ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಕಾರ್ಯಾಚರಣೆ ; ಹಣ ಕೇಳಿ ಸಿಕ್ಕಿಬಿದ್ದ ಹ್ಯೂಮನ್ ರೈಟ್ಸ್ ಕಾರ್ಯಕರ್ತ !

17-06-21 03:27 pm       Mangalore Correspondent   ಕ್ರೈಂ

ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿ ಬಟ್ಟೆ ಅಂಗಡಿಗೆ ನುಗ್ಗಿದ್ದ ಹ್ಯೂಮನ್ ರೈಟ್ಸ್ ಕಾರ್ಯಕರ್ತರ ತಂಡ 50 ಸಾವಿರ ಹಣ ಕೇಳಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಮಂಗಳೂರು, ಜೂನ್ 17: ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿ ಬಟ್ಟೆ ಅಂಗಡಿಗೆ ನುಗ್ಗಿದ್ದ ಹ್ಯೂಮನ್ ರೈಟ್ಸ್ ಕಾರ್ಯಕರ್ತರ ತಂಡ 50 ಸಾವಿರ ಹಣ ಕೇಳಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಅಧಿಕಾರಿಗಳ ಹೆಸರಲ್ಲಿ ರೈಡ್ ಮಾಡಿ ಬಿಲ್ ಬರೆಯುವಷ್ಟರಲ್ಲಿ ನಿಜಬಣ್ಣ ಬಯಲಾಗಿದ್ದು, ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಂಪನಕಟ್ಟೆಯ ಟೋಕಿಯೋ ಮಾರ್ಕೆಟ್ ಬಿಲ್ಡಿಂಗಿನ ಸಾಗರ್ ಕಲೆಕ್ಷನ್ ಎನ್ನುವ ಬಟ್ಟೆ ಅಂಗಡಿಗೆ ಬುಧವಾರ ಬೆಳಗ್ಗೆ ಬಂದಿದ್ದ ಮೂವರು ಯುವಕರ ತಂಡ, ತಾವು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಸೋಗು ಹಾಕಿದ್ದಾರೆ. ಲಾಕ್ಡೌನ್ ಇದ್ದರೂ, ಬಟ್ಟೆ ಅಂಗಡಿಯನ್ನು ತೆರೆದಿಟ್ಟು ವ್ಯಾಪಾರ ಮಾಡುತ್ತಿದ್ದೀರಿ.. ಇದು ಕಾನೂನಿಗೆ ವಿರುದ್ಧವಾಗಿದ್ದು, ನಿಮ್ಮ ಅಂಗಡಿ ಲೈಸನ್ಸ್ ಕ್ಯಾನ್ಸಲ್ ಮಾಡುತ್ತೇವೆಂದು ಬೆದರಿಸಿದ್ದಾರೆ. ಆಬಳಿಕ 50 ಸಾವಿರ ರೂಪಾಯಿ ದಂಡ ಕಟ್ಟುವಂತೆ ಹೇಳಿದ್ದಾರೆ.

ಅಂಗಡಿ ಮಾಲಕ ಅಬ್ದುಲ್ ರಹಿಮಾನ್, ಅಷ್ಟು ಹಣ ನಮ್ಮಲ್ಲಿ ಇಲ್ಲ. ನಾವು ಕೆಲಸದವರಿಗೆ ಸಂಬಳ ಕೊಡುವುದಕ್ಕಾಗಿ ಅಂಗಡಿ ತೆರೆದಿದ್ದೇವೆ ಅಷ್ಟೇ.. ಕೆಲವು ಚೆಕ್ ಕ್ಲಿಯರೆನ್ಸ್ ಬಾಕಿಯಿತ್ತು. ಅದನ್ನು ಕ್ಲಿಯರ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ತಂಡ ಹಣ ನೀಡದೇ ಅಲ್ಲಿಂದ ತೆರಳಲು ಕೇಳಲಿಲ್ಲ. ಈಗಲೇ ದುಡ್ಡು ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಕೊನೆಗೆ, ಹತ್ತು ಸಾವಿರ ರೂ. ಕೊಡಿ ಎಂದು ಬಿಲ್ ಬರೆಯಲು ಮುಂದಾಗಿದ್ದಾರೆ. ಇವರ ಬಳಿ ಮಹಾನಗರ ಪಾಲಿಕೆಯ ರಶೀದಿ ಇಲ್ಲದೆ ಖಾಲಿ ಪೇಪರಿನಲ್ಲಿ ಬರೆಯುವುದನ್ನು ನೋಡಿ ಸಂಶಯಗೊಂಡ ಅಂಗಡಿ ಮಾಲಕ ಅಬ್ದುಲ್ ರಹಿಮಾನ್ ಬಂದರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಕೂಡಲೇ ಬಂದರು ಠಾಣೆ ಪೊಲೀಸರು ಆಗಮಿಸಿದ್ದು, ಅಲ್ಲಿದ್ದ ದೀಪಕ್ ರಾಜೇಶ್ ಕುವೆಲ್ಲೋ(45) ಎಂಬಾತನನ್ನು ಬಂಧಿಸಿದ್ದಾರೆ. ಆತನ ಜೊತೆಗಿದ್ದ ತೌಫಿಕ್ ಕಲಂದರ್ ಮತ್ತು ರಿಯಾಜ್ ಎಂಬಿಬ್ಬರು ಪೊಲೀಸರನ್ನು ನೋಡಿ ಪರಾರಿಯಾಗಿದ್ದಾರೆ. ಅದರಲ್ಲಿ ಒಬ್ಬಾತ ತಾನು ತುಳು ವಾರ್ತೆ ಎಂಬ ಹೆಸರಿನ ಮೀಡಿಯಾದವನು ಎಂದು ಹೇಳಿಕೊಂಡಿದ್ದ. ನೀವು ಹಣ ಕೊಡದಿದ್ದರೆ ಮೀಡಿಯಾದಲ್ಲಿ ಹಾಕುತ್ತೇನೆಂದು ಹೇಳಿದ್ದಾನೆ. ದೀಪಕ್ ಮತ್ತು ಇನ್ನೊಬ್ಬ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರು ಎನ್ನಲಾಗುತ್ತಿದೆ.

ದೀಪಕ್ ರಾಜೇಶ್ ಕುವೆಲ್ಲೋ ಪೆರ್ಮನ್ನೂರು ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಆಧುನಿಕ್ ಹ್ಯೂಮನ್ ರೈಟ್ಸ್ ಎನ್ನುವ ಸಂಘಟನೆಯ ಹೆಸರಲ್ಲಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದಿಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಬಟ್ಟೆ ಅಂಗಡಿಯನ್ನು ತೆರೆದಿದ್ದ ವಿಚಾರದಲ್ಲಿ ಅಂಗಡಿಯ ವಿರುದ್ಧವೂ ಕೇಸು ದಾಖಲಾಗಿದೆ.

ಸಾಗರ್ ಕಲೆಕ್ಷನ್ ಬಟ್ಟೆ ಅಂಗಡಿ ಟೋಕಿಯೋ ಮಾರ್ಕೆಟಿನಲ್ಲಿ ಅತಿ ಹೆಚ್ಚು ವ್ಯಾಪಾರ ಇರುವ ಮಳಿಗೆ. ಈ ಬಗ್ಗೆ ತಿಳಿದುಕೊಂಡೇ ಕಾರ್ಯಕರ್ತರು ತಾವು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳ್ಕೊಂಡು ಯಾಮಾರಿಸಲು ನೋಡಿದ್ದಾರೆ. ಆದರೆ, ತಾವೇ ಸಿಕ್ಕಿಬಿದ್ದು ಜೈಲು ಕಂಬಿ ಎಣಿಸುವಂತಾಗಿದೆ. 

Video: 

Extortion in the name of Mangalore city corporation, Deepak Coelho president of Adunika human rights has been arrested by Bunder Police. Deepak along with his friends have threatened a Saree showroom that was kept open at Tokyo Market in Hampankatta and demanded money of 50 thousand. The police are in search of the other two who are said to be absconding.