ಎಸ್​​ಐ ಹುದ್ದೆ ಕೊಡಿಸುವುದಾಗಿ ಕೋಟಿ ರೂಪಾಯಿ ಗುಳುಂ ! ಕೆಪಿಎಸ್ಸಿ ಮೆಂಬರ್ ಹೆಸರಿನಲ್ಲಿ ಮೋಸ !

08-07-21 03:21 pm       Bangalore Correspondent   ಕ್ರೈಂ

ಸಬ್​ಇನ್ಸ್​ಪೆಕ್ಟರ್​ ಹುದ್ದೆ ಕೊಡಿಸುವುದಾಗಿ ಹೇಳಿ ಆರು ಜನರಿಂದ ಒಂದು ಕೋಟಿ ರೂಪಾಯಿ ಲಂಚ ಪಡೆದು ವಂಚಿಸಿದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು, ಜುಲೈ 8 : ಸಬ್​ಇನ್ಸ್​ಪೆಕ್ಟರ್​ ಹುದ್ದೆ ಕೊಡಿಸುವುದಾಗಿ ಹೇಳಿ ಆರು ಜನರಿಂದ ಒಂದು ಕೋಟಿ ರೂಪಾಯಿ ಲಂಚ ಪಡೆದು ವಂಚಿಸಿದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಂದು ಕೆಪಿಎಸ್​ಸಿ ಹೆಸರು ಹೇಳಿಕೊಂಡು ನಂಬಿಸಿದ್ದ ಅರುಣ್​ ಕುಮಾರ್​ ಎಂಬಾತ ಬಂಧಿತ ವ್ಯಕ್ತಿ. ತಾನು ಪ್ರಭಾವಿ ವ್ಯಕ್ತಿಯೆಂದೂ, ಎಸ್​ಐ ಹುದ್ದೆ ಕೊಡಿಸುವೆನೆಂದೂ ಹೇಳಿ ಲಂಚ ಪಡೆದಿದ್ದ. ಆತನನ್ನು ನಂಬಿದ್ದ ಆರು ಜನ ಒಟ್ಟು ಒಂದು ಕೋಟಿ ರೂಪಾಯಿ ನೀಡಿದ್ದರು.

ಈ ಬಗ್ಗೆ ಮೋಸ ಹೋದ ದಾವಣಗೆರೆಯ ಬಿ.ಜಯದೇವ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಕೆ.ಹೆಚ್.ಅರುಣ್ ಕುಮಾರ್ ಮಾತನ್ನು ನಂಬಿ ಜಯದೇವ ಅವರ ಸ್ನೇಹಿತರಾದ ಲಕ್ಷ್ಮಪ್ಪ ಮತ್ತು ಚಂದ್ರಪ್ಪ ಎಂಬ ಇಬ್ಬರು ಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತನಗೆ ಎಲ್ಲರ ಲಿಂಕ್​ ಇದೆ ಎಂದು ಹೇಳಿಕೊಂಡಿದ್ದ ಅರುಣ್ ಕುಮಾರ್​, ಸ್ನೇಹಿತರಿಗೆ ಎಸ್​ಐ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ 70 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ.

2020ನೇ ಇಸವಿಯ ಜನವರಿ 30ರಂದು 15 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಅರುಣ್ ಕುಮಾರ್, ಕೆಲ ದಿನಗಳ ನಂತರ ಮತ್ತೆ 20 ಲಕ್ಷ ರೂಪಾಯಿ ಹಣವನ್ನು ತರಿಸಿಕೊಂಡಿದ್ದ. ಇಷ್ಟು ಕೊಟ್ಟ ನಂತರವೂ ಮತ್ತೆ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಇದೇ ರೀತಿ ಒಟ್ಟು 6 ಜನರಿಗೆ ಮೋಸ ಮಾಡಿದ್ದ ಆತ ಒಂದು ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ್ದಾನೆ ಎಂಬ ಆರೋಪಗಳಿವೆ.

ಈ ಬಗ್ಗೆ ದೂರು ದಾಖಲಿಸಿದ್ದ ದಾವಣಗೆರೆಯ ಬಿ.ಜಯದೇವ ಎನ್ನುವವರು ಅರುಣ್ ಕುಮಾರ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಅರುಣ್​ ಕುಮಾರ್​ನನ್ನು ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಆತನನ್ನು ವಿಧಾನಸೌಧ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

The Bangalore CCB Police have succeeded in arresting a person who was cheating people of giving Sub Inspector Job in the Police department. The arrested has been identified as Arun Kumar.