ಚಿಕನ್ ಫ್ರೈ ರುಚಿಯಾಗಿಲ್ಲ ಎಂದು ಜಗಳ ; ಹೆಂಡ್ತಿಯನ್ನೇ ಹೊಡೆದು ಕೊಂದ ಪಾಪಿ ಗಂಡ

24-08-21 02:49 pm       Headline Karnataka News Network   ಕ್ರೈಂ

ಹೆಂಡ್ತಿ ರುಚಿಕಟ್ಟಾದ ಚಿಕನ್ ಫ್ರೈ ಮಾಡಿಕೊಡುತ್ತಿಲ್ಲ ಎಂದು ಜಗಳ ತೆಗೆದು ಗಂಡನೇ ಪತ್ನಿಯನ್ನು ಕೊಂದು ಹಾಕಿದ ಘಟನೆ ತರಬನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು, ಆಗಸ್ಟ್ 24: ಹೆಂಡ್ತಿ ರುಚಿಕಟ್ಟಾದ ಚಿಕನ್ ಫ್ರೈ ಮಾಡಿಕೊಡುತ್ತಿಲ್ಲ ಎಂದು ಜಗಳ ತೆಗೆದು ಗಂಡನೇ ಪತ್ನಿಯನ್ನು ಕೊಂದು ಹಾಕಿದ ಘಟನೆ ಹೆಸರಘಟ್ಟ ರಸ್ತೆಯ ತರಬನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕ್ಷುಲ್ಲಕ ಕಾರಣಕ್ಕೆ ಪ್ರಾಣ ಕಳಕೊಂಡ ನತದೃಷ್ಟ ಯುವತಿಯನ್ನು ಶಿರಿನ್ ಬಾನು (25) ಎಂದು ಗುರುತಿಸಲಾಗಿದ್ದರೆ, ಕ್ರೌರ್ಯ ಮೆರೆದ ಪತಿಯನ್ನು ಮುಬಾರಕ್ (32) ಎಂದು ಗುರುತಿಸಲಾಗಿದೆ. ಹೆಂಡ್ತಿಯನ್ನು ಹೊಡೆದು ಕೊಂದ ಬಳಿಕ ಆಕೆಯ ಶವವನ್ನು ರಸ್ತೆ ಬದಿಯ ಚರಂಡಿಗೆ ಎಸೆದು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಪ್ರಕರಣ ಮೂರು ವಾರಗಳ ಬಳಿಕ ಬಯಲಾಗಿದೆ.

ಶಿರಿನ್ ಮತ್ತು ಮುಬಾರಕ್ ಇಬ್ಬರೂ ದಾವಣಗೆರೆ ಜಿಲ್ಲೆಯವರಾಗಿದ್ದು, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತರಬನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಮುಬಾರಕ್ ಬೆಡ್ ಗಳನ್ನು ಮಾರುವ ವ್ಯಾಪಾರ ಮಾಡುತ್ತಿದ್ದರೆ, ಶಿರಿನ್ ಮನೆಯಲ್ಲಿ ಇರುತ್ತಿದ್ದಳು. ಚೆನ್ನಾಗಿಯೇ ಇದ್ದ ಇವರ ನಡುವೆ, ತಿಕ್ಕಾಟಕ್ಕೆ ಕಾರಣವಾಗಿದ್ದು ಚಿಕನ್ ಫ್ರೈ ವಿಷಯ. ಪತ್ನಿ ಸರಿಯಾಗಿ ಚಿಕನ್ ಫ್ರೈ ಮಾಡುತ್ತಿಲ್ಲ. ಟೇಸ್ಟಿಯಾಗಿಲ್ಲವೆಂದು ಗಂಡ ತಕರಾರು ಮಾಡುತ್ತಿದ್ದ ಎನ್ನಲಾಗಿದೆ.  

ಮೂರು ವಾರಗಳ ಹಿಂದೆ ಪತ್ನಿ ಶಿರಿನ್ ತಂಗಿ ಮನೆಗೆ ಬಂದಿದ್ದು, ಈ ವೇಳೆ ಚಿಕನ್ ಫ್ರೈ ಮಾಡಿದ್ದರು. ಆದರೆ, ತಂಗಿಯ ಎದುರಲ್ಲೇ ಗಂಡ ತನ್ನ ಪತ್ನಿಯನ್ನು ಚಿಕನ್ ವಿಚಾರದಲ್ಲಿ ಹೀನಾಯವಾಗಿ ಬೈದಿದ್ದ. ಆನಂತರ ತಂಗಿ ಮನೆಗೆ ಹಿಂತಿರುಗಿದ್ದಳು. ಇದೇ ವಿಚಾರ ಆಬಳಿಕ ಪತಿ- ಪತ್ನಿಯ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಇಬ್ಬರೂ ಹೊಡದಾಡಿಕೊಂಡಿದ್ದು, ಮುಬಾರಕ್ ಸಿಟ್ಟಿನ ಭರದಲ್ಲಿ ಪತ್ನಿಯ ಮೇಲೆ ಮರದ ಕಟ್ಟಿಗೆಯಲ್ಲಿ ಹೊಡೆದಿದ್ದರಿಂದ ತಲೆಗೆ ಏಟಾಗಿದ್ದ ಶಿರಿನ್ ನೆಲಕ್ಕೆ ಬಿದ್ದು ಸಾವಿಗೀಡಾಗಿದ್ದಳು. ಬಳಿಕ, ಪತ್ನಿ ಸಾವಿನಿಂದ ಭಯಗೊಂಡ ಮುಬಾರಕ್, ಶವವನ್ನು ಬೆಡ್ಡಿನಲ್ಲಿ ಕಟ್ಟಿ ಮನೆ ಸಮೀಪದ ಚರಂಡಿಗೆ ಎಸೆದು ಬಂದಿದ್ದ.

ಆನಂತರ ಶಿರಿನ್ ನಾಪತ್ತೆಯಾಗಿರುವ ವಿಚಾರದಲ್ಲಿ ಆಕೆಯ ಮನೆಯವರು ಕೇಳಲು ಶುರು ಮಾಡಿದ್ದರು. ಅದಕ್ಕೆ ಹಾರಿಕೆಯ ಉತ್ತರ ನೀಡುತ್ತಿದ್ದ ಮುಬಾರಕ್ ಬಗ್ಗೆ ಸಂಶಯಗೊಂಡ ಪತ್ನಿಯ ಕಡೆಯವರು ಜೋರು ಮಾಡಿದ್ದಾರೆ. ಮುಬಾರಕ್ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಬೆದರಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ಭಯಗೊಂಡ ಮುಬಾರಕ್, ವಕೀಲನ ಜೊತೆ ಸೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಆಗಿರುವ ಘಟನೆಯನ್ನು ವಿವರಿಸಿದ್ದಾನೆ. ಪತ್ನಿಯನ್ನು ಕೊಂದು ಚರಂಡಿಗೆ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ. ಆದರೆ, ಶವ ಎಸೆದಿದ್ದ ಜಾಗದಲ್ಲಿ ಪೊಲೀಸರು ಹುಡುಕಾಡಿದ್ದು ಶವ ಮಾತ್ರ ಸಿಕ್ಕಿಲ್ಲ. ಘಟನೆ ನಡೆದು ಎರಡು ವಾರ ಕಳೆದಿರುವುದರಿಂದ ಶವ ಕೊಳೆತು ಹೋಗಿರುವ ಸಾಧ್ಯತೆ ಇದ್ದು, ಅಸ್ಥಿಪಂಜರ ಆದ್ರೂ ಸಿಗಬೇಕು ಎನ್ನುವ ನೆಲೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ. 

Bangalore Husband murders wife for failing to prepare tasty chicken fry kabab dumps her body in pond