ಬಿಜೆಪಿಗೆ ಬರಲು ಹತ್ತು ಕಾಂಗ್ರೆಸ್ ಶಾಸಕರು ರೆಡಿಯಾಗಿದ್ದಾರೆ ; ಹೊಸ ಬಾಂಬ್ !!

24-10-20 04:28 pm       Headline Karnataka News Network   ಕರ್ನಾಟಕ

 ಬಿಜೆಪಿಗೆ ಬರಲು ಇನ್ನೂ ಹತ್ತು ಕಾಂಗ್ರೆಸ್ ಶಾಸಕರು ರೆಡಿಯಾಗಿದ್ದಾರೆ, ಅವರೆಲ್ಲ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ನಳಿನ್ ಹೊಸ ಬಾಂಬ್ ಹಾಕಿದ್ದಾರೆ.

ಮಡಿಕೇರಿ, ಅಕ್ಟೋಬರ್ 24: ಬಿಜೆಪಿಗೆ ಬರಲು ಇನ್ನೂ ಹತ್ತು ಕಾಂಗ್ರೆಸ್ ಶಾಸಕರು ರೆಡಿಯಾಗಿದ್ದಾರೆ, ಅವರೆಲ್ಲ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೊಸ ಬಾಂಬ್ ಹಾಕಿದ್ದಾರೆ.

ಶನಿವಾರ ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ನಳಿನ್ ಕುಮಾರ್, ಕಾಂಗ್ರೆಸ್ ಪಕ್ಷದಲ್ಲಿ ಭ್ರಮ ನಿರಸನಗೊಂಡು ಅಲ್ಲಿನ ಶಾಸಕರು ಬಿಜೆಪಿಯತ್ತ ಬರುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಬಂಡೆ ಮತ್ತು ಹುಲಿಯ ನಡುವೆ ನಾಯಕತ್ವಕ್ಕಾಗಿ ಸಮರ ಏರ್ಪಟ್ಚಿದೆ. ಸಿಎಂ ಸ್ಥಾನಕ್ಕಾಗಿ ಈಗಲೇ ಕಚ್ಚಾಟ ಆರಂಭಿಸಿದ್ದಾರೆ. ಆರ್.ಆರ್ ನಗರದಲ್ಲಿ ಡಿಕೆ ಶಿವಕುಮಾರ್, ಶಿರಾದಲ್ಲಿ ಸಿದ್ದರಾಮಯ್ಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಎರಡು ಕಡೆಯೂ ಕಾಂಗ್ರೆಸ್ ಸೋಲು ಕಾಣಲಿದೆ. ಇವರ ಉಸ್ತುವಾರಿಗಳೇ ಕಾಂಗ್ರೆಸನ್ನು ಸೋಲಿಸಲಿದ್ದಾರೆ. ಬಿಜೆಪಿ ಅಲ್ಲಿ ನಿರಾಯಾಸವಾಗಿ ಗೆಲ್ಲಲಿದೆ ಎಂದರು. ಯಡಿಯೂರಪ್ಪ ನುಡಿದಂತೆ ನಡೆದುಕೊಂಡಿದ್ದಾರೆ. ಬಿಜೆಪಿಗೆ ಬಂದ 17 ಶಾಸಕರಿಗೂ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ರಾಜ್ಯದ ಜನರಿಗೆ ನೀಡಿರುವ ಭರವಸೆಯನ್ನು ಯಡಿಯೂರಪ್ಪ ಈಡೇರಿಸಲಿದ್ದಾರೆ ಎಂದರು.

ಸಿದ್ದರಾಮಯ್ಯ ತನ್ನನ್ನು ಕಾಡು ಮನುಷ್ಯ ಎಂದು ಟೀಕಿಸಿದ್ದಕ್ಕೆ ಅವರ ಹೆಸರೆತ್ತದೆ ಟಾಂಗ್ ನೀಡಿದ ನಳಿನ್ ಕುಮಾರ್, ಕಾಡು ಮನುಷ್ಯನಿಗಿಂತ ಕಾಡು ಪ್ರಾಣಿ ಹೆಚ್ಚು ಕ್ರೂರಿ. ರಾಜ್ಯದಲ್ಲಿ ಹುಲಿ ಅಧಿಕಾರದಲ್ಲಿತ್ತು. ಅದಕ್ಕೆ ಗೋಮಾತೆ ಮೇಲೂ ಕನಿಕರ ಇರಲಿಲ್ಲ ಎಂದು ಟೀಕಿಸಿದರು.