ಆಹಾರ ತಯಾರಿ ಕಂಪನಿ ಸಿಬಂದಿ ಅಪಹರಿಸಿ 20 ಲಕ್ಷ ರೂ.ಗೆ ಬ್ಲಾಕ್ಮೇಲ್ ; ಯುಟ್ಯೂಬ್ ಚಾನೆಲ್ ವರದಿಗಾರ ಸೇರಿ 6 ಜನ ಬಂಧನ

26-08-21 04:34 pm       Headline Karnataka News Network   ಕ್ರೈಂ

ರೌಡಿಶೀಟರ್ ಜೊತೆ ಸೇರಿ ಆಹಾರ ತಯಾರಿಕಾ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ಅಪಹರಿಸಿ 20 ಲಕ್ಷ ರೂ. ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಆ.26 : ರೌಡಿಶೀಟರ್ ಜೊತೆ ಸೇರಿ ಆಹಾರ ತಯಾರಿಕಾ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ಅಪಹರಿಸಿ 20 ಲಕ್ಷ ರೂ. ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಯುಟ್ಯೂಬ್ ಚಾನೆಲ್ ವರದಿಗಾರ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿ ಶೀಟರ್ ಕುಳ್ಳ ರಮೇಶ್, ಯುಟ್ಯೂಬ್ ಚಾನೆಲ್ ವರದಿಗಾರ ಸಂತೋಷ್, ದುರ್ಗೇಶ, ಹರೀಶ್, ಅರವಿಂದ್ ಹಾಗೂ ವಿವೇಕ್ ಬಂಧಿತ ಆರೋಪಿಗಳು. ಮೂರು ದಿನಗಳ ಹಿಂದೆ ಸಾಯಿ ಫುಡ್ ಪ್ರೈ. ಲಿಮಿಟೆಡ್‌ ಎಂಬ ಕಂಪನಿಯ ಇಬ್ಬರು ಸಿಬ್ಬಂದಿಯ ವಾಹನವನ್ನು ಅಡ್ಡಗಟ್ಟಿ ಅವರದ್ದೇ ಕಾರಿನಲ್ಲಿ ಅಪಹರಿಸಿದ್ದರು. ಇಬ್ಬರನ್ನು ಬಿಡುಗಡೆ ಮಾಡಬೇಕಾದರೆ 20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಇಬ್ಬರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಸಾಯಿ ಫುಡ್‌ ಮಾಲೀಕರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಸತತ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲದಿನಗಳ ಹಿಂದೆ ಯುಟ್ಯೂಬ್ ಚಾನೆಲ್ ವರದಿಗಾರ ಸಂತೋಷ್ ಮತ್ತು ಟೀಂ ಸಾಯಿ ಫುಡ್ ತಯಾರಿಸುತ್ತಿದ್ದ ಆಹಾರ ಪದಾರ್ಥಗಳ ಗೋಡೌನ್ ಗೆ ನುಗ್ಗಿತ್ತು. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದೀರಾ ಎಂದು ಬೆದರಿಕೆ ಹಾಕಿದ್ದರು. ಹಣ ಕೊಡದಿದ್ದರೆ ನಿಮ್ಮ ಅಕ್ರಮವನ್ನು ಯುಟ್ಯೂಬ್‌ಗೆ ಹಾಕುವುದಾಗಿ ಬೆದರಿಸಿದ್ದರು. ಅವಧಿ ಮುಗಿದ ಆಹಾರ ಪದಾರ್ಥಗಳು ಸಿಗದ ಕಾರಣ ಹಣ ವಸೂಲಿಗೆ ಯತ್ನಿಸಿ ವಾಪಸು ತೆರಳಿದ್ದರು. ಆನಂತರ ಅಪಹರಣ ಕೃತ್ಯ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಯುಟ್ಯೂಬ್ ಚಾನೆಲ್ ವರದಿಗಾರನ ಬೆನ್ನಟ್ಟಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳು ಹಲವರಿಗೆ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಬೆದರಿಸಿ, ಹಣ ಪಡೆದಿರುವುದು ತಿಳಿದುಬಂದರೆ ಹೆಚ್ಚುವರಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Bangalore Police arrests six including News Youtuber kindnap and extrotion of catering company owner.