ಮಳೆ ಅವಾಂತರ; ಚಾರ್ಮಾಡಿ ಘಾಟ್, ಶೃಂಗೇರಿ- ಮಂಗಳೂರು ಹೆದ್ದಾರಿ​ ಬಂದ್

07-08-20 07:30 am       Headline Karnataka News Network   ಕರ್ನಾಟಕ

ಮಳೆಯಿಂದ ಗುಡ್ಡ ಕುಸಿದು, ಚಾರ್ಮಾಡಿ ಘಾಟ್​ ಬಂದ್ ಆಗಿದೆ. ಹಾಗೇ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯೂ ಬಂದ್ ಆಗಿದೆ.

ಚಿಕ್ಕಮಗಳೂರು (ಆ. 7): ಮಲೆನಾಡಿನ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಇಂದು ಕೂಡ ಮಳೆಯ ಆರ್ಭಟ ಮುಂದುವರೆದಿದೆ. ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕಾಫಿನಾಡಿನ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದ ಗುಡ್ಡ ಕುಸಿದು, ಚಾರ್ಮಾಡಿ ಘಾಟ್​ ಬಂದ್ ಆಗಿದೆ. ಹಾಗೇ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯೂ ಬಂದ್ ಆಗಿದೆ.

ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಇದರಿಂದ ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ರಸ್ತೆ ಬಂದ್ ಆಗಿದೆ. ರಸ್ತೆಗೆ ಬಿದ್ದಿರುವ ಭಾರೀ ಗಾತ್ರದ ಬಂಡೆ-ಮರ-ಮಣ್ಣಿನಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಚಾರ್ಮಾಡಿ ಘಾಟ್ ಅಲೇಕಾನ್ ಬಳಿ ಘಟನೆ ನಡೆದಿದೆ. ಇದರಿಂದ ಮತ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಮಣ್ಣು ತೆರೆವು ಕಾರ್ಯದಲ್ಲಿ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ನಿರತರಾಗಿದ್ದಾರೆ. ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಕಾರ್ಯ ನಡೆಸಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಂಗಳೂರು ರಸ್ತೆ ಸಂಪರ್ಕ ಬಂದ್ ಆಗಿದ್ದು, ಶೃಂಗೇರಿಯ ಗಾಂಧಿ ಮೈದಾನ ಜಲಾವೃತವಾಗಿದೆ. ಕಪ್ಪೆ ಶಂಕರ ದೇವಾಲಯ ಕೂಡ ಮುಳುಗಡೆಯಾಗಿದೆ. ಹಾಗೇ, ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಿಂದ ಬಾಳೆಹೊನ್ನೂರಿನ ಸಂತೆ ಮೈದಾನದ ಕಟ್ಟಡಗಳು, ಮಳಿಗೆಗಳು ಜಲಾವೃತವಾಗಿವೆ. ಇದರಿಂದ ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ಭಾಗದಲ್ಲೂ ಮಳೆ ಮುಂದುವರೆದಿದೆ. ಇದರಿಂದ ಮಲೆನಾಡಿನ ಜನಜೀವನದ ಸಂಪೂರ್ಣ ಅಸ್ತವ್ಯಸ್ತವಾಗಿದೆ.