ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಹೋಮಕುಂಡದ ಕೊಲೆಗಾತಿ ರಾಜೇಶ್ವರಿ

18-03-21 03:35 pm       Udupi Correspondent   ಕ್ರೈಂ

ಭಾಸ್ಕರ ಶೆಟ್ಟಿಯನ್ನು ಹೋಮ ಕುಂಡಕ್ಕೆ ಹಾಕಿ ಕೊಲೆಗೈದು ಸಿಕ್ಕಿಬಿದ್ದಿದ್ದ ರಾಜೇಶ್ವರಿ ಶೆಟ್ಟಿ ವಿರುದ್ಧ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

ಉಡುಪಿ, ಮಾ.18: ದುಬೈನಲ್ಲಿ ಉದ್ಯಮಿಯಾಗಿದ್ದ ಭಾಸ್ಕರ ಶೆಟ್ಟಿಯನ್ನು ಹೋಮ ಕುಂಡಕ್ಕೆ ಹಾಕಿ ಕೊಲೆಗೈದು ಸಿಕ್ಕಿಬಿದ್ದಿದ್ದ ರಾಜೇಶ್ವರಿ ಶೆಟ್ಟಿ ವಿರುದ್ಧ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

ರಾಜೇಶ್ವರಿ ಶೆಟ್ಟಿಗೆ ಸೇರಿದ ಉಡುಪಿ ಬಸ್ ನಿಲ್ದಾಣದ ಬಳಿಯಿರುವ ಶ್ರೀ ದುರ್ಗಾ ಇಂಟರ್ನ್ಯಾಶನಲ್ ಹೊಟೇಲಿನ ಕೊಠಡಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಮೂವರನ್ನು ಬಂಧಿಸಿರುವ ಪೊಲೀಸರು ಹೊಟೇಲ್ ಮಾಲಕಿ ರಾಜೇಶ್ವರಿ ಶೆಟ್ಟಿ ಮತ್ತು ಇನ್ನಿಬ್ಬರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಇಷ್ಟಾಗುತ್ತಿದ್ದಂತೆ, ರಾಜೇಶ್ವರಿ ಶೆಟ್ಟಿ ದಿಢೀರ್ ನಾಪತ್ತೆಯಾಗಿದ್ದಾರೆ.

ರಾಜೇಶ್ವರಿ ಶೆಟ್ಟಿ ಯಾರು ಗೊತ್ತೇ..

ನಾಲ್ಕು ವರ್ಷಗಳ ಹಿಂದೆ ಬೆಳಕಿಗೆ ಬಂದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ. ದುಬೈನಲ್ಲಿ ಉದ್ಯಮಿಯಾಗಿದ್ದ ಉಡುಪಿ ಮೂಲದ ಭಾಸ್ಕರ ಶೆಟ್ಟಿಗೆ ಉಡುಪಿಯಲ್ಲಿ ಹೊಟೇಲ್, ಮೆಡಿಕಲ್ ಇನ್ನಿತರ ಉದ್ಯಮಗಳಿದ್ದವು. ಉಡುಪಿಯಲ್ಲಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ ಇಲ್ಲಿನ ವ್ಯವಹಾರ ನೋಡಿಕೊಂಡಿದ್ದಳು. ಇದೇ ವೇಳೆ, ರಾಜೇಶ್ವರಿ ಶೆಟ್ಟಿಗೆ ಪರಿಚಯ ಆಗಿದ್ದ ಕಾರ್ಕಳ ಮೂಲದ ಜ್ಯೋತಿಷಿ ನಿರಂಜನ್ ಭಟ್ ಜೊತೆಗೆ ಸಂಬಂಧ ಇರುವುದು ಗೊತ್ತಾದ ಭಾಸ್ಕರ ಶೆಟ್ಟಿ ಕ್ರುದ್ಧರಾಗುತ್ತಾರೆ. ಅಲ್ಲದೆ, ತನ್ನ ಇಡೀ ಆಸ್ತಿಯಲ್ಲಿ ಪತ್ನಿ ಮತ್ತು ಮಗನಿಗೆ ಪಾಲು ಸಿಗದಂತೆ ವಿಲ್ ಬರೆದಿಡುತ್ತಾರೆ.

ವಿಚಾರ ಗೊತ್ತಾದ ರಾಜೇಶ್ವರಿ ಶೆಟ್ಟಿ ಪತಿಯ ಜೊತೆ ಜಗಳವಾಡುತ್ತಾಳೆ. ಅಷ್ಟೇ ಅಲ್ಲ, ಬೆಳೆದು ನಿಂತ ಮಗನನ್ನು ಕೂಡ ಗಂಡನ ವಿರುದ್ಧ ಎತ್ತಿಕಟ್ಟುತ್ತಾಳೆ. ಪತಿಯನ್ನು ಹಾಗೇ ಬಿಟ್ಟರೆ ಯಾವುದೇ ಆಸ್ತಿಯೂ ಸಿಗುವುದಿಲ್ಲ ಎಂದು ಜ್ಯೋತಿಷಿ ನಿರಂಜನ್ ಭಟ್ ಜೊತೆ ಸೇರಿ ಉಪಾಯದಿಂದ ಕೊಲ್ಲಲು ಸಂಚು ಹೂಡುತ್ತಾರೆ. ಉಡುಪಿಯ ಇದೇ ಹೊಟೇಲಿಗೆ ಮಾತುಕತೆಗೆ ಕರೆದು ಅಲ್ಲಿಂದ ಕಾರ್ಕಳದ ನಿರಂಜನ್ ಭಟ್ಟನ ಮನೆಗೆ ತೆರಳುತ್ತಾರೆ.

ದಾರಿ ಮಧ್ಯದಲ್ಲೇ ಭಾಸ್ಕರ ಶೆಟ್ಟಿಯನ್ನು ಸಾಯಿಸಿ, ನಿರಂಜನ್ ಭಟ್ಟನ ಮನೆಯಲ್ಲಿ ಹೋಮ ಕುಂಡಕ್ಕೆ ಹಾಕಿ ರಾತ್ರೋರಾತ್ರಿ ಹೆಸರಾಂತ ಉದ್ಯಮಿಯೊಬ್ಬರ ಹೆಣವನ್ನು ಭಸ್ಮ ಮಾಡುತ್ತಾರೆ. ಪ್ರಕರಣ ಮುಚ್ಚಿ ಹಾಕಲು ಹೋಮ ಕುಂಡಕ್ಕೆ ಹಾಕಿ, ಶವವೇ ಸಿಗದಂತೆ ಪ್ಲಾನ್ ಮಾಡಿದ್ದರು. ಆದರೆ, ಭಾಸ್ಕರ ಶೆಟ್ಟಿ ಮತ್ತು ರಾಜೇಶ್ವರಿ ನಡುವೆ ವೈಮನಸ್ಸು ಇದ್ದ ವಿಚಾರ ತಿಳಿದಿದ್ದ ಭಾಸ್ಕರ ಶೆಟ್ಟಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ರಾಜೇಶ್ವರಿ ಬಗ್ಗೆಯೇ ಅನುಮಾನ ಪಡುತ್ತಾರೆ. ತನಿಖೆ ನಡೆಸಿದ ಪೊಲೀಸರು ಹಣಕ್ಕಾಗಿ ಪತಿಯನ್ನೇ ಕೊಲೆಗೈದ ಪತ್ನಿ ಮತ್ತು ಆಕೆಯ ಮಗ ಮತ್ತು ಪ್ರಿಯಕರ ನಿರಂಜನ ಭಟ್ಟನನ್ನು ಬಂಧಿಸುತ್ತಾರೆ. ಇದಾಗಿ ಮೂರು ವರ್ಷಗಳ ಕಾಲ ಮಂಗಳೂರಿನ ಜೈಲಿನಲ್ಲಿದ್ದ ರಾಜೇಶ್ವರಿಗೆ ಕಳೆದ ವರ್ಷವಷ್ಟೇ ಜಾಮೀನು ಆಗಿತ್ತು.

ಇದಕ್ಕೆಲ್ಲ ರಾಜೇಶ್ವರಿಯ ಸಹವಾಸ ದೋಷ ಕಾರಣವೋ ಏನೋ... ಅಂದು ನಿರಂಜನ ಭಟ್ಟನ ಸಹವಾಸ ಮಾಡಿ, ಗಂಡನನ್ನೇ ಕೊಲೆ ಮಾಡಿ ಜೈಲಿಗೆ ಹೋಗಿದ್ದಳು. ಈಗ ಪಡ್ಡೆಗಳ ಸಹವಾಸ ಮಾಡಿ ತನ್ನದೇ ಹೊಟೇಲಿನಲ್ಲಿ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. 

Udupi Bhaskar Shetty murder accused wife Rajeshwari Sheety accused of governing prostitution in a lodge near City bus stand. She is said to be missing and the cops are in search of her.