Mukka Accident, Mangalore: ಮುಕ್ಕ ಬಳಿ ಭೀಕರ ಅಪಘಾತ ; ಲಾರಿ ಓವರ್ ಟೇಕ್ ಯತ್ನದಲ್ಲಿ ಬೈಕ್ ಪಲ್ಟಿ, ಬಾಗಲಕೋಟ ಮೂಲದ ಯುವಕ ಸ್ಥಳದಲ್ಲೇ ಸಾವು 

24-05-26 09:22 pm       Mangaluru Staffer   ಕರಾವಳಿ

ಸುರತ್ಕಲ್ ಬಳಿಯ ಮುಕ್ಕದಲ್ಲಿ ಭೀಕರ ಅಪಘಾತ ನಡೆದಿದ್ದು ಲಾರಿ ಓವರ್ ಟೇಕ್ ಮಾಡುವ ಧಾವಂತದಲ್ಲಿ ಬಾಗಲಕೋಟ ಮೂಲದ ಯುವಕನೊಬ್ಬ ಲಾರಿಯಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. 

ಮಂಗಳೂರು, ಮೇ 24: ಸುರತ್ಕಲ್ ಬಳಿಯ ಮುಕ್ಕದಲ್ಲಿ ಭೀಕರ ಅಪಘಾತ ನಡೆದಿದ್ದು ಲಾರಿ ಓವರ್ ಟೇಕ್ ಮಾಡುವ ಧಾವಂತದಲ್ಲಿ ಬಾಗಲಕೋಟ ಮೂಲದ ಯುವಕನೊಬ್ಬ ಲಾರಿಯಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. 

ಇಂದು ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಮುಕ್ಕ ಕಡೆಯಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಯತ್ನದಲ್ಲಿದ್ದಾಗ ಬೈಕ್ ಲಾರಿಯ ಬದಿಗೆ ತಾಗಿದ್ದು ಪಲ್ಟಿಯಾಗಿ ಬಿದ್ದಿದೆ. ಬೈಕಿನಲ್ಲಿ ಮೂವರು ಸವಾರರಿದ್ದು ಮಂಜುನಾಥ್ ಎನ್ನುವಾತ ಬೈಕ್ ಚಲಾಯಿಸುತ್ತಿದ್ದ. ಮಧ್ಯದಲ್ಲಿದ್ದ ಭೀಮ ಸಿದ್ದಪ್ಪ (20) ಎನ್ನುವಾತ ರಸ್ತೆಗೆ ಬಿದ್ದಿದ್ದು ಇನ್ನೊಂದು ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾನೆ. ಸವಾರ ಮಂಜುನಾಥ್ ಮತ್ತು ಇನ್ನೊಬ್ಬ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

ಮೂವರು ಯುವಕರು ಬಾಗಲಕೋಟ ಮೂಲದವರಾಗಿದ್ದು ಮುಲ್ಕಿಯಲ್ಲಿ ಕೆಲಸ ಮುಗಿಸಿ ಸುರತ್ಕಲ್ ಕಡೆಗೆ ತೆರಳುತ್ತಿದ್ದರು. ಸ್ಥಳದಲ್ಲಿದ್ದ ಎಎಸ್ಐ ಕೃಷ್ಣ ಅವರು ಅಪಘಾತದಲ್ಲಿ ಮೃತಪಟ್ಟ ಯುವಕನ ಶವವನ್ನು ಸ್ಥಳೀಯರೊಂದಿಗೆ ಸೇರಿ ಸ್ಟ್ರೆಚರ್ ನಲ್ಲಿ ಹಾಕಿ ಆಸ್ಪತ್ರೆಗೆ ಸಾಗಿಸಿದರು. ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೈಕ್ ಸವಾರರ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ತಿಳಿಸಿದ್ದಾರೆ.