ಮತಾಂಧರ ಮೇಲಿರುವಷ್ಟು ಪ್ರೇಮ ದಲಿತರ ಮೇಲೇಕಿಲ್ಲ ; ಸಿದ್ದುಗೆ ಬಿಜೆಪಿ ಪ್ರಶ್ನೆ

26-10-20 04:48 pm       Bangalore Correspondent   ಕರ್ನಾಟಕ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆ ವ್ಯಂಗ್ಯ ಮಾತಿನ ಮೂಲಕ ತಿವಿಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮೂಲಕ ಪ್ರಶ್ನೆಮಾಡಿದೆ.

ಬೆಂಗಳೂರು, ಅಕ್ಟೋಬರ್ 26: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆ ವ್ಯಂಗ್ಯ ಮಾತಿನ ಮೂಲಕ ತಿವಿಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮೂಲಕ ಪ್ರಶ್ನೆಮಾಡಿದೆ. ಮತಾಂಧರ ಮೇಲೆ ಇರುವಷ್ಟು ಪ್ರೇಮ ನಿಮಗೆ ದಲಿತರ ಮೇಲೆ ಯಾಕಿಲ್ಲ. ನಿಮ್ಮದೇ ಪಕ್ಷದ ಶಾಸಕರ ಮನೆಗೆ ಮತಾಂಧರು ಬೆಂಕಿಯಿಟ್ಟರು. ನೀವು ಮಾಡಿದ್ದಾದರೂ ಏನು ಎಂದು ಬಿಜೆಪಿ ತರಾಟೆಗೆತ್ತಿಕೊಂಡಿದೆ.

ದಲಿತ ಶಾಸಕನ ರಕ್ಷಣೆಗೆ ಹೋಗುವುದು ಬಿಟ್ಟು ಗಲಾಟೆಯಲ್ಲಿ ತೊಡಗಿದವರು ಅಮಾಯಕರು ಎಂದು ಸರ್ಟಿಫಿಕೇಟ್ ನೀಡಿದಿರಿ. ಮತಾಂಧರ ಮೇಲೆ ಇರುವಷ್ಟು ಪ್ರೇಮ ದಲಿತರ ಮೇಲೆ ಯಾಕಿಲ್ಲ ಸಿದ್ದರಾಮಯ್ಯ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಇದಲ್ಲದೆ, ಸಿದ್ದರಾಮಯ್ಯ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಿತ್ತು ಅನ್ನುವುದನ್ನು ಉಲ್ಲೇಖಿಸಿರುವ ಬಿಜೆಪಿ, ಪ್ರತಿ ನಾಲ್ಕು ಗಂಟೆಗೆ ದಲಿತನ ಮೇಲೆ ದೌರ್ಜನ್ಯ ನಡೆದಿತ್ತು. ಪ್ರತಿ 5 ದಿನಕ್ಕೆ ಒಬ್ಬ ದಲಿತನ ಕೊಲೆಯಾಗಿತ್ತು. ಇಷ್ಟೆಲ್ಲ ಆಗುತ್ತಿದ್ದರೂ ನೀವು ಮಾತ್ರ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಮಜವಾದಿಯಂತೆ ಕಾಲ ಕಳೆಯುತ್ತಿದ್ದಿರಿ. ನಿಮ್ಮ ದಲಿತ ಪ್ರೇಮ ಕೇವಲ ನಾಟಕವಲ್ಲವೇ ಎಂದು ಕುಹಕವಾಡಿದೆ.

ಇದೇ ವೇಳೆ, ಪರಮೇಶ್ವರ್ ವಿಚಾರ ಪ್ರಸ್ತಾಪಿಸಿ, 2013ರಲ್ಲಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಇದನ್ನು ತಿಳಿದ ನೀವು ದಲಿತನೊಬ್ಬ ಮುಖ್ಯಮಂತ್ರಿಯಾಗಬಾರದು ಮತ್ತು ನಾನೇ ಸಿಎಂ ಆಗಬೇಕೆಂಬ ನೆಲೆಯಲ್ಲಿ ಸೋಲಿಸಿದಿರಿ..

ಮುಖ್ಯಮಂತ್ರಿಯಾಗಲು ನಿಮಗೆ ದಲಿತರು ಬೇಕಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೇರಲು ಶ್ರಮಿಸಿದ ನಿಮ್ಮದೇ ಪಕ್ಷದ ದಲಿತ ನಾಯಕನನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕಿದಿರಿ. ಒಮ್ಮೆ ಸೋಲಿಸಿದಿರಿ, ಆಬಳಿಕ ಉಪ ಮುಖ್ಯಮಂತ್ರಿ ಪಟ್ಟ ಕಸಿದುಕೊಂಡಿರಿ.. ಇದು ದಲಿತ ಪ್ರೇಮವೇ ಎಂದು ಪ್ರಶ್ನಿಸಿದೆ. 

ನಿಮ್ಮ ತುಘಲಕ್‌ ದರ್ಬಾರ್‌ ನಲ್ಲಿ 350 ಕ್ಕೂ ಹೆಚ್ಚು ದಲಿತರ ಕೊಲೆಗಳಾದವು. 800 ಕ್ಕೂ ಅಧಿಕ ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. 9000 ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದವು. ದಲಿತರ ರಕ್ಷಣೆಗಿಂತ ನಿಮಗೆ ಟಿಪ್ಪು ಜಯಂತಿ ಆಚರಣೆ ಮುಖ್ಯವಾಯಿತಲ್ಲವೇ ಎಂದು ಬಿಜೆಪಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ಎತ್ತಿಕೊಂಡಿದೆ.