ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್; ವಯಸ್ಕರಾದ ಮೇಲೆ ಧರ್ಮ, ನಂಬಿಕೆ, ವೈಯಕ್ತಿಕ ಆಯ್ಕೆ, ಪ್ರಶ್ನಿಸುವ ಹಕ್ಕಿಲ್ಲ! ಯುಪಿ ಸರ್ಕಾರ ಹಾಗೂ ತಂದೆಗೆ ₹25 ಲಕ್ಷ ದಂಡ ವಿಧಿಸಿದ ಕೋರ್ಟ್

11-08-26 04:49 pm       HK News Staffer   ದೇಶ - ವಿದೇಶ

ಸ್ವಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಇಬ್ಬರು ವಯಸ್ಕ ಹಿಂದು ಸೋದರಿಯರನ್ನು ತಂದೆಯ ಅಕ್ರಮ ಬಂಧನದಿಂದ ತಕ್ಷಣ ಬಿಡುಗಡೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ವಯಸ್ಕ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ತಂದೆ ಮತ್ತು ಉತ್ತರ ಪ್ರದೇಶ ಸರ್ಕಾರ ಜಂಟಿಯಾಗಿ ₹25 ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

ಲಕ್ನೋ, ಆ.11: ಸ್ವಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಇಬ್ಬರು ವಯಸ್ಕ ಹಿಂದು ಸೋದರಿಯರನ್ನು ತಂದೆಯ ಅಕ್ರಮ ಬಂಧನದಿಂದ ತಕ್ಷಣ ಬಿಡುಗಡೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ವಯಸ್ಕ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ತಂದೆ ಮತ್ತು ಉತ್ತರ ಪ್ರದೇಶ ಸರ್ಕಾರ ಜಂಟಿಯಾಗಿ ₹25 ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. 

35 ವರ್ಷದ ದಿಯಾ ಭಾಟಿಯಾ ಮತ್ತು 20 ವರ್ಷದ ಅಂಶು ಭಾಟಿಯಾ ಎಂಬ ಇಬ್ಬರು ಸಹೋದರಿಯರು ವಯಸ್ಕರಾಗಿದ್ದು, ತಮ್ಮ ಧರ್ಮ, ವಾಸ ಸ್ಥಳ ಮತ್ತು ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಂವಿಧಾನಾತ್ಮಕ ಸಂಪೂರ್ಣ ಹಕ್ಕಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಗಾಗಿ ಇಬ್ಬರು ಸೋದರಿಯರಿಗೆ ₹25 ಲಕ್ಷ ಪರಿಹಾರ ನೀಡಲು ಕೋರ್ಟ್ ಸೂಚಿಸಿದ್ದು ಈ ಮೊತ್ತದಲ್ಲಿ ಶೇ. 50 (₹12.5 ಲಕ್ಷ) ರಷ್ಟನ್ನು ತಂದೆ ಅನಿಲ್ ಕುಮಾರ್ ಭಾಟಿಯಾ ಹಾಗೂ ಉಳಿದ ಶೇ. 50 ರಷ್ಟನ್ನು ಈ ಅಕ್ರಮ ಬಂಧನಕ್ಕೆ ಕಾರಣರಾದ ಸರ್ಕಾರಿ/ಪೊಲೀಸ್ ಅಧಿಕಾರಿಗಳಿಂದ ವಸೂಲಿ ಮಾಡಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಲಾಗಿದೆ. ಇದಲ್ಲದೆ, ಏಳು ದಿನಗಳ ಒಳಗೆ ಮಹಿಳೆಯರ ಪಾಸ್‌ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರಗಳು, ಬ್ಯಾಂಕ್ ಪಾಸ್‌ಬುಕ್ ಮತ್ತು ಇತರ ಅಗತ್ಯ ದಾಖಲೆಗಳನ್ನು ಅವರಿಗೆ ಹಸ್ತಾಂತರಿಸುವಂತೆ ತಂದೆಗೆ ನಿರ್ದೇಶಿಸಲಾಗಿದೆ.

ದಿಯಾ ಮತ್ತು ಅಂಶು ಎಂಬ ಇಬ್ಬರು ಸಹೋದರಿಯರು ತಮ್ಮ ಇಷ್ಟದಂತೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದನ್ನು ವಿರೋಧಿಸಿದ ಅವರ ತಂದೆ, 2025ರ ಮೇ ತಿಂಗಳಲ್ಲಿ ಆಗ್ರಾದಲ್ಲಿ ಪೊಲೀಸ್ ದೂರು ನೀಡಿದ್ದರು. ಅಲ್ಲದೆ, ಸ್ಥಳೀಯ ಪೊಲೀಸರ ಸಹಾಯದೊಂದಿಗೆ ತಮ್ಮನ್ನು ಮನೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಡಲಾಗಿತ್ತು ಎಂದು ಮಹಿಳೆಯರು ಹೇಬಿಯಸ್ ಕಾರ್ಪಸ್ ಅರ್ಜಿ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಜೈನ್ ಅವರ ಏಕಸದಸ್ಯ ಪೀಠವು, ಬಲವಂತ ಅಥವಾ ವಂಚನೆಯಿಂದ ಮತಾಂತರ ನಡೆದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲದ ಕಾರಣ 'ಉತ್ತರ ಪ್ರದೇಶ ಅಕ್ರಮ ಧಾರ್ಮಿಕ ಮತಾಂತರ ತಡೆ ಕಾಯ್ದೆ 2021' ಈ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

"ಮಕ್ಕಳು ವಯಸ್ಕರಾದ ಮೇಲೆ ಅವರ ಧರ್ಮ, ನಂಬಿಕೆ ಅಥವಾ ವೈಯಕ್ತಿಕ ಆಯ್ಕೆಗಳನ್ನು ಪೋಷಕರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧನದಲ್ಲಿಡಲು ಸಂವಿಧಾನವು ಪೋಷಕರಿಗೆ ಯಾವುದೇ ಅಧಿಕಾರ ನೀಡುವುದಿಲ್ಲ. ಪೋಷಕರ ಅಧಿಕಾರ, ಸಾಮಾಜಿಕ ನೈತಿಕತೆ ಅಥವಾ ಬಹುಸಂಖ್ಯಾತರ ಭಾವನೆಗಳ ಹೆಸರಿನಲ್ಲಿ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ವಯಸ್ಕ ವ್ಯಕ್ತಿಯ ಸ್ವಾತಂತ್ರ್ಯವನ್ನು ಬಲವಂತವಾಗಿ ಹತೋಟಿಯಲ್ಲಿಡಲು ಯತ್ನಿಸಿದರೆ ಅದು ಸಂವಿಧಾನದ ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.