ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್‌ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; 12 ಲಕ್ಷ ರೂ. ಮೌಲ್ಯದ ಚಿನ್ನ–ಬೆಳ್ಳಿ, ನಗದು ದೋಚಿ ಎಸ್ಕೇಪ್ ಅದು ಖದೀಮರು, ಕಳ್ಳರ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು

11-08-26 05:34 pm       HK News Staffer   ಕ್ರೈಂ

ನಗರದ ಹೊರವಲಯದ ಕೊಡಂಕೂರು ಪುತ್ತೂರು ಗ್ರಾಮದಲ್ಲಿ ಶಿಕ್ಷಕಿಯೊಬ್ಬರ ಮನೆಯ ಟೆರೇಸ್‌ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಉಡುಪಿ, ಆಗಸ್ಟ್‌ 11: ನಗರದ ಹೊರವಲಯದ ಕೊಡಂಕೂರು ಪುತ್ತೂರು ಗ್ರಾಮದಲ್ಲಿ ಶಿಕ್ಷಕಿಯೊಬ್ಬರ ಮನೆಯ ಟೆರೇಸ್‌ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೊಡಂಕೂರಿನ ಲಲಿತ ನಿವಾಸದ ಶಶಿರೇಖಾ (38) ಅವರು ಮೈಸೂರು ಜಿಲ್ಲೆಯ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಅವರು ಮೇ 25ರಂದು ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ಮೈಸೂರಿಗೆ ತೆರಳಿದ್ದರು.

ಭಾನುವಾರ (ಆಗಸ್ಟ್‌ 9) ರಾತ್ರಿ ಸುಮಾರು 10.30ರ ವೇಳೆಗೆ ಪತಿ ಶರತ್ ಕುಮಾರ್ ಹಾಗೂ ಕುಟುಂಬದವರೊಂದಿಗೆ ಮನೆಗೆ ವಾಪಸ್‌ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯೊಳಗೆ ಪರಿಶೀಲಿಸಿದಾಗ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಬೋರ್ಡ್‌ ಹಾಗೂ ಬೀರುಗಳು ತೆರೆದಿರುವುದು ಕಂಡುಬಂದಿದೆ.

ಟೆರೇಸ್‌ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು

ಮನೆಯ ಪ್ರಮುಖ ಪ್ರವೇಶದ್ವಾರವನ್ನು ಆಯುಧದಿಂದ ಮೀಟಿ ತೆರೆಯಲು ಕಳ್ಳರು ಮೊದಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನೆಯ ದಕ್ಷಿಣ ಭಾಗದ ಗೋಡೆ ಹತ್ತಿ ಟೆರೇಸ್‌ ಮೇಲಕ್ಕೆ ತೆರಳಿದ್ದಾರೆ. ಬಳಿಕ ಟೆರೇಸ್‌ನ ಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿದ್ದಾರೆ.

ಮನೆಯಲ್ಲಿದ್ದ ಕೀಗಳನ್ನು ಬಳಸಿಕೊಂಡು ಎರಡು ಬೆಡ್‌ರೂಂಗಳಲ್ಲಿದ್ದ ಕಬೋರ್ಡ್‌ ಹಾಗೂ ಬೀರುಗಳನ್ನು ತೆರೆದ ಕಳ್ಳರು, ಅದರಲ್ಲಿದ್ದ ವಸ್ತುಗಳನ್ನು ಹೊರತೆಗೆದು ಚಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ನಂತರ ಬೆಲೆಬಾಳುವ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಚಿನ್ನ, ಬೆಳ್ಳಿ ಹಾಗೂ ₹40 ಸಾವಿರ ನಗದು ಕಳವು;

ಕಳ್ಳತನವಾಗಿರುವ ಸೊತ್ತುಗಳ ಪೈಕಿ ಬೆಡ್‌ರೂಂ ಕಬೋರ್ಡ್‌ನಲ್ಲಿದ್ದ 100 ಗ್ರಾಂ ತೂಕದ ಚಿನ್ನದ ಸರ, ತಲಾ 1 ಗ್ರಾಂ ಹಾಗೂ ಅರ್ಧ ಗ್ರಾಂ ತೂಕದ ಚಿನ್ನದ ನಾಣ್ಯಗಳು ಸೇರಿವೆ. ಇವುಗಳ ಒಟ್ಟು ಮೌಲ್ಯ ಸುಮಾರು ₹10 ಲಕ್ಷ ಎಂದು ತಿಳಿದುಬಂದಿದೆ. ಇದರೊಂದಿಗೆ 1 ಕೆಜಿ 650 ಗ್ರಾಂ ತೂಕದ ಬೆಳ್ಳಿ ಚೆಂಬು, ಹರಿವಾಣ, ಪಂಚಪಾತ್ರೆ, ತಟ್ಟೆ, ದೇವರ ಕೋಣೆಯಲ್ಲಿದ್ದ ಅರಿಶಿನ–ಕುಂಕುಮ ಬಟ್ಟಲು, ದೀಪಗಳು ಹಾಗೂ ಕಾಲುಚೈನ್‌ ಸೇರಿದಂತೆ ಬೆಳ್ಳಿ ವಸ್ತುಗಳು ಹಾಗೂ ₹40,000 ನಗದು ಕಳ್ಳತನವಾಗಿದೆ. ಕಳವಾಗಿರುವ ಒಟ್ಟು ಸೊತ್ತಿನ ಮೌಲ್ಯ ಸುಮಾರು ₹12 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಕುರಿತು ಶಶಿರೇಖಾ ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯೊಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಕಳ್ಳರ ಚಲನವಲನ ಮತ್ತು ಕಳವು ನಡೆದ ರೀತಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.