ದೀಪಗಳ ಹಬ್ಬಕ್ಕೆ ಈ ಬಾರಿ ಪಟಾಕಿ ಸಿಡಿಸುವಂತಿಲ್ಲ !

06-11-20 03:02 pm       Headline Karnataka News Network   ಕರ್ನಾಟಕ

ಈ ಬಾರಿ ಕೊರೊನಾ ಮುಂಜಾಗ್ರತೆ ಮತ್ತು ಪರಿಸರ ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರು, ನವೆಂಬರ್ 06: ರಾಜ್ಯದಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.

ದೀಪಾವಳಿಗೆ ಪ್ರತಿ ವರ್ಷ ಹಬ್ಬದ ಸಡಗರದಲ್ಲಿ ಪಟಾಕಿ ಸಿಡಿಸುವುದು ವಾಡಿಕೆ. ಆದರೆ, ಈ ಬಾರಿ ಕೊರೊನಾ ಮುಂಜಾಗ್ರತೆ ಮತ್ತು ಪರಿಸರ ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಈ ಬಗ್ಗೆ ಸಂಜೆ ವೇಳೆಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಆದರೆ, ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಹಿಂದು ಸಂಘಟನೆಗಳ ಕೋಪಕ್ಕೆ ಗುರಿಯಾಗಿದೆ. ವರ್ಷಕ್ಕೆ ಒಮ್ಮೆಯಷ್ಟೇ ಹಬ್ಬದ ನಿಮಿತ್ತ ಪಟಾಕಿ ಉರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಅದನ್ನು ತಡೆಯಲು ಸರಕಾರ ಮುಂದಾಗುವುದು ಸರಿಯಲ್ಲ. ದೀಪಾವಳಿ ಹಬ್ಬದ ಒಂದು ದಿನಕ್ಕಷ್ಟೇ ಪಟಾಕಿ ಸಿಡಿಸಲು ಅವಕಾಶ ನೀಡಬೇಕೆಂದು ಆಗ್ರಹ ಮುಂದಿಟ್ಟಿವೆ.

ದೆಹಲಿಯಲ್ಲೂ ಪಟಾಕಿ ಬ್ಯಾನ್ !

ಇದೇ ವೇಳೆ, ದೆಹಲಿ ಸರಕಾರ ರಾಜಧಾನಿಯಲ್ಲಿ ಸಂಪೂರ್ಣ ಪಟಾಕಿ ನಿಷೇಧಿಸಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಮತ್ತಷ್ಟು ಪರಿಸರ ಹದಗೆಡಿಸುವುದು ಬೇಡ ಎಂದು ಕೇಜ್ರಿವಾಲ್ ಸರಕಾರ ಪಟಾಕಿ ಸುಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. 

ಎನ್ ಜಿಟಿ ನೋಟಿಸ್ ಹಿನ್ನೆಲೆ ಪಟಾಕಿ ಬ್ಯಾನ್ 

ದೀಪಾವಳಿ ವೇಳೆ ವಾಯುಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಸುಡುವುದನ್ನು ನಿಷೇಧಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ವಾಯುಮಾಲಿನ್ಯ ಹೆಚ್ಚಿರುವ, ಕರ್ನಾಟಕ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿತ್ತು. 

ಕೊರೊನಾ ಸಾಂಕ್ರಾಮಿಕದ ಜೊತೆಗೆ ದೀಪಾವಳಿ ಹಬ್ಬವೂ ಇರುವ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವಂತೆ ಕೋರಿ ಇಂಡಿಯನ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್‌ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ನವೆಂಬರ್ 7 ರಿಂದ 30 ರವರೆಗೆ ಪಟಾಕಿ ಬಳಕೆಯನ್ನು ನಿಷೇಧಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  ನವೆಂಬರ್ 2 ರಂದು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (ಎಂಒಇಎಫ್) ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ಪಟಾಕಿ ನಿಷೇಧಿಸುವ ನಿರ್ಧಾರ ಕೈಗೊಂಡಿದೆ.

Karnataka chief minister BS Yediyurappa on Friday said that the state has decided to ban firecrackers during Diwali in the wake of COVID-19.