ಪೊಲೀಸರಿಗೆ ಹಲ್ಲೆ ; ಮತ್ತೆ ಆರು ಮಂದಿ ಸೆರೆ, ಮಾಯಾ ಗ್ಯಾಂಗ್ ಗೋಲಿಬಾರ್ ಸಂಚು ಬಯಲು !! ಮುಚ್ಚಿಹೋಗಿದ್ದ ಕೇಸ್ ಮರುಜೀವ

19-01-21 01:58 pm       Mangalore Correspondent   ಕ್ರೈಂ

ಪೊಲೀಸ್ ಸಿಬಂದಿಗೆ ತಲವಾರಿನಿಂದ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ಮಂಗಳೂರು, ಜ.19; ಪೊಲೀಸ್ ಸಿಬಂದಿಗೆ ತಲವಾರಿನಿಂದ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಪ್ರೇರಣೆ ಮತ್ತು ಸಂಚು ನಡೆಸಿದ್ದ ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ. 

ಅನೀಶ್ ಅಶ್ರಫ್(22), ಅಬ್ದುಲ್ ಖಾದರ್ (23), ಶೇಕ್ ಮಹಮ್ಮದ್ ಹ್ಯಾರಿಸ್(31), ಮಹಮ್ಮದ್ ಕಾಯಿಸ್ (24), ರಾಹಿಲ್ ಅಲಿಯಾಸ್ ಚೋಟು (18), ಮಹಮ್ಮದ್ ನವಾಜ್ (30) ಬಂಧಿತರು. ಕಳೆದ ವರ್ಷ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣದ ಘಟನೆಗೆ ಪ್ರತೀಕಾರ ತೀರಿಸಬೇಕೆಂದು ಅದೇ ದಿನ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಆದರೆ, ಡಿ.19ರಂದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸುತ್ತಾರೆ, ಇದರಿಂದ ಸುಲಭದಲ್ಲಿ ಸಿಕ್ಕಿಬೀಳಬಹುದೆಂಬ ಭಯದಿಂದ ಎರಡು ದಿನ ಮೊದಲೇ ಸಾಕಷ್ಟು ಚಿಂತಿಸಿ ವ್ಯವಸ್ಥಿತವಾಗಿ ಪ್ಲಾನ್ ಹಾಕಿದ್ದರು. ಅದರಲ್ಲೂ ಮೈನರ್ ಯುವಕನಿಂದ ಕೃತ್ಯ ಮಾಡಿಸಿದರೆ ಸಿಕ್ಕಿಬೀಳುವುದಿಲ್ಲ. ಅರೆಸ್ಟ್ ಆದರೂ, ಹೊರಗೆ ಬರಬಹುದೆಂದು ಪ್ಲಾನ್ ಮಾಡಿ, ಕೃತ್ಯ ನಡೆಸಿದ್ದರು ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ. 

ಸ್ಥಳೀಯವಾಗಿ ಈ ತಂಡ, ಮಾಯಾ ಗ್ಯಾಂಗ್, ಮಾಯಾ ಟ್ರೂಪ್ ಹೆಸರಲ್ಲಿ ಗುರುತಿಸ್ಕೊಂಡಿತ್ತು. ಮೆಡಿಕಲ್ ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಮಹಮ್ಮದ್ ನವಾಜ್ ಎಂಬಾತ ಮತ್ತು ಬರಿಸುವ ಟ್ಯಾಬ್ಲೆಟ್ ಕೊಟ್ಟು ಕೃತ್ಯಕ್ಕೆ ಸಂಚು ತಯಾರಿಸಿದ್ದ. ಮೈನರ್ ಆಗಿದ್ದ ಯುವಕನಿಗೆ ಮೂರ್ನಾಲ್ಕು ಟ್ಯಾಬ್ಲೆಟ್ ಕೊಟ್ಟು ಕೃತ್ಯ ನಡೆಸಲು ಪ್ರೇರಣೆ ನೀಡಿದ್ದ. ಹಲಾಲ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ನವಾಜ್ ಮತ್ತು ಮೈನರ್ ಯುವಕ ಸೇರಿ ಕೃತ್ಯ ನಡೆಸಿದ್ದರು. 

ಮೆಡಿಕಲ್ ಸ್ಟೋರ್ ನಲ್ಲಿ 600 ರೂಪಾಯಿಗೆ ಹತ್ತು ಮಾತ್ರೆಗಳ ಸ್ಟ್ರಿಪ್ ಸಿಗುತ್ತದೆ‌. ಅದನ್ನು ಮಹಮ್ಮದ್ ನವಾಜ್, ಈ ತಂಡಕ್ಕೆ ಪೂರೈಕೆ ಮಾಡುತ್ತಿದ್ದ. ಸಾಮಾನ್ಯವಾಗಿ ವೈದ್ಯರ ಚೀಟಿ ಇಲ್ಲದೆ ಮಾರುವಂತಿಲ್ಲ. ಆದರೆ, ಕೆಲವು ಮೆಡಿಕಲ್ ಸ್ಟೋರ್ ಗಳಲ್ಲಿ ಇದನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕಮಿಷನರ್ ಮಾಹಿತಿ ನೀಡಿದರು. ಇದೀಗ ಸಿಕ್ಕಿಬಿದ್ದಿರುವ ಆರು ಮಂದಿಯನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ. ಈ ಘಟನೆಗೆ ಬೇರೇನಾದರೂ ಪೂರ್ವ ಸಂಚು ಇತ್ತೇ ಅಥವಾ ಸಂಘಟನೆಯ ಕೈವಾಡ ಇದೆಯೇ ಅನ್ನುವ ಬಗ್ಗೆ ವಿಚಾರಣೆ ನಡೆಸಲಾಗುವುದು. ಸದ್ಯಕ್ಕೆ ಅಂತಹ ಮಾಹಿತಿ ಇಲ್ಲ. ಬಂಧಿತರಾಗಿರುವ ಮಂದಿ ಗೋಲಿಬಾರ್ ಘಟನೆಯಲ್ಲಿ ಮೃತಪಟ್ಟವರ ಜೊತೆ ಸಂಬಂಧ ಹೊಂದಿದ್ದರು. ಕೆಲವರು ಹತ್ತಿರದ ಸಂಬಂಧಿಗಳೂ ಆಗಿದ್ದರು ಎಂದು ಕಮಿಷನರ್ ತಿಳಿಸಿದರು. ‌

ಡಿ.16ರಂದು ಮಂಗಳೂರಿನ ನ್ಯೂಚಿತ್ರಾ ಟಾಕೀಸ್ ಮುಂಭಾಗದಲ್ಲಿ ಕೃತ್ಯ ನಡೆದಿತ್ತು. ಬಂದರು ಠಾಣೆಯ ಗಣೇಶ್ ಕಾಮತ್ ಎಂಬ ಹೆಡ್ ಕಾನ್ಸ್ ಟೇಬಲ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ, ತಂಡ ಪರಾರಿಯಾಗಿತ್ತು. ಆನಂತರ ಕೃತ್ಯ ನಡೆಸಿದ್ದ ನವಾಜ್ ಸೇರಿ ಇಬ್ಬರನ್ನು ಕದ್ರಿ ಪೊಲೀಸರು ಬಂಧಿಸಿ ಕೈತೊಳೆದುಕೊಂಡಿದ್ದರು. ಆದರೆ, ಕೃತ್ಯಕ್ಕೆ ಸಂಚು ರೂಪಿಸಿದ ತಂಡವನ್ನು ಪತ್ತೆ ಮಾಡಿರಲಿಲ್ಲ. ಹೊಸ ಕಮಿಷನರ್ ಬಳಿ ಮಾಧ್ಯಮದವರು ಇತ್ತೀಚೆಗೆ ಆ ಘಟನೆ ಬಗ್ಗೆ ಮಾಹಿತಿ ಕೇಳಿದ್ದರಿಂದ ಎಚ್ಚೆತ್ತು, ಪ್ರಕರಣವನ್ನು ಮತ್ತೆ ತನಿಖೆಗೊಳಪಡಿಸಿದ್ದಾರೆ. ಅಲ್ಲದೆ, ಈ ಕೃತ್ಯದ ಹಿಂದೆ ಮಾಯಾ ಗ್ಯಾಂಗ್ ಇರುವುದನ್ನು ಪತ್ತೆ ಮಾಡಿದ್ದಾರೆ.

Also Read : ಪೊಲೀಸರಿಗೆ ಹಲ್ಲೆ ; ಗೋಲಿಬಾರ್ ಕೃತ್ಯಕ್ಕೇ ಪ್ರತೀಕಾರ ! ಯಾರಿಗೆ ಬೇಕ್ರೀ ಊರ ಉಸಾಬರಿ ?

In connection to the Sword attack on Police Head Constable at Car Street in Mangalore Six persons of Maya Gang have been arrested by the city Police said Police Commissioner Shashi Kumar.