ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ; 21 ಕೆ.ಜಿ ಮಾಂಸ ವಶಕ್ಕೆ, ಇಬ್ಬರು ಆರೋಪಿಗಳು ಪರಾರಿ

05-09-26 04:55 pm       HK News Staffer   ಕ್ರೈಂ

ಜಿಂಕೆ ಬೇಟೆಯಾಡಿ, ಮಾಂಸ ಮಾರಾಟಕ್ಕಾಗಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ, 21 ಕೆ.ಜಿ ಜಿಂಕೆ ಮಾಂಸ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಶಿವಮೊಗ್ಗ, ಸೆ.5 : ಜಿಂಕೆ ಬೇಟೆಯಾಡಿ, ಮಾಂಸ ಮಾರಾಟಕ್ಕಾಗಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ, 21 ಕೆ.ಜಿ ಜಿಂಕೆ ಮಾಂಸ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಹೊಸನಗರ ತಾಲೂಕು ರಿಪ್ಪನ್​ಪೇಟೆ ಗ್ರಾಮದಲ್ಲಿ ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ಪೊಲೀಸರು ದಾಳಿ ನಡೆಸಿದ್ದಾರೆ. ರಿಪ್ಪನ್​ಪೇಟೆಯ ಶಬರೀಶ ನಗರದಲ್ಲಿ ಜಿಂಕೆ‌ ಮಾಂಸ ಮಾರಾಟ ಮಾಡುವಾಗ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಎರ್ಟಿಗಾ ಕಾರು, ಅದರಲ್ಲಿದ್ದ 21 ಕೆ.ಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿಯ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ಬಿಜ್ಜೂರ್ ಮಾರ್ಗದರ್ಶನದಲ್ಲಿ ಸಾಗರದ ಅರಣ್ಯ ಸಂಚಾರಿ ದಳದ ಪಿಎಸ್ಐ ವಿನಾಯಕ ಹಾಗೂ ಸಿಬ್ಬಂದಿ ಗಣೇಶ್ ಬಿ.ಸಿ., ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ ಹಾಗೂ ಹೆಚ್.ಬಿ. ದೊಡ್ಡಮನಿ ಹಾಜರಿದ್ದರು‌.

ಜಿಂಕೆ ಮಾಂಸವನ್ನು ಕಾರಿನಲ್ಲಿ ಮಾರಾಟ ಮಾಡುತ್ತಿದ್ದ ರಿಪ್ಪನ್​ಪೇಟೆಯ ಶಬರೀಶ ನಗರ ನಿವಾಸಿ ಗುರುರಾಜ್, ಕಾರಗೋಡು ನಿವಾಸಿ ಗಣೇಶ್ ಕೆ.ಜಿ. ಇಬ್ಬರೂ ಪರಾರಿಯಾಗಿದ್ದಾರೆ. ಸದರಿ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ ಪೊಲೀಸರು ತಿಳಿಸಿದ್ದಾರೆ.