ಹೆಎಚ್ಡಿಕೆಗೆ ಡಿಕೆಶಿ ಶಾಕ್ ; ಕಾಂಗ್ರೆಸ್ ಆಪರೇಶನ್ ಹಸ್ತಕ್ಕೆ ಜೆಡಿಎಸ್ ಬೇಸ್ತು !

16-10-20 05:27 pm       Bangalore Correspondent   ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆರ್.ಆರ್ ನಗರ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಪಕ್ಷಕ್ಕೆ ಸೆಳೆದುಕೊಂಡು ಶಾಕ್ ಕೊಟ್ಟಿದ್ದಾರೆ. 

ಬೆಂಗಳೂರು, ಅಕ್ಟೋಬರ್ 16: ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಆಪರೇಶನ್ ಶುರು ಮಾಡಿದೆ. ನಿಗೂಢ ಕಾರ್ಯಾಚರಣೆಗಿಳಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆರ್.ಆರ್ ನಗರ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಪಕ್ಷಕ್ಕೆ ಸೆಳೆದುಕೊಂಡು ಶಾಕ್ ಕೊಟ್ಟಿದ್ದಾರೆ. 
   
ಈಗಾಗ್ಲೇ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ  ಚುನಾವಣೆ ರಂಗೇರಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯಿಂದ ಕೊನೆಗೂ ಹಳೆಮುಖ, ದೊಡ್ಡ ಕುಳ ಮುನಿರತ್ನಗೆ ಟಿಕೆಟ್ ನೀಡಿದ್ದು ಇತ್ತ ಕಾಂಗ್ರೆಸಿನಲ್ಲೂ ನಡುಕ ಸೃಷ್ಟಿಸಿತ್ತು. ಆದರೆ, ಡಿಕೆಶಿ ಆರಂಭದಿಂದಲೇ ತನ್ನ ಆಪ್ತ ಜೆಡಿಎಸ್ ಮುಖಂಡ, ಹನುಮಂತರಾಯಪ್ಪ ಮೂಲಕ ಕ್ಷೇತ್ರಕ್ಕೆ ಕೈ ಹಾಕಿದ್ದರು. ಆಬಳಿಕ ಹನುಮಂತ ಪುತ್ರಿ, ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಜೆಡಿಎಸ್ ಪಕ್ಷದ ಹುರಿಯಾಳುಗಳನ್ನೇ ಸೆಳೆದುಕೊಂಡು ಶಾಕ್ ನೀಡಿದ್ದಲ್ಲದೆ ಗೌಡ್ರ ಪಕ್ಷದ ಮತಗಳನ್ನು ಕಾಂಗ್ರೆಸಿಗೆ ಬರುವಂತೆ ಮಾಡಿದ್ದಾರೆ. ಡಿಕೆಶಿ ಈ ನಡೆ, ಇಡೀ ಚುನಾವಣೆ ತಂತ್ರಕ್ಕೇ ಹೊಸ ತಿರುವು ನೀಡಲಿದೆ ಎನ್ನಲಾಗಿದೆ. 

ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಹಾಗೂ ಜೆಡಿಎಸ್​ನ ಬಹುತೇಕ ಪದಾಧಿಕಾರಿಗಳು ಈಗ ಡಿಕೆ ಶಿವಕುಮಾರ್ ಜೊತೆಯಾಗಿದ್ದಾರೆ. ಇವರೆಲ್ಲ ಇಂದೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. 

ಡಿಕೆಶಿ ಮತ್ತು ಟೀಂ ಅತ್ಯಂತ ರಹಸ್ಯವಾಗಿ ಆಪರೇಷನ್ ಹಸ್ತ ಮಾಡಿದ್ದು, ಹೆಚ್​ಡಿಕೆಗೆ ಶಾಕ್ ನೀಡಿದ್ದಾರೆ. ಆರ್.ಆರ್ ನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಅಧಿಕ. ಒಂದು ಲಕ್ಷದಷ್ಟು ಒಕ್ಕಲಿಗ ಮತಗಳಿದ್ದು ಅವೇ ನಿರ್ಣಾಯಕ‌. ಇತ್ತ ಬಿಜೆಪಿಯಲ್ಲೂ ಒಳಗಿಂದೊಳಗೇ ಮುನಿಸಿದ್ದು ಇದು ಕೂಡ ಕಾಂಗ್ರೆಸಿಗೆ ವರದಾನ ಆಗಲಿದೆ ಎನ್ನಲಾಗುತ್ತಿದೆ.

Bangalore RR Nagara By-Elections Kpcc President DK Shivakumar gives Surprise to team JDS through operation Astha.