‘ಡ್ರೋನ್’ ಪ್ರತಾಪ್ ಬಂಧನ, ಬಿಡುಗಡೆ

03-08-20 07:28 pm       Bangalore Correspondent   ಕರ್ನಾಟಕ

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದಡಿ ‘ಡ್ರೋನ್’ ಪ್ರತಾಪ್ ಅವರನ್ನು ಸೋಮವಾರ ಬಂಧಿಸಿದ್ದ ಅಶೋಕನಗರ ಪೊಲೀಸರು, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದಡಿ ‘ಡ್ರೋನ್’ ಪ್ರತಾಪ್ ಅವರನ್ನು ಸೋಮವಾರ ಬಂಧಿಸಿದ್ದ ಅಶೋಕನಗರ ಪೊಲೀಸರು, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

ಕೊರೊನಾ ವೈರಾಣು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಹಲವು ನಿಯಮಗಳನ್ನು ರೂಪಿಸಿದೆ. ಲಾಕ್‌ಡೌನ್‌ ಸಮಯದಲ್ಲಿ ಹೊರ ರಾಜ್ಯದಿಂದ ನಗರಕ್ಕೆ ಬಂದಿದ್ದ ಪ್ರತಾಪ್, ನಿಗದಿತ ಸ್ಥಳದಲ್ಲಿ ಕ್ವಾರಂಟೈನ್ ಇರದೇ ಹಲವೆಡೆ ಓಡಾಡಿದ್ದರು. ಈ ಸಂಬಂಧ ಮೊದಲ ಬಾರಿಗೆ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರತಾಪ್, ಮೈಸೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರನ್ನು ನಗರಕ್ಕೆ ಕರೆತಂದಿದ್ದ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು, ರಿಚ್ಮಂಡ್ ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಿದ್ದರು. ಇಂಥ ಸಂದರ್ಭದಲ್ಲೂ ಪ್ರತಾಪ್, ಹಲವರನ್ನು ಭೇಟಿಯಾಗಿ ನಿಯಮ ಉಲ್ಲಂಘಿಸಿದ್ದರು.

ಎರಡನೇ ಬಾರಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಅಶೋಕನಗರ ಪೊಲೀಸರು, ಸೋಮವಾರ ಪ್ರತಾಪ್‌ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

‘ಪ್ರತಾಪ್‌ ಅವರನ್ನು ಠಾಣೆಗೆ ಕರೆತಂದು ಹೇಳಿಕೆ ಪಡೆಯಲಾಗಿದೆ. ಕಾನೂನಿನನ್ವಯ ಶ್ಯೂರಿಟಿ ಪಡೆದು ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ಮತ್ತೊಮ್ಮೆ ಕ್ವಾರಂಟೈನ್​​ ನಿಯಮ ಉಲ್ಲಂಘನೆ - ಡ್ರೋನ್​​ ಪ್ರತಾಪ್​​ ವಿರುದ್ಧ ಕೇಸ್​​