ಸಿಎಂಗೆ ಕ್ಲೀನ್ ಚಿಟ್ ಕೊಟ್ಟರೂ, ಮುಡಾ ಹಗರಣದ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ; ಸಾವಿರಕ್ಕೂ ಹೆಚ್ಚು ಸೈಟ್ ಅಕ್ರಮ ಹಂಚಿಕೆ ! ಬೊಕ್ಕಸಕ್ಕೆ ಭಾರೀ ನಷ್ಟ, ಹೆಚ್ಚಿನ ತನಿಖೆ ಅಗತ್ಯವೆಂದು ಕೋರ್ಟಿಗೆ ವರದಿ

26-02-25 10:43 pm       Bangalore Correspondent   ಕರ್ನಾಟಕ

ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ. ಆದರೆ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ಪಡೆದ 14 ಬದಲಿ ನಿವೇಶನ ಸೇರಿದಂತೆ ಒಟ್ಟು 1,055 ನಿವೇಶನ ಹಂಚಿಕೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಲೋಕಾಯುಕ್ತ ಕೋರ್ಟಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಬೊಟ್ಟು ಮಾಡಲಾಗಿದೆ. ಇದರಿಂದ ಮುಡಾ ಹಗರಣ ಸೈಟ್ ಹಂಚಿಕೆ ಮಾಡಿದ ಅಧಿಕಾರಿಗಳ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ. 

ಬೆಂಗಳೂರು, ಫೆ.26 : ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ. ಆದರೆ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ಪಡೆದ 14 ಬದಲಿ ನಿವೇಶನ ಸೇರಿದಂತೆ ಒಟ್ಟು 1,055 ನಿವೇಶನ ಹಂಚಿಕೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಲೋಕಾಯುಕ್ತ ಕೋರ್ಟಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಬೊಟ್ಟು ಮಾಡಲಾಗಿದೆ. ಇದರಿಂದ ಮುಡಾ ಹಗರಣ ಸೈಟ್ ಹಂಚಿಕೆ ಮಾಡಿದ ಅಧಿಕಾರಿಗಳ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ. 

ಕಾನೂನು ಪ್ರಕಾರ ಭೂಮಿ ಸ್ವಾಧೀನಪಡಿಸದೆ ಮುಡಾ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸಲಾದ ಖಾಸಗಿ ಭೂಮಿಗಳ ಮಾಲೀಕರಿಗೆ ಪರಿಹಾರ ನೀಡಲು ಸರಕಾರದಿಂದ ಯಾವುದೇ ನಿಶ್ಚಿತ ಮಾರ್ಗಸೂಚಿ ಅಥವಾ ನಿಯಮಗಳಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮುಡಾದ ಹಿಂದಿನ ಆಯುಕ್ತ ನಟೇಶ್ ತಮ್ಮ ಇಚ್ಛಾನುಸಾರ ಬದಲಿ ನಿವೇಶನ ಹಾಗೂ ಪರಿಹಾರ ನೀಡಿದ್ದಾರೆ ಎಂಬುದನ್ನು ಲೋಕಾಯುಕ್ತ ತನಿಖೆಯ ವರದಿಯಲ್ಲಿ ತೋರಿಸಲಾಗಿದೆ. 

ಇದೇ ರೀತಿ ನಿಯಮಗಳನ್ನು ಉಲ್ಲಂಘಿಸಿ 2016ರಿಂದ 2024ರ ವರೆಗೆ ಒಟ್ಟು 134 ಪ್ರಕರಣಗಳಲ್ಲಿ 1,055 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದ ನಷ್ಟವಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತನಿಖೆ ನಂತರವಷ್ಟೇ ಎಷ್ಟು ಪ್ರಮಾಣದ ನಷ್ಟವಾಗಿದೆ ಎಂಬುದು ಗೊತ್ತಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮೂಲಕ, ಮುಡಾ ಮಾಜಿ ಆಯುಕ್ತ ನಟೇಶ್‌ ಸೇರಿದಂತೆ ಇತರರ ವಿರುದ್ಧ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. 

ನಿವೇಶನಗಳನ್ನು ಹಂಚಿಕೆ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡದೆ ವಿಜಯನಗರ 3 ಹಾಗೂ 4ನೇ ಹಂತದಲ್ಲಿ ಖಾಲಿಯಿದ್ದ 2,555 ನಿವೇಶನಗಳ ಪೈಕಿ 14 ನಿವೇಶನಗಳನ್ನು ಮುಡಾ ಆಯುಕ್ತ ನಟೇಶ್‌ 50:50ರ ಅನುಪಾತದಲ್ಲಿ ಸಿದ್ದರಾಮಯ್ಯ ಪತ್ನಿಗೆ ಹಂಚಿಕೆ ಮಾಡಿದ್ದರು. ಈ ಪ್ರಕರಣ ಮಾತ್ರವಲ್ಲದೆ, ನಟೇಶ್‌ ತಮ್ಮ ಅಧಿಕಾರವಧಿಯಲ್ಲಿ 50:50 ಅನುಪಾತದಲ್ಲಿ ಸಾವಿರಕ್ಕೂ ಹೆಚ್ಚು ನಿವೇಶನ ಹಂಚಿಕೆ ಮಾಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕು ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಅಷ್ಟೇ ಅಲ್ಲದೆ, 2021ರ ಜುಲೈ 7ರಂದು ಸರಕಾರಕ್ಕೆ ಪತ್ರ ಬರೆದಿದ್ದ ಮುಡಾ ಆಯುಕ್ತ ನಟೇಶ್‌, ಬಿ.ಎಂ. ಪಾರ್ವತಿ ಸೇರಿದಂತೆ ಇನ್ನಿತರರಿಗೆ ಬದಲಿ ಜಮೀನು ನೀಡುವ ಕುರಿತು ಮಾರ್ಗದರ್ಶನ ನೀಡುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು. ಬಳಿಕ, ನವೆಂಬರ್‌ 6 ಹಾಗೂ ನವೆಂಬರ್‌ 20ರಂದು ಶೇ. 50:50 ಅನುಪಾತದಲ್ಲಿ ಪ್ರಾಧಿಕಾರದ ನಿವೇಶನಗಳನ್ನು ಹಂಚಿಕೆ ಮಾಡಿದ್ದು ಈ ಕುರಿತು ಸರ್ಕಾರದ ಅನುಮತಿ ಪಡೆಯದೆ ಲೋಪ ಎಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

Lokayukta Report Reveals Muda Scam, Calls for Further Investigation Despite Clean Chit to CM Amidst Widespread Illegal Site Sharing.