ತಪ್ಪಾಗಿ ಭ್ರಮಿಸಿ ಬೆಂಗಳೂರು ಬಸ್ ತಡೆದ ಬಜರಂಗದಳ ಕಾರ್ಯಕರ್ತರು ! ನೈತಿಕ ಪೊಲೀಸ್ ಮಾಡಲು ಹೋಗಿ ಬೇಸ್ತು ಬಿದ್ದರು !

21-08-21 01:49 pm       Mangaluru Correspondent   ಕ್ರೈಂ

ಬಸ್ ನಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದು ಯುವತಿಯರ ಜೊತೆಗೆ ತೆರಳುತ್ತಿದ್ದಾನೆ, ಮೊಬೈಲ್ ಸಂಪರ್ಕದಲ್ಲಿದ್ದಾರೆ ಎಂದು ತಪ್ಪಾಗಿ ತಿಳಿದ ಬಜರಂಗದಳದ ಕಾರ್ಯಕರ್ತರು ಬಸ್ಸನ್ನು ತಡೆದು ನೈತಿಕ ಪೊಲೀಸ್ ಗಿರಿ ತೋರಿದ ಘಟನೆ ನಡೆದಿದೆ.‌

ಪುತ್ತೂರು, ಆಗಸ್ಟ್ 21: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದು ಯುವತಿಯರ ಜೊತೆಗೆ ತೆರಳುತ್ತಿದ್ದಾನೆ, ಮೊಬೈಲ್ ಸಂಪರ್ಕದಲ್ಲಿದ್ದಾರೆ ಎಂದು ತಪ್ಪಾಗಿ ತಿಳಿದ ಬಜರಂಗದಳದ ಕಾರ್ಯಕರ್ತರು ಬಸ್ಸನ್ನು ತಡೆದು ನೈತಿಕ ಪೊಲೀಸ್ ಗಿರಿ ತೋರಿದ ಘಟನೆ ನಡೆದಿದೆ.‌

ನಿನ್ನೆ ರಾತ್ರಿ ಘಟನೆ ನಡೆದಿದ್ದು, ಕೊನೆಗೆ ತಪ್ಪು ಮಾಹಿತಿ ಎಂದು ತಿಳಿದ ಬಳಿಕ ಬಸ್ಸನ್ನು ಸುಳ್ಯ ಠಾಣೆಗೆ ಒಯ್ದು ಪ್ರಕರಣ ಇತ್ಯರ್ಥ ಮಾಡಲಾಗಿದೆ. ಬೆಂಗಳೂರು ಮೂಲದ ಯುವತಿಯರಿಬ್ಬರು ಕೆಲಸದ ನಿಮಿತ್ತ ಪುತ್ತೂರಿಗೆ ಬಂದಿದ್ದು ಬಸ್ ಚಾಲಕನ ಬದಿಯ ಸೀಟಿನಲ್ಲಿ ಕುಳಿತಿದ್ದರು. ಅದೇ ಬಸ್ಸಲ್ಲಿ ಬೆಳ್ಳಾರೆ ಮೂಲದ ನೌಶಾದ್‌ ಎಂಬ ಯುವಕ ಹತ್ತಿದ್ದು ಪ್ರಯಾಣದ ಸಂದರ್ಭದಲ್ಲಿ ಯುವತಿಯರ ಜೊತೆ ಮಾತುಕತೆ ನಡೆಸಿದ್ದಾನೆ, ಮೊಬೈಲ್ ಚಾಟಿಂಗ್ ನಡೆಸುತ್ತಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿದ ಬಸ್ಸಿನಲ್ಲಿ ಯಾರೋ ಯುವಕರು ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಸ್ಸಿನಲ್ಲಿದ್ದ ಯುವಕರು ಸೇರಿಕೊಂಡು ನೌಶಾದ್ ನನ್ನು ತರಾಟೆಗೈದು ಆತನ ಮೊಬೈಲ್ ಪೋನನ್ನು ಕಿತ್ತುಕೊಂಡಿದ್ದಾರೆ.

ಪುತ್ತೂರಿನಿಂದ ಕುಂಬ್ರಕ್ಕೆ ಟಿಕೆಟ್ ಪಡೆದಿದ್ದಾನೆ ಎನ್ನಲಾಗಿದ್ದ ಯುವಕ ಕುಂಬ್ರದಲ್ಲಿ ಇಳಿಯದೆ ಬೆಂಗಳೂರಿಗೆ ಟಿಕೆಟ್ ಪಡೆದಿದ್ದು  ಸಂಶಯಕ್ಕೆ ಕಾರಣವಾಗಿತ್ತು. ಇದೇ ವೇಳೆ, ಪುತ್ತೂರಿನ ಬಜರಂಗದಳ ಕಾರ್ಯಕರ್ತರು ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಿ ಬಂದಿದ್ದರು. ಇದರಿಂದ ಗಾಬರಿಗೊಂಡ ಯುವಕ ಜಾಲ್ಸೂರು ಬಳಿ ಬಸ್ಸಿನಿಂದ ಇಳಿಯಲು ಯತ್ನಿಸಿದ್ದಾನೆ. ಆದರೆ, ಜೊತೆಗಿದ್ದ ಯುವಕರು ಆತನನ್ನು ಇಳಿಯದಂತೆ ತಡೆದು ಸುಳ್ಯ ಪೊಲೀಸ್ ಠಾಣೆಗೆ ತೆರಳುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮುಸ್ಲಿಂ ಗುಂಪೊಂದು ಪೈಚಾರ್ ನಲ್ಲಿ ಜಮಾಯಿಸಿದ್ದು ಬಿಗು ವಾತಾವರಣ ಸೃಷ್ಟಿಸಿತ್ತು.‌

ಪೈಚಾರ್‌ ಎಂಬಲ್ಲಿ ಪ್ರಯಾಣಿಕರನ್ನು ಇಳಿಸುವುದಕ್ಕಾಗಿ ಬಸ್‌ ನಿಲ್ಲಿಸಿದಾಗ, ನೌಷಾದ್‌ ಬಸ್‌ನಿಂದ ಇಳಿದು ತನ್ನ ಸ್ನೇಹಿತರಿಗೆ ಮೊಬೈಲ್ ಕಿತ್ತುಕೊಂಡ ಬಗ್ಗೆ ತಿಳಿಸಿದ್ದಾನೆ. ಇಷ್ಟಾಗುತ್ತಿದ್ದಂತೆ ಪೈಚಾರ್‌ನಲ್ಲಿ ಜನ ಜಮಾಯಿಸಿದ್ದು ಜಟಾಪಟಿ ನಡೆದಿದೆ. ಇದೇ ವೇಳೆ, ಸುಳ್ಯ ಎಸ್‌ಐ ಹರೀಶ್‌ ಎಂ.ಆರ್‌. ಸ್ಥಳಕ್ಕೆ ಬಂದಿದ್ದು ಉದ್ರಿಕ್ತ ಜನರನ್ನು ಹತೋಟಿಗೆ ತಂದಿದ್ದಾರೆ. ಬಳಿಕ ಬಸ್ಸನ್ನು ಠಾಣೆಗೆ ತರುವಂತೆ ಸೂಚಿಸಿದ ಎಸ್‌ಐ, ಬಜರಂಗದಳದ ಐವರು ಯುವಕರನ್ನು ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಇಬ್ಬರು ಯುವತಿಯರು ಮತ್ತು ನೌಷಾದ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಅವರ ನಡುವೆ ಯಾವುದೇ ಸಂಪರ್ಕ ಇರದೇ ಇರುವುದು ತಿಳಿದುಬಂದಿತ್ತು. 

ಅದೇ ವೇಳೆಗೆ ಪುತ್ತೂರು ಮತ್ತು ಸುಳ್ಯದಿಂದ ಬಜರಂಗದಳ ಮುಖಂಡರು ಠಾಣೆಗೆ ಆಗಮಿಸಿದ್ದು ಮಾತುಕತೆ ನಡೆಸಿದ್ದಾರೆ. ಯುವತಿಯರು ಮತ್ತು ಯುವಕನ ನಡುವೆ ಪರಿಚಯವೇ ಇಲ್ಲದ ಬಗ್ಗೆ ಹೇಳಿಕೊಂಡಿದ್ದು ಬಜರಂಗದಳ ಕಾರ್ಯಕರ್ತರು ಇಂಗು ತಿಂದ ಮಂಗನಂತಾಗಿದ್ದರು. ಪೊಲೀಸರ ಸಮ್ಮುಖದಲ್ಲಿ ಒಂದು ಗಂಟೆ ಕಾಲ ಚಕಮಕಿ ನಡೆದು ಬಳಿಕ ಪ್ರಕರಣ ಸುಖಾಂತ್ಯಗೊಂಡಿತ್ತು. ಬಸ್ ಅನ್ನು ಮತ್ತೆ ಬೆಂಗಳೂರಿಗೆ ಕಳಿಸಿ ಕೊಡಲಾಗಿದೆ.

Video: 

Sullia Bajrang dal activist try to moral police at sullia but fails after truth revealed. It is said Hindu girls were accompanied by Muslim boy and was exchanging text messages but when the phone of the boy was checked nothing as such was found.