ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾತ ಪ್ರಕರಣ ; 10 ವರ್ಷಗಳ ಬಳಿಕ ಬಸ್ ಚಾಲಕನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

10-09-26 08:16 pm       HK News Staffer   ಕ್ರೈಂ

ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಮೊವಾಡಿ ಕ್ರಾಸ್ ಬಳಿ 10 ವರ್ಷಗಳ ಹಿಂದೆ ನಡೆದಿದ್ದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಅಪಘಾತದಲ್ಲಿ ಡಾನ್ ಬಾಸ್ಕೋ ಶಾಲೆಯ ಎಂಟು ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಕುಂದಾಪುರ, ಸೆ.10: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಮೊವಾಡಿ ಕ್ರಾಸ್ ಬಳಿ 10 ವರ್ಷಗಳ ಹಿಂದೆ ನಡೆದಿದ್ದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಅಪಘಾತದಲ್ಲಿ ಡಾನ್ ಬಾಸ್ಕೋ ಶಾಲೆಯ ಎಂಟು ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಕುಂದಾಪುರ ಮೂರನೇ ಹೆಚ್ಚುವರಿ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಣಿಕಂಠ ಎಂ.ಎಸ್. ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಯಾಗಿದ್ದ ಖಾಸಗಿ ಬಸ್ ಚಾಲಕ ಮಂಜುನಾಥ್ ತ್ರಾಸಿಗೆ ಒಂದು ವರ್ಷ 17 ದಿನಗಳ ಸರಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, 12,500 ರೂ. ದಂಡವನ್ನೂ ವಿಧಿಸಲಾಗಿದೆ.

2016ರ ಜೂನ್ 21ರಂದು ಬೆಳಗ್ಗೆ ಸುಮಾರು 9.25ಕ್ಕೆ ಈ ದುರ್ಘಟನೆ ನಡೆದಿತ್ತು. ಹೆಮ್ಮಾಡಿ ಕಡೆಯಿಂದ ಮಾರ್ಟಿನ್ ಸೆಬಾಸ್ಟಿಯನ್ ಅವರು ಶಾಲಾ ಮಕ್ಕಳಿದ್ದ ಮಾರುತಿ ಓಮ್ನಿಯನ್ನು ಚಲಾಯಿಸಿಕೊಂಡು ಬರುತ್ತಿದ್ದರು. ಮೊವಾಡಿ ಕ್ರಾಸ್ ಬಳಿ ಶಾಲಾ ರಸ್ತೆಯತ್ತ ತಿರುಗುತ್ತಿದ್ದ ವೇಳೆ, ತ್ರಾಸಿ ಕಡೆಯಿಂದ ಕುಂದಾಪುರದತ್ತ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಬರುತ್ತಿದ್ದ ಮಂಜುನಾಥ್ (42) ಚಲಾಯಿಸುತ್ತಿದ್ದ ಖಾಸಗಿ ಬಸ್ ಓಮ್ನಿಗೆ ಡಿಕ್ಕಿ ಹೊಡೆದಿತ್ತು.

ಭೀಕರ ಅಪಘಾತದಲ್ಲಿ ಶಾಲಾ ವಿದ್ಯಾರ್ಥಿಗಳಾದ ಅನನ್ಯ ಡಿಸಿಲ್ವಾ, ನಿಖಿತಾ ಡಿಸಿಲ್ವಾ, ರಾಯ್ಸ್ಟನ್ ಲೋಬೋ, ಕ್ಲಾರಿಸ್ಸಾ, ಅಂಸಿತಾ ಒಲಿವೇರಾ, ಅಲ್ವಿಟಾ ಒಲಿವೇರಾ, ಡೆಲ್ವಿನ್ ಡಯಾಸ್ ಹಾಗೂ ಕ್ಯಾಲಿಸ್ಟಾ ಮೃತಪಟ್ಟಿದ್ದರು. ಅಪಘಾತದಲ್ಲಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ ಹಾಗೂ ಸಿಪಿಐ ರಾಘವ್ ಎಸ್. ಪಡೀಲ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಉಮಾ ದಾಮೋದರ್ ನಾಯಕ್ ವಾದ ಮಂಡಿಸಿದ್ದರು.

ಅಪಘಾತದ ಬಳಿಕ ಬಂಧನಕ್ಕೊಳಗಾಗಿದ್ದ ಬಸ್ ಚಾಲಕ ಮಂಜುನಾಥ್ ಜಾಮೀನು ಪಡೆದು ಕೆಲ ದಿನಗಳಲ್ಲೇ ಬಿಡುಗಡೆಯಾಗಿದ್ದ. ಬಳಿಕ ಚಾಲಕ ವೃತ್ತಿಯನ್ನು ತೊರೆದು ತನ್ನ ಹುಟ್ಟೂರು ಹುಬ್ಬಳ್ಳಿಗೆ ತೆರಳಿ ಕೃಷಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ನ್ಯಾಯಾಲಯದ ತೀರ್ಪಿನ ಬಳಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಮೇಲ್ಮನವಿ ಸಲ್ಲಿಸದಿದ್ದರೆ ಆರೋಪಿಯ ವಿರುದ್ಧ ಬಂಧನ ವಾರಂಟ್ ಜಾರಿಯಾಗುವ ಸಾಧ್ಯತೆ ಇದೆ.