ಬಿಟ್ ಕಾಯಿನ್ ಹೆಸರಲ್ಲಿ ವಂಚನೆ ; ಹಣಕ್ಕಾಗಿ ಏಜಂಟನ ಕಿಡ್ನಾಪ್, ಮಂಜೇಶ್ವರದ ಏಳು ಮಂದಿ ಸೆರೆ

27-04-21 04:02 pm       Mangalore Correspondent   ಕ್ರೈಂ

ಬಿಟ್ ಕಾಯಿನ್ ಹೆಸರಲ್ಲಿ ಹಣ ಹೂಡಿಕೆ ಮಾಡಿಸಿ, ವಂಚಿಸಿದ ಕಾರಣಕ್ಕೆ ಪನಿ ಏಜಂಟನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ಸಂಬಂಧಿಸಿ ಉಳ್ಳಾಲ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಮಂಗಳೂರು, ಎ.27: ಬಿಟ್ ಕಾಯಿನ್ ಹೆಸರಲ್ಲಿ ಹಣ ಹೂಡಿಕೆ ಮಾಡಿಸಿ, ವಂಚಿಸಿದ ಕಾರಣಕ್ಕೆ ಹಣ ಕಳಕೊಂಡ ವ್ಯಕ್ತಿಯೇ ಸುಪಾರಿ ಕೊಟ್ಟು ಕಂಪನಿ ಏಜಂಟನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ನಡೆದಿದ್ದು, ಪ್ರಕರಣ ಸಂಬಂಧಿಸಿ ಉಳ್ಳಾಲ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಉಳ್ಳಾಲದ ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ಅಶ್ರಫ್ ಎಂಬವರು ಬಿಟ್ ಕಾಯಿನ್ ಗೆ ಹಣ ಹೂಡಿಕೆ ಮಾಡಿದರೆ, ಮೂರು ವರ್ಷದಲ್ಲಿ ಡಬಲ್ ಆಗುವುದೆಂದು ನಂಬಿಸಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮಹಮ್ಮದ್ ಇಕ್ಬಾಲ್ ಬಳಿಯಿಂದ 27 ಲಕ್ಷ ಹಣ ಪಡೆದಿದ್ದರು. ಆದರೆ, ಹಣ ಮರಳಿಸದ ಕಾರಣ ಕೋಪಗೊಂಡ ಮಹಮ್ಮದ್ ಇಕ್ಬಾಲ್, ತನ್ನ ಸಹಚರರ ಜೊತೆ ಸೇರಿ ಮಹಮ್ಮದ್ ಅಶ್ರಫನ್ನು ಎ.23ರಂದು ಅಹರಿಸಿದ್ದು, ಮಂಜೇಶ್ವರಕ್ಕೆ ಒಯ್ದು ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಡಿಹಾಕಿದ್ದಲ್ಲದೆ, ಬಿಡಿಸಿಕೊಂಡು ಹೋಗಬೇಕಿದ್ದರೆ 55 ಲಕ್ಷ ಹಣ ಕೊಡಬೇಕು ಎಂದು ಹೇಳಿ ಮಹಮ್ಮದ್ ಅಶ್ರಫ್ ಗೆ ಸೇರಿದ 60 ಸೆಂಟ್ ಜಾಗದ ದಾಖಲೆ ಪತ್ರಗಳನ್ನು ಕಿತ್ತುಕೊಂಡಿದ್ದರು. ಈ ಬಗ್ಗೆ ಮಹಮ್ಮದ್ ಅಶ್ರಫ್ ಪತ್ನಿಗೆ ಆರೋಪಿಗಳು ಇಂಟರ್ನೆಟ್ ಕರೆ ಮಾಡಿ ಬೆದರಿಕೆಯನ್ನೂ ಒಡ್ಡಿದ್ದರು.

ಮಹಮ್ಮದ್ ಅಶ್ರಫ್ ಪತ್ನಿ ಈ ಬಗ್ಗೆ ಉಳ್ಳಾಲ ಠಾಣೆಗೆ ಎ.23ರಂದು ದೂರು ನೀಡಿದ್ದು , ಪೊಲೀಸರು ಪ್ರಕರಣ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಮಂಜೇಶ್ವರದ ಮಚ್ಚಂಪಾಡಿ ನಿವಾಸಿಗಳಾದ ಮಹಮ್ಮದ್ ಇಕ್ಬಾಲ್(33), ಯಾಕೂಬ್ ಎಂ.(33), ಉಮ್ಮರ್ ನವಾಫ್ (25), ಬಂದ್ಯೋಡ್ ನಿವಾಸಿ ಶಂಶೀರ್ (30), ಸೈಯದ್ ಮಹಮ್ಮದ್ ಕೌಸರ್ (41), ನೌಶದ್ ಮಚ್ಚಂಪಾಡಿ(27), ಮಂಗಲ್ಪಾಡಿ ನಿವಾಸಿ ಶೇಖ್ ಮಹಮ್ಮದ್ ರಿಯಾಜ್ (25) ಬಂಧಿತರು. ಮಹಮ್ಮದ್ ಅಶ್ರಫ್ ಮತ್ತು ಆತನ ಜೊತೆ ಸಹಕರಿಸಿದ್ದ ಜಾವೇದ್ ಇಬ್ಬರನ್ನೂ ಅಪಹರಿಸಲಾಗಿತ್ತು. ಪೊಲೀಸರ ಕಾರ್ಯಾಚರಣೆ ವೇಳೆ, ತಲಪಾಡಿ ಗ್ರಾಮದ ಸಾಂತ್ಯ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಕೂಡಿಹಾಕಲಾಗಿತ್ತು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಎಂಸಿಟಿ ಕಂಪನಿಗೆ ಹೂಡಿಕೆ ಮಾಡಿದ್ದ 27 ಲಕ್ಷ ಹಣದಲ್ಲಿ ಡಾಲರ್ ಲೆಕ್ಕದಲ್ಲಿ 99 ಲಕ್ಷ ಆಗಿ ಮರಳಿ ಸಿಗಬೇಕಿತ್ತು ಎನ್ನಲಾಗುತ್ತಿದೆ. ಇದೇ ವಿಚಾರದಲ್ಲಿ ತಕರಾರು ನಡೆದು ಇಕ್ಬಾಲ್, ಅಶ್ರಫ್ ಕೈಯಿಂದ 10 ಲಕ್ಷ ರೂ. ಪಡೆದಿದ್ದ. ಉಳಿದ ಹಣಕ್ಕಾಗಿ ಅಪಹರಿಸಿ, ಹಣ ಕೀಳುವ ಯತ್ನದಲ್ಲಿ ತೊಡಗಿದ್ದರು. ಇದಕ್ಕಾಗಿ ಆರೋಪಿ ಇಕ್ಬಾಲ್ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉಪ್ಪಳದ ನಟೋರಿಯಸ್ ರೌಡಿ ನಪ್ಪಟೆ ರಫೀಕ್ ನೆರವು ಕೇಳಿದ್ದಾನೆ. ಆತ ದುಬಾರಿ ಹಣ ಕೇಳಿದ್ದರಿಂದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಚ್ಚಂಪಾಡಿಯ ಉಮ್ಮರ್ ನವಾಜನ್ನು ಸಂಪರ್ಕಿಸಿ, ಡೀಲ್ ಕುದುರಿಸಿದ್ದಾನೆ. ಆರೋಪಿಗಳು ಸಂಚು ರೂಪಿಸಿ, ಕೆ.ಸಿ.ರೋಡ್ ಬಳಿಯಿಂದ ಎ.22ರಂದು ಮಹಮ್ಮದ್ ಅಶ್ರಫನ್ನು ಅಪಹರಿಸಿ, ಕೆದಂಬಾಡಿ ಮೂಲಕ ಮಂಜೇಶ್ವರಕ್ಕೆ ಒಯ್ದಿದ್ದು, ಹೊಸಂಗಡಿಯಲ್ಲಿದ್ದ ಜಾವೇದ್ ನನ್ನೂ ಅಪಹರಿಸಿ, ನಿಗೂಢ ಜಾಗದಲ್ಲಿ ಕೂಡಿಹಾಕಿದ್ದರು. ಆಬಳಿಕ ಅಶ್ರಫನ್ನು ಕೊಲ್ಲುವುದಾಗಿ ಬೆದರಿಸಿ, ಆತನಿಗೆ ಸೇರಿದ 60 ಸೆಂಟ್ ಜಾಗದ ದಾಖಲೆ ಪತ್ರಗಳು, ಬುಲೆಟ್ ಬೈಕಿನ ಕೀ ಮತ್ತು ಚಿನ್ನದ ಒಡವೆಗಳನ್ನು ಕಿತ್ತುಕೊಂಡಿದ್ದರು.

ಪೊಲೀಸರು ಕಾರ್ಯಾಚರಣೆ ನಡೆಸಿ, ಕೃತ್ಯಕ್ಕೆ ಬಳಸಿದ್ದ ಬೆಲೆನೋ, ರಿಟ್ಸ್ ಕಾರು, ಆಲ್ಟೋ ಕಾರು, ಬುಲೆಟ್ ಬೈಕ್, ಹತ್ತು ಮೊಬೈಲ್ ಫೋನ್, 120 ಗ್ರಾಂ ನಕ್ಲೆಸ್ ಸರ, ಜಾಗದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಉಮರ್ ನವಾಜ್, ನಾಲ್ಕು ವರ್ಷದ ಹಿಂದೆ ನಡೆದಿರುವ ಉಳ್ಳಾಲದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ವಿದೇಶದ ವ್ಯಕ್ತಿಗಳ ಜೊತೆ ಲಿಂಕ್ ಹೊಂದಿದ್ದಾನೆ. ಆತನನ್ನು ಬಂಧಿಸಿದ್ದು, ಕೊರೊನಾ ಪಾಸಿಟಿವ್ ಆಗಿರುವುದರಿಂದ ಆಸ್ಪತ್ರೆಯಲ್ಲಿ ಇಡಲಾಗಿದೆ. ಆರೋಪಿಗಳ ಪೈಕಿ ಅಹ್ಮದ್ ಇಕ್ಬಾಲ್ ಮಂಜೇಶ್ವರದಲ್ಲಿ ಟ್ರಾವೆಲ್ ಏಜನ್ಸಿ ಇಟ್ಟುಕೊಂಡಿದ್ದ. ದಕ್ಷಿಣ ಉಪ ವಿಭಾಗದ ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. 

The Mangalore City Police have arrested seven persons who were involved in kidnapping and demanding ransom from a  businessman at KC road in Ullal. The police have seized three cars, gold cash, and property documents. Acp Ranjith Kumar and team have succeeded in nabbing the case.