ವೆ ನಿಲ್ದಾಣಗಳಲ್ಲೂ ತೀವ್ರ ತಪಾಸಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ 500ಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದರು. ರೈಲ್ವೆ ಪೊಲೀಸರ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಗಡಿಭಾಗಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಬಸ್ನಿಂದ ಇಳಿದು ಓಡಿದ ಆರೋಪಿ, ಬೆನ್ನಟ್ಟಿದ ಎಸ್ಐಗೆ ಹಲ್ಲೆ
ಆರೋಪಿಗಳು ಪರಾರಿಯಾಗಲು ಬಳಸಿದ್ದ ಬೈಕ್ ಅನ್ನು ಎರ್ಮಾಳ್ ಬಳಿ ಬಿಟ್ಟು ಹೋಗಿದ್ದರು. ಬೈಕಿನ ನಂಬರ್ ಪ್ಲೇಟ್ ನಕಲಿಯಾಗಿತ್ತು ಎನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಬಸ್ ಮೂಲಕ ತೆರಳುತ್ತಿದ್ದ ವೇಳೆ ಬೈಂದೂರಿನ ಒತ್ತಿನೆಣೆ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಪೊಲೀಸರನ್ನು ಕಂಡ ಮೂವರು ಆರೋಪಿಗಳು ಬಸ್ನಿಂದ ಇಳಿದಿದ್ದಾರೆ. ಈ ವೇಳೆ ಕಾಪು ಪಿಎಸ್ಐ ತೇಜಸ್ವಿ ಅವರು ರಾಜುವನ್ನು ಬೆನ್ನಟ್ಟಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಾಜು, ಪಿಎಸ್ಐ ತೇಜಸ್ವಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪಿಎಸ್ಐ ತೇಜಸ್ವಿ ಅವರು ರಾಜುವಿನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ರಾಜು ಹಾಗೂ ಹಲ್ಲೆಯಿಂದ ಗಾಯಗೊಂಡ ಪಿಎಸ್ಐ ತೇಜಸ್ವಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳನ್ನು ಭಟ್ಕಳ ಹಾಗೂ ಕುಮಟಾದಲ್ಲಿ ಬಂಧಿಸಲಾಗಿದೆ.



ಆರೋಪಿಗಳಿಗೆ ಪರಸ್ಪರ ಪರಿಚಯವೇ ಇರಲಿಲ್ಲ!
ಆರೋಪಿಗಳ ನಡುವೆ ಪರಸ್ಪರ ಪರಿಚಯವೂ ಇರಲಿಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ಸುಳ್ಳು ಹೆಸರುಗಳನ್ನು ಹೇಳಿಕೊಂಡು ಪರಸ್ಪರ ಪರಿಚಯಿಸಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ಅವರ ಬಳಿ 3-4 ಮೊಬೈಲ್ ಮತ್ತು ಹಲವು ಸಿಮ್ ಕಾರ್ಡ್ ಗಳಿದ್ದವು. ಆರೋಪಿಗಳು ತಪ್ಪಿಸಿಕೊಂಡಿದ್ದರೆ ಅವರ ಬಳಿ ಇದ್ದ ಮೊಬೈಲ್ ಫೋನ್ಗಳೂ ಪೊಲೀಸರಿಗೆ ಸಿಗುತ್ತಿರಲಿಲ್ಲ.
ಆರೋಪಿಗಳ ಕ್ರೈಂ ಡೈರಿ ಕೇಳಿದ್ರೆ ಶಾಕ್!
ಪ್ರಮುಖ ಆರೋಪಿ ರಾಜು ವಿರುದ್ಧ 5 ರಾಜ್ಯಗಳಲ್ಲಿ 26 ಪ್ರಕರಣಗಳು ದಾಖಲಾಗಿವೆ. ಇನ್ನೊಬ್ಬ ಆರೋಪಿ ಅನಮೋಲ್ ವಿರುದ್ಧ 2018ರ ಬಳಿಕ ನಾಲ್ಕು ರಾಜ್ಯಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಜಿಯಾವುಲ್ ವಜುಲ್ ಶೇಖ್ ವಿರುದ್ಧ ದರೋಡೆ, ಶೂಟೌಟ್ ಹಾಗೂ ಡಕಾಯಿತಿ ಸೇರಿದಂತೆ 12 ಪ್ರಕರಣಗಳು ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ 9 ಎಂಎಂ ಪಿಸ್ತೂಲ್, ಮೂರು ಮೊಬೈಲ್ ಫೋನ್ಗಳು ಹಾಗೂ ಸಿಮ್ ಕಾರ್ಡ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಪಾರಿ ಕೊಟ್ಟವರು ಯಾರು? ತನಿಖೆ ಚುರುಕು
ಡೇವಿಡ್ ಡಿಸೋಜಾ ಹತ್ಯೆಗೆ ಸುಪಾರಿ ನೀಡಿದ ಪ್ರಮುಖ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ಈಗಾಗಲೇ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗಿದೆ. ಪಾದೂರಿನ ಯುಪಿಸಿಎಲ್ ಗುತ್ತಿಗೆ ಕೆಲಸದ ವಿಚಾರದಲ್ಲಿ ವೈಷಮ್ಯ ಇರುವ ಬಗ್ಗೆ ಶಂಕೆಯಿದ್ದು ಹತ್ಯೆಯ ಹಿಂದಿರುವ ಸಂಪೂರ್ಣ ಜಾಲ, ಹಣದ ವ್ಯವಹಾರ ಹಾಗೂ ಸ್ಥಳೀಯವಾಗಿ ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm