ಓವರ್‌ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್ಥಿ ಅಪಹರಣ, ಹಲ್ಲೆ; ನಟ ದುನಿಯಾ ವಿಜಯ್ ಪುತ್ರನ ವಿರುದ್ಧ FIR

02-09-26 07:12 pm       HK News Staffer   ಕ್ರೈಂ

ಕಾಲೇಜು ವಿದ್ಯಾರ್ಥಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ, ಚಲಿಸುತ್ತಿದ್ದ ವಾಹನದಲ್ಲೇ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಸೇರಿದಂತೆ ಐವರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು , ಸೆ.2: ಕಾಲೇಜು ವಿದ್ಯಾರ್ಥಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ, ಚಲಿಸುತ್ತಿದ್ದ ವಾಹನದಲ್ಲೇ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಸೇರಿದಂತೆ ಐವರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಲ್ಲೆಗೊಳಗಾಗಿರುವ ಮನೀಶ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್ ಸುಚಿ, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಓವರ್‌ಟೇಕ್ ವಿಚಾರದಲ್ಲಿ ಆರಂಭವಾಗಿದ್ದ ಕಿರಿಕ್

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ವಿಜಯ್ ಸೋಮವಾರ (ಆ.31) ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅದೇ ಕಾಲೇಜಿನ ವಿದ್ಯಾರ್ಥಿ ಮನೀಶ್ ಗೌಡ ಹಾಗೂ ಆತನ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಸಾಮ್ರಾಟ್ ಪ್ರಯಾಣಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿ ರೇಗಿಸಿದ್ದರು ಎನ್ನಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿ ಎರಡೂ ಗುಂಪುಗಳ ನಡುವೆ ಕಿರಿಕ್ ಆರಂಭವಾಗಿತ್ತು. ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಾಮ್ರಾಟ್ ವಿಜಯ್ ಮನೀಶ್ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೈಕ್ ಪಾರ್ಕ್ ಮಾಡುತ್ತಿದ್ದಾಗ ಕಾರಿನಲ್ಲಿ ಎಳೆದೊಯ್ದರು

ಮಂಗಳವಾರ (ಸೆ.1) ಮಧ್ಯಾಹ್ನ ಸುಮಾರು 12 ಗಂಟೆಗೆ ಮನೀಶ್ ಗೌಡ ಕಾಲೇಜು ಆವರಣದಲ್ಲಿ ತಮ್ಮ ಬೈಕ್ ಪಾರ್ಕ್ ಮಾಡುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಸಫಾರಿ ಕಾರಿನಲ್ಲಿ ಬಂದ ಸಾಮ್ರಾಟ್ ವಿಜಯ್ ಹಾಗೂ ಅವರ ಸ್ನೇಹಿತರು ಮನೀಶ್ ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಕಾರನ್ನು ಪಟ್ಟಣಗೆರೆ ಮುಖ್ಯ ರಸ್ತೆಯತ್ತ ಚಲಾಯಿಸಿಕೊಂಡು ಹೋಗಲಾಗಿದ್ದು, ಚಲಿಸುತ್ತಿದ್ದ ಕಾರಿನಲ್ಲೇ ಮನೀಶ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮುಖ, ಕುತ್ತಿಗೆ, ಎದೆ ಹಾಗೂ ತಲೆಗೆ ಹಲ್ಲೆ ;

ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್, ವೆಂಕಟೇಶ್, ಸಮೀದ್ ಸೇರಿದಂತೆ ಇತರರು ಮನೀಶ್ ಅವರ ಮುಖ, ಕುತ್ತಿಗೆ, ಎದೆ ಹಾಗೂ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಮನೀಶ್ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಆರೋಪಿಗಳು ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಮನೀಶ್ ಗೌಡ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ಸಾಮ್ರಾಟ್ ವಿಜಯ್ ಹಾಗೂ ಅವರ ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.