ಕೇಂದ್ರ ಸರ್ಕಾರದ ಹೊಸ ಕಾನೂನುಗಳಿಗೆ ರಾಜ್ಯದಲ್ಲಿ ತಿದ್ದುಪಡಿ ; ನಮ್ಮ ಸಲಹೆಗಳನ್ನು ಪರಿಗಣಿಸಿಲ್ಲ, ಉಪವಾಸ ಸತ್ಯಾಗ್ರಹ ಅಪರಾಧ ಎಂದರೆ ಹೇಗೆ ? ಕಸ್ಟಡಿ ಅವಧಿ ವಿಸ್ತರಿಸಿದ್ದು ಸರಿಯಲ್ಲ ! 

02-07-24 01:16 pm       Bangalore Correspondent   ಕರ್ನಾಟಕ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕಾನೂನುಗಳಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು ಅಗತ್ಯ ಇರುವಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ಹಿಂದೆ ಐಪಿಸಿ ಕೋಡ್ ಬದಲಾಗಿ ಕೆಲವು ಬದಲಾವಣೆಗಳೊಂದಿಗೆ ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಸಾಕ್ಷ್ಯ ಅಧಿನಿಯಮ ಎಂಬ ಹೆಸರಲ್ಲಿ ಹೊಸ ಕಾನೂನು ಜಾರಿಗೆ ತಂದಿದೆ. 

ಬೆಂಗಳೂರು, ಜುಲೈ 2: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕಾನೂನುಗಳಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು ಅಗತ್ಯ ಇರುವಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ಹಿಂದೆ ಐಪಿಸಿ ಕೋಡ್ ಬದಲಾಗಿ ಕೆಲವು ಬದಲಾವಣೆಗಳೊಂದಿಗೆ ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಸಾಕ್ಷ್ಯ ಅಧಿನಿಯಮ ಎಂಬ ಹೆಸರಲ್ಲಿ ಹೊಸ ಕಾನೂನು ಜಾರಿಗೆ ತಂದಿದೆ. 

ಹೊಸ ಕಾನೂನು ಜಾರಿ ಸಂದರ್ಭದಲ್ಲಿ ಎಲ್ಲ ರೀತಿಯ ಎಚ್ಚರಿಕೆಯನ್ನು ಕೈಗೊಳ್ಳಬೇಕು. ಹಿಂದಿನ ಸರ್ಕಾರದ ಕ್ಯಾಬಿನೆಟ್ ನಲ್ಲಿ ಆದ ನಿರ್ಣಯವನ್ನು ಈಗ ಜಾರಿಗೊಳಿಸಿದ್ದು ಸರಿಯಲ್ಲ ಎಂದು ಹೇಳಿರುವ ಎಚ್.ಕೆ ಪಾಟೀಲ್, 2023 ರಲ್ಲಿ ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರಕ್ಕೆ ಕಳಿಸಿದ್ದ ಪತ್ರದ ಮೇರೆಗೆ ತಜ್ಞರ ಸಮಿತಿ ರಚನೆ ಮಾಡಿ ವರದಿ ನೀಡಲು ಸಿದ್ದರಾಮಯ್ಯ ಸೂಚಿಸಿದ್ದರು. ಹೀಗಾಗಿ ತಜ್ಞರ ಸಮಿತಿ ವರದಿ ಹಾಗೂ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೆವು. ಇದನ್ನು ಉಲ್ಲೇಖಿಸಿ ಅಮಿತ್ ಶಾಗೆ ಸಿದ್ದರಾಮಯ್ಯ ಪತ್ರ ಬರೆದು, ಸಲಹೆಗಳನ್ನು ಪರಿಗಣಿಸುವಂತೆ ವರದಿಯನ್ನು ನೀಡಿದ್ದರು. ನಾವು ಆ ಸುಧೀರ್ಘ ಪತ್ರದಲ್ಲಿ ಒಟ್ಟು 23 ಸಲಹೆಗಳನ್ನು ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ನಮ್ಮ ಸಲಹೆಗಳನ್ನು ಪರಿಗಣಿಸಿಲ್ಲ. ನಮ್ಮ ಯಾವುದೇ ಅಭಿಪ್ರಾಯವನ್ನು ಅದರಲ್ಲಿ ಸೇರಿಸಿಲ್ಲ. ಸಂಸತ್ತಿನಲ್ಲಿ ಮಂಡಿಸಿದ್ದ ಮಸೂದೆಯನ್ನ ಯಥಾವತ್ತಾಗಿ ಜಾರಿ ಮಾಡಿದ್ದಾರೆ ಎಂದು ತಿಳಿಸಿದರು. 

ಹೊಸ ಕಾನೂನಿನಲ್ಲಿ ಅನಾನುಕೂಲಗಳೇ ಹೆಚ್ಚಿದ್ದು ಗೊಂದಲ ಮೂಡಿಸುವ ತಿದ್ದುಪಡಿಗಳಿವೆ. ಜನಾಭಿಪ್ರಾಯ ಮತ್ತು ವಕೀಲರ ಅಭಿಪ್ರಾಯ ನಿರ್ಲಕ್ಷ್ಯ ಮಾಡಿ ಕಾನೂನು ಮಾಡಿದ್ದಾರೆ. ಹೀಗಾಗಿ ಈ ಮೂರು ಕಾನೂನುಗಳನ್ನು ರಾಜ್ಯ ಸರ್ಕಾರ ವಿರೋಧ ಮಾಡುತ್ತದೆ ಎಂದು ಹೇಳಿದರು.

ಯಾವೆಲ್ಲ ಸೆಕ್ಷನ್ ಗಳಿಗೆ ತಿದ್ದುಪಡಿ ? 

ಕೇಂದ್ರ ಸರ್ಕಾರದ ಕಾನೂನು ತಿದ್ದುಪಡಿ ಮಾಡಬಹುದಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನುಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ. ಸಂವಿಧಾನದ ಅನುಚ್ಛೇದ 7, 3ನೇ ಪಟ್ಟಿಯ ಅಧಿಕಾರ ಬಳಸಿ ತಿದ್ದುಪಡಿ ಮಾಡಲು ಅವಕಾಶ ಇದೆ ಎಂದರು. ಸರ್ಕಾರದ ಕ್ರಮಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವುದು ಈ ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಅಲ್ಲ. ಇದು ದುರ್ದೈವದ ಸಂಗತಿಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ, ಹೋರಾಟಗಾರರನ್ನು ತಿರಸ್ಕಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಅಪರಾಧ ಎಂಬುದಕ್ಕೆ ತಿದ್ದುಪಡಿ ಮಾಡುತ್ತೇವೆ. ರಾಷ್ಟ್ರಪಿತ, ರಾಷ್ಟ್ರೀಯ ಲಾಂಛನ, ಬಾವುಟಕ್ಕೆ ಅಗೌರವ ತೋರಿಸಿದವರ ವಿರುದ್ಧ ಕ್ರಮಕ್ಕೆ ತಿದ್ದುಪಡಿ ಮಾಡಲು ಸೂಚಿಸಿದ್ದೆವು. ಅದಕ್ಕೂ ಕೇಂದ್ರ ಸರ್ಕಾರ ಒಪ್ಪಿಲ್ಲ. ಈ ನಿಟ್ಟಿನಲ್ಲಿ ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದರು. 

ಸಂಘಟಿತ ಅಪರಾಧ ಎಂದು ಆರೋಪಿಸಿ, ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಇದೆ. ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ 3 ವರ್ಷ ಜೈಲು ಹಾಗೂ ದಂಡಕ್ಕೆ ಅವಕಾಶ ಇದೆ. ಸೈಬರ್ ಅಪರಾಧ, ಹ್ಯಾಕಿಂಗ್, ಆರ್ಥಿಕ ಅಪರಾಧ, ಅಣ್ವಸ್ತ್ರ ಗೌಪ್ಯತೆ ಹಾಗೂ ತಂತ್ರಜ್ಞಾನ ಮೂಲಕ ವಿಧ್ವಂಸಕ ಕೃತ್ಯ ಎಸಗುವ ಅಪರಾಧಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ಕ್ರಮಕ್ಕೆ ತಿದ್ದುಪಡಿ ಮಾಡಲಾಗುತ್ತದೆ. ಮೃತ ದೇಹದ ಮೇಲೆ ಅತ್ಯಾಚಾರವೆಸಗುವುದು ಅಕ್ಷ್ಮಮ್ಯ ಅಪರಾಧ. ಇದನ್ನು ಅಪರಾಧವೆಂದು ಪರಿಗಣಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡುತ್ತೇವೆ ಎಂದರು. 

ಕಸ್ಟಡಿ ಅವಧಿ 90 ದಿನಗಳಿಗೆ ಹೆಚ್ಚಿಸಿದ್ದು ಸರಿಯಲ್ಲ 

ಹೊಸ ಕಾಯ್ದೆಯಡಿ ಪೊಲೀಸ್ ಕಸ್ಟಡಿ ಅವಧಿಗೆ 90 ದಿನಗಳಿಗೆ ಅವಕಾಶ ಇದೆ. ಇದು ದೀರ್ಘ ಕಾಲದ ಅವಧಿಯಾಗುತ್ತದೆ. ಮೊದಲು 15 ದಿನ ಇತ್ತು. ಆದರೆ ಈಗ ಅದನ್ನು ಹೆಚ್ಚು ದಿನಗಳ ವರೆಗೆ ಮಾಡಿದ್ದಾರೆ. ಇದನ್ನು ಕಡತಗೊಳಿಸಲು ತಿದ್ದುಪಡಿ ಮಾಡಬೇಕು. ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿ ಪಾಸ್ತಿ ಜಪ್ತಿ ಮಾಡಲು ಮೊದಲು ಕೋರ್ಟ್ ಅನುಮತಿ ಬೇಕಾಗಿತ್ತು. ಆದರೆ ಹೊಸ ಕಾನೂನಿನಲ್ಲಿ ಪೊಲೀಸರಿಗೆ ಅನುಮತಿ ನೀಡಲಾಗಿದೆ. ಇದನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದರು.

Opposing the Bharatiya Nyaya Sanhita (BNS) and two other legislations that came into force from Monday, Karnataka is considering introducing amendments at the State level to change the new criminal laws.