ಅಕ್ರಮ ಸಂಬಂಧವೇ ರಕ್ತಪಾತಕ್ಕೆ ಕಾರಣ.. ನನ್ನ ಹತ್ಯೆಗೆ ಸುಪಾರಿ ನೀಡಿದ್ದರು ; ಕಮಲಾಕರ ಭಟ್‌ ಬಗ್ಗೆ ಸುಚಿತ್ರಾ ಪುತ್ರಿ ಆರೋಪ, ರೀಲ್ಸ್ ರಾಣಿಗೆ ಕಾರು, ಬೈಕ್ ಗಿಫ್ಟ್ ನೀಡಿದ್ದ ಜ್ಯೋತಿಷಿ ! ಗೋಶಾಲೆ ಹೆಸರಲ್ಲಿ ಕೋಟಿ ಲೂಟಿ 

06-02-26 06:36 pm       HK News Desk   ಕ್ರೈಂ

ರೀಲ್ಸ್ ರಾಣಿ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸಿದ್ದಾಪುರದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿಗಳು ಹೊರಬರುತ್ತಿದ್ದು ಅಕ್ರಮ ಸಂಬಂಧ, ಐಷಾರಾಮಿ ಬದುಕು ಮತ್ತು ಅನುಮಾನಾಸ್ಪದ ಆಸ್ತಿ ಸಂಪಾದನೆ ಈ ಎಲ್ಲ ಅಂಶಗಳು ಬೆರೆತಿದ್ದು ರಾಜ್ಯವನ್ನೇ ಬೆಚ್ಚಿಬೀಳಿಸುತ್ತಿವೆ. 

ಶಿವಮೊಗ್ಗ, ಫೆ.6 : ರೀಲ್ಸ್ ರಾಣಿ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸಿದ್ದಾಪುರದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿಗಳು ಹೊರಬರುತ್ತಿದ್ದು ಅಕ್ರಮ ಸಂಬಂಧ, ಐಷಾರಾಮಿ ಬದುಕು ಮತ್ತು ಅನುಮಾನಾಸ್ಪದ ಆಸ್ತಿ ಸಂಪಾದನೆ ಈ ಎಲ್ಲ ಅಂಶಗಳು ಬೆರೆತಿದ್ದು ರಾಜ್ಯವನ್ನೇ ಬೆಚ್ಚಿಬೀಳಿಸುತ್ತಿವೆ. 

ಜ್ಯೋತಿಷಿ ಕಮಲಾಕರ ಭಟ್ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಂಪಾದಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ 10 ಎಕರೆಗೂ ಅಧಿಕ ಜಮೀನು ಖರೀದಿಸಿದ್ದು, ಗೋಶಾಲೆ, ಮಠ ಹಾಗೂ ದೇವಸ್ಥಾನ ನಿರ್ಮಿಸುವುದಾಗಿ ಹೇಳಿಕೊಂಡು ದೇಣಿಗೆ ಸಂಗ್ರಹಿಸಿದ್ದರು. ಆದರೆ ಆ ಸ್ಥಳದಲ್ಲಿ ನೋಡಿದರೆ ಗೋವುಗಳೂ ಇಲ್ಲ, ಸಿಬ್ಬಂದಿಯೂ ಇಲ್ಲ. ಸದ್ಯಕ್ಕೆ ಕೆಲ ಶೆಡ್‌ಗಳು ಮತ್ತು ಅಪೂರ್ಣ ದೇವಸ್ಥಾನ ಕಾಮಗಾರಿಯಷ್ಟೇ ಗೋಚರಿಸುತ್ತಿದೆ. ಈ ಆಸ್ತಿ ಮೂಲದ ಕುರಿತು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಇದೇ ವೇಳೆ ಪ್ರೇಯಸಿ ಸುಚಿತ್ರಾಗೆ ಕಮಲಾಕರ್ ಭಟ್ ನೀಡಿದ್ದ ಕಾರು, ಬೈಕ್ ಇನ್ನಿತರ ದುಬಾರಿ ವಸ್ತುಗಳನ್ನು ನೀಡಿದ್ದನೆಂಬುದು ಬಯಲಾಗಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದ ‘ಟಾಟಾ ಪಂಚ್’ ಕಾರು ಸೇರಿ ಎರಡು ಕಾರುಗಳು, ರಾಯಲ್ ಎನ್‌ಫೀಲ್ಡ್ ಬೈಕ್ ಸೇರಿದಂತೆ ಇನ್ನೂ ಹಲವು ಉಡುಗೊರೆಗಳನ್ನು ಭಟ್ ಸುಚಿತ್ರಾಳಿಗೆ ನೀಡಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೇ ಕಾರು, ಬೈಕ್ ನಲ್ಲಿ ಕುಳಿತು ಸುಚಿತ್ರಾ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಗಮನ ಸೆಳೆಯುತ್ತಿದ್ದಳು ಎನ್ನಲಾಗಿದೆ.

ಕೊಲೆ ಪ್ರಕರಣದ ಕುರಿತು ಮೃತ ವಸಂತ್ ನಾಯ್ಕ್ ಸಹೋದರ, ಸುಚಿತ್ರಾ ಮಾಜಿ ಗಂಡ ಮಹೇಶ್ ನೀಡಿದ ಹೇಳಿಕೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ. “ಅವರು ನನ್ನನ್ನು ಕೊಲ್ಲಲು ಬಂದಿಲ್ಲ. ಅವರ ಟಾರ್ಗೆಟ್ ನನ್ನ ಮಗಳಾಗಿದ್ದಳು. ನನ್ನ ಮಗಳನ್ನು ಕಳುಹಿಸಿಕೊಡುವಂತೆ ಸುಚಿತ್ರಾ ಬೆದರಿಕೆ ಹಾಕಿದ್ದಳು. ಮಗಳನ್ನು ರಕ್ಷಿಸಲು ನಾನು ಕೋಣೆಯಲ್ಲಿ ಕೂಡಿಹಾಕಿದೆ. ಆಗ ನಾಲ್ವರು ಚಾಕು ಹಿಡಿದು ದಾಳಿ ನಡೆಸಿದ್ದು ನನ್ನ ಅಣ್ಣ ಅಡ್ಡಬಂದಾಗ ಎದೆಗೆ ಚಾಕು ಚುಚ್ಚಿದ್ದಾರೆ. ಇದು ಸಂಪೂರ್ಣ ಪೂರ್ವಯೋಜಿತ ಕೃತ್ಯ” ಎಂದು ಮಹೇಶ್ ಆರೋಪಿಸಿದ್ದಾರೆ.

ಮಹೇಶ್ ಪುತ್ರಿ ನೀಡಿರುವ ಹೇಳಿಕೆಯೂ ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿಸಿದೆ. “ಅಮ್ಮ ಮತ್ತು ಕಮಲಾಕರ್ ಭಟ್ ನಡುವಿನ ಅಕ್ರಮ ಸಂಬಂಧವೇ ಈ ರಕ್ತಪಾತಕ್ಕೆ ಕಾರಣ. ಗುರೂಜಿ ನನಗೆ ಹಿಂಸೆ ನೀಡುತ್ತಿದ್ದ. ಅಮ್ಮನೇ ನನಗೆ ವಿಷ ಹಾಕಿ ಮುಗಿಸುವುದಾಗಿ ಬೆದರಿಕೆ ಹಾಕಿದ್ದಳು. ಐವರು ಹಿಂದಿ ಮಾತನಾಡುವ ಹಂತಕರಿಗೆ ಸುಪಾರಿ ನೀಡಲಾಗಿತ್ತು” ಎಂದು ಆಕೆ ಕಣ್ಣೀರಿಟ್ಟಿದ್ದಾಳೆ.

ಐಷಾರಾಮಿ ಬದುಕಿನ ಆಸೆ, ಹಣದ ದಾಹ ಮತ್ತು ಅಕ್ರಮ ಸಂಬಂಧ ಈ ಮೂರೂ ಸೇರಿ ಒಬ್ಬ ಅಮಾಯಕ ವ್ಯಕ್ತಿಯ ಪ್ರಾಣ ಬಲಿ ಪಡೆದಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Fresh revelations have emerged in the murder case of Siddapura’s Vasanth Naik, allegedly linked to astrologer Kamalakar Bhat and social media personality Suchitra, popularly known as “Reels Rani.” Investigators are probing claims of an illicit relationship, lavish spending, and suspicious property accumulation.