DK Shivakumar, BJP, Amit Shah, congress: ಡಿಕೆಶಿ ವರಸೆಯಲ್ಲಿ ದಿಢೀರ್ ಬದಲಾವಣೆ ; ಹೈಕಮಾಂಡ್ ನಾಯಕರಿಗೇ ಬೆದರಿಸುವ ತಂತ್ರಗಾರಿಕೆ, ಸಿಎಂ ಸ್ಥಾನವೋ, ಕೆಪಿಸಿಸಿ ಅಧ್ಯಕ್ಷ ಸ್ಥಾನವೋ ? ಕೇಂದ್ರ ನಾಯಕರ ಬೆನ್ನಿಗಿರಿಯುತ್ತಿರುವ ಡಿಕೆಶಿ ಅಸ್ತ್ರ !

27-02-25 01:46 pm       Giridhar Shetty   ಕರ್ನಾಟಕ

ಕಾಂಗ್ರೆಸಿನಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹಿರಿಯ ಸಚಿವರುಗಳೆಲ್ಲ ತಮಗೆ ತೋಚಿದ್ದೆಲ್ಲ ಹೇಳಿದ್ದಾಯ್ತು. ಆದರೆ ಸಿದ್ದರಾಮಯ್ಯ ಬಣದವರ ಟಾರ್ಗೆಟ್ ಮಾತ್ರ ಒಂದೇ ಆಗಿದ್ದಂತಿತ್ತು. ಡಿಕೆಶಿ ಮುಂದೆ ಸಿಎಂ ಸ್ಥಾನಕ್ಕೇರಬಾರದು ಮತ್ತು ಅದಕ್ಕಾಗಿ ಈಗಲೇ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಅನ್ನುವುದು.

ಬೆಂಗಳೂರು, ಫೆ.27: ಕಾಂಗ್ರೆಸಿನಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹಿರಿಯ ಸಚಿವರುಗಳೆಲ್ಲ ತಮಗೆ ತೋಚಿದ್ದೆಲ್ಲ ಹೇಳಿದ್ದಾಯ್ತು. ಆದರೆ ಸಿದ್ದರಾಮಯ್ಯ ಬಣದವರ ಟಾರ್ಗೆಟ್ ಮಾತ್ರ ಒಂದೇ ಆಗಿದ್ದಂತಿತ್ತು. ಡಿಕೆಶಿ ಮುಂದೆ ಸಿಎಂ ಸ್ಥಾನಕ್ಕೇರಬಾರದು ಮತ್ತು ಅದಕ್ಕಾಗಿ ಈಗಲೇ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಅನ್ನುವುದು. ಬಹುತೇಕ ಹಿಂದುಳಿದ ವರ್ಗದ ಸಚಿವರು ಇದೇ ಉದ್ದೇಶದಲ್ಲಿ ಕೆಪಿಸಿಸಿ ಅಧ್ಯಕ್ಷತೆ ಮತ್ತು ಸಿಎಂ ಸ್ಥಾನ ದಲಿತ ವರ್ಗಕ್ಕೆ ಸಿಗಬೇಕು ಎನ್ನುವ ವರಾತ ತೆಗೆದಿದ್ದಾರೆ. ಆದರೆ ಇದರ ಹಿಂದಿನ ಅಜೆಂಡಾ ಅರಿಯದವರೇನೂ ಡಿಕೆಶಿ ಅಲ್ಲ.

ಬಿಜೆಪಿಗೆ ಅಮಿತ್ ಷಾ ಹೇಗೋ ಕಾಂಗ್ರೆಸಿಗೂ ಡಿಕೆಶಿ ಟ್ರಬಲ್ ಶೂಟರ್ ಇದ್ದಂತಿದ್ದಾರೆ. ಯಾವುದೇ ರಾಜ್ಯದಲ್ಲಿ ಬಿಕ್ಕಟ್ಟು ಎದುರಾದರೂ, ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಡಿಕೆಶಿಯನ್ನೇ ನೆಚ್ಚಿಕೊಂಡಿದೆ. ಈ ಹಿಂದೆ ತೆಲಂಗಾಣ, ರಾಜಸ್ಥಾನ, ಬಿಹಾರ, ದಿಲ್ಲಿಗೂ ಕರೆಸಿಕೊಂಡಿದ್ದೂ ಇದೆ. ಯಾಕಂದ್ರೆ, ಡಿಕೆಶಿ ಬಳಿಯಿರುವ ಮ್ಯಾನ್ ಪವರ್ ಮತ್ತು ಮನಿ ಪವರ್ ಬಗ್ಗೆ ಹೈಕಮಾಂಡ್ ನಾಯಕರೂ ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ರಾಜ್ಯದಲ್ಲಿ ವಿರೋಧಿ ಬಣದ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಕೂಗು ಹಾಕಿರುವಾಗಲೇ ಡಿಕೆಶಿ ದೆಹಲಿಗೆ ಹಾರಿದ್ದರು. ಕೇಂದ್ರ ಸರಕಾರದ ಜಲಶಕ್ತಿ ಸಚಿವಾಲಯದ ಕಾರ್ಯಕ್ರಮದ ನೆಪದಲ್ಲಿ ದೆಹಲಿ ತೆರಳಿದ್ದರೂ, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಬೆಂಗಳೂರಿಗೆ ಬರುತ್ತಲೇ ಡಿಕೆಶಿ ವರಸೆ ಬದಲಾಗಿದ್ದು, ವಿರೋಧಿ ಬಣಕ್ಕೆ ಟಾಂಗ್ ಇಟ್ಟಿದ್ದಾರೆ. ನನ್ನ ಪವರ್ ಏನಿದೆಯೆಂದು ಹೈಕಮಾಂಡ್ ನಾಯಕರು ಅರಿತಿದ್ದಾರೆ. ನನ್ನ ನಾಯಕತ್ವ ಗುರುತಿಸಿ 90ರ ದಶಕದಲ್ಲೇ ಸಚಿವ ಸ್ಥಾನ ಕೊಟ್ಟಿದ್ದಾರೆ. ಈಗಲೂ ಪಕ್ಷದಲ್ಲಿ ನನ್ನ ಸ್ಥಾನ ಏನೆಂಬುದನ್ನು ತಿಳಿದಿದ್ದಾರೆ. ಬಿಕ್ಕಟ್ಟು ಎದುರಾದಾಗೆಲ್ಲ ಬೇರೆ ರಾಜ್ಯಗಳಿಗೂ ನನ್ನನ್ನು ಕರೆಸಿಕೊಂಡಿದ್ದಾರೆ ಎಂದು ಪಕ್ಷದಲ್ಲಿ ತನ್ನ ಹೆಚ್ಚುಗಾರಿಕೆ ಮತ್ತು ಹೈಕಮಾಂಡ್ ಮಟ್ಟದಲ್ಲಿ ತನ್ನ ಖದರ್ ಏನಿದೆ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಈಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಆಗಬೇಕೆಂದು ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇತ್ತ ಜಮೀರ್ ಅಹ್ಮದ್, ಸಿದ್ರಾಮಯ್ಯ ಬೆಂಕಿ ಇದ್ದಂತೆ, ಅವರನ್ನು ಮುಟ್ಟಿದರೆ ಸುಟ್ಟು ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆಮೂಲಕ ಸಿದ್ದರಾಮಯ್ಯ ಬದಲಾವಣೆ ಮಾಡದಿರಿ ಎಂಬುದನ್ನು ಸೂಚ್ಯವಾಗಿ ಹೇಳತೊಡಗಿದ್ದಾರೆ. ಆದರೆ, ಇವ್ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಡಿಕೆಶಿ, ಒಮ್ಮಿಂದೊಮ್ಮೆಲೇ ವರಸೆ ಬದಲಿಸಿದ್ದಾರೆ. ಪಕ್ಷ ನನ್ನನ್ನು ಈ ಮಟ್ಟಿಗೆ ಬೆಳೆಸಿದೆ, ನನ್ನ ವೇಬ್ರೇಶನ್, ಸಾಮರ್ಥ್ಯವನ್ನು ಪಕ್ಷ ಇನ್ನಷ್ಟು ಒರೆಗೆ ಹಚ್ಚಿ ಬಳಸಿಕೊಳ್ಳಬೇಕು. ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷ ಮುನ್ನಡೆಸುವ ಅವಕಾಶ ತನ್ನಲ್ಲಿರಬೇಕು. ಐದು ವರ್ಷದಿಂದ ರಾಜ್ಯಾಧ್ಯಕ್ಷನಾಗಿದ್ದು, ಸದ್ಯ ಡಿಸಿಎಂ ಸ್ಥಾನಕ್ಕೂ ಏರಿಸಿದೆ. ನನ್ನನ್ನು ಇಷ್ಟೆಲ್ಲಾ ಬೆಳೆಸಿ ನನ್ನ ಮುಖ ತೋರಿಸಿ ನನಗೆ ನಾಯಕತ್ವ ಕೊಡಲಿಲ್ಲ ಎಂದರೆ ನಾನು ಮನೆಯಲ್ಲಿ ಕುಳಿತುಕೊಳ್ಳಬೇಕೆಂದು ಪಕ್ಷ ನನಗೆ ಇಷ್ಟು ಶಕ್ತಿ ನೀಡಿದೆಯೇ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಆಮೂಲಕ ತಾನೇ ಮುಂದಿನ ಸಿಎಂ ಹುದ್ದೆ ಅಲಂಕರಿಸಬಲ್ಲ ವ್ಯಕ್ತಿ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಡಿಕೆಶಿ ಕೇವಲ ಮಾತಿನಲ್ಲಿ ಮಾತ್ರ ಬದಲಾವಣೆ ತೋರಿಸಿದ್ದಲ್ಲ, ಹಾವಭಾವ, ನಡತೆಯಲ್ಲೂ ಬದಲಾದ ವರಸೆಯನ್ನು ತೋರಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕುಂಭ ಮೇಳದ ಬಗ್ಗೆ ಟೀಕಿಸಿದ್ದು ರಾಜಕೀಯ ವಾಗ್ದಾಳಿಗೆ ಕಾರಣ ಆಗಿರುವಾಗಲೇ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ನೇರವಾಗಿ ಕುಂಭ ಮೇಳಕ್ಕೆ ತೆರಳಿ ಮುಳುಗು ಹಾಕಿ ಬಂದಿದ್ದಾರೆ. ಅಷ್ಟೇ ಅಲ್ಲ, ಯೋಗಿ ಆದಿತ್ಯನಾಥ್ ಮಾಡಿರುವ ಕೆಲಸಗಳನ್ನು ಕೊಂಡಾಡಿದ್ದಾರೆ. ಆಮೂಲಕ ಕುಂಭ ಮೇಳ ಟೀಕಿಸುತ್ತಿದ್ದ ಪಕ್ಷದ ನಾಯಕರಿಗೂ ಇರಿಸುಮುರಿಸು ತಂದಿಟ್ಟಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿಯನ್ನೇ ನಿಂದಿಸಿದ್ದ ಜಗ್ಗಿ ವಾಸುದೇವ್ ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಅಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಡಿಕೆಶಿ ಅವರ ಈ ನಡೆಗೆ ಕಾಂಗ್ರೆಸಿನಲ್ಲೇ ಟೀಕೆ ಕೇಳಿಬಂದರೂ, ಈ ಮನುಷ್ಯ ಜಗ್ಗಲಿಲ್ಲ, ಕುಗ್ಗಲೂ ಇಲ್ಲ.

ನಾನು ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿಯೇ ಸಾಯುತ್ತೇನೆ, ನನ್ನ ನಂಬಿಕೆ ನನಗೆ ಎನ್ನುತ್ತಲೇ ಹಿಂದು ಧಾರ್ಮಿಕ ಆಚರಣೆಗಳಲ್ಲಿ ತಲ್ಲೀನವಾದಂತೆ ತೋರಿಸುತ್ತಿದ್ದಾರೆ. ಒಳಗಿಂದೊಳಗೆ ಬಿಜೆಪಿ ನಾಯಕರ ಜೊತೆಗೂ ಹತ್ತಿರವಾದಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಆಮೂಲಕ ಕಾಂಗ್ರೆಸ್ ಹೈಕಮಾಂಡನ್ನೇ ಡಿಕೆಶಿ ಎದುರು ಹಾಕಿಕೊಂಡಿರುವುದನ್ನು ತೋರಗೊಡುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡಿಗೂ ಬೇರೆ ದಾರಿಯಿಲ್ಲದ ಸ್ಥಿತಿಯಿದೆ. ಕರ್ನಾಟಕ, ತೆಲಂಗಾಣ ಬಿಟ್ಟರೆ ಬೇರಾವುದೇ ರಾಜ್ಯಗಳಲ್ಲಿ ಕಾಂಗ್ರೆಸಿಗೆ ಅಧಿಕಾರ ಇಲ್ಲ. ಉತ್ತರದಲ್ಲಂತೂ ಪಕ್ಷವೇ ಮಕಾಡೆ ಮಲಗಿಬಿಟ್ಟಿದೆ. ಏಕೈಕ ಮನಿ ಪವರ್ ಎನಿಸಿಕೊಂಡ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರ ಕಳೆದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಹೀಗಾಗಿ ಎರಡೂವರೆ ವರ್ಷಕ್ಕೆ ಸಿಎಂ ಸ್ಥಾನ ಎಂಬ ತೂಗುಗತ್ತಿ ಪಕ್ಷದ ಕೇಂದ್ರ ನಾಯಕರನ್ನೂ ಬೆನ್ನಿಗೆ ಆತುಕೊಂಡಿರುವ ಚೂರಿಯಂತೆ ಇರಿಯುತ್ತಲೇ ಇದೆ.

ಹೈಕಮಾಂಡ್ ನಾಯಕರ ಇಂತಹ ಸ್ಥಿತಿಯ ಅರಿವಿದ್ದುದರಿಂದಲೇ ಡಿಕೆಶಿ ಮೃದು ಹಿಂದುತ್ವ, ಬಿಜೆಪಿ ಜೊತೆಗೆ ಬಾಂಧವ್ಯ ಇರುವಂತೆ ತೋರಿಸಿಕೊಂಡು ಪಕ್ಷದ ನಾಯಕರನ್ನೇ ಬೆದರಿಸುವ ತಂತ್ರಕ್ಕಿಳಿದಿದ್ದಾರೆಯೇ ಎನ್ನುವ ಅನುಮಾನ ಬರುವಂತಿದೆ, ಅವರಲ್ಲಿನ ಬದಲಾವಣೆ. ಎರಡೂವರೆ ವರ್ಷಕ್ಕೆ ಸ್ಥಾನ ಬಿಟ್ಟುಕೊಡದಿದ್ದರೆ, ಈ ಡಿಕೆಶಿ ಯಾವ ನಿರ್ಧಾರ ಕೈಗೊಳ್ಳುವುದಕ್ಕೂ ಹೇಸದ ಮನುಷ್ಯ ಎಂಬುದನ್ನೂ ಹೇಳತೊಡಗಿದ್ದಾರೇನೋ ಎನ್ನುವಂತಿದೆ. ಇದೇ ಕಾರಣಕ್ಕೋ ಏನೋ ವಿಪಕ್ಷ ನಾಯಕ ಆರ್. ಅಶೋಕ್ ನಂಥವರು, ನವೆಂಬರ್ ನಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುತ್ತೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಡಿಕೆಶಿ ನಡೆಯಲ್ಲಿ ಆಗಿರುವ ಬದಲಾವಣೆ ಪಕ್ಷದ ನಾಯಕರ ಒಳಗಡೆಯೂ ಗುಸು ಗುಸು ಮಾತು ಕೇಳಿಬರುವಂತಿದೆ. ಒಟ್ಟಿನಲ್ಲಿ ದಿಡೀರ್ ಆಗಿರುವ ಬದಲಾವಣೆ ಗಮನಿಸಿದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ತನ್ನನ್ನೇ ಮುಂದುವರಿಸಬೇಕು, 2028ರ ವೇಳೆಗೆ ಸಿಎಂ ಸ್ಥಾನಕ್ಕೆ ಕಾಂಗ್ರೆಸಿನಲ್ಲಿ ತಾನೊಬ್ಬನೇ ಇರಬೇಕು ಎನ್ನುವುದನ್ನು ಖಚಿತಪಡಿಸಬೇಕು ಎನ್ನುವ ಇರಾದೆ ಇಟ್ಟುಕೊಂಡು ಡಿಕೆಶಿ ಹೈಕಮಾಂಡ್ ನಾಯಕರನ್ನು ಬ್ಲಾಕ್ಮೇಲ್ ಮಾಡುತ್ತಿರುವಂತೆ ಕಾಣಿಸುತ್ತಿದೆ.

ವಿಚಿತ್ರ ಏನಂದ್ರೆ, ವಾರದ ಹಿಂದೆ ಮುಂದಿನ ಚುನಾವಣೆಯನ್ನು ತನ್ನದೇ ನೇತೃತ್ವದಲ್ಲಿ ಮುನ್ನಡೆಸುತ್ತೇನೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರೆ, ಅದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರೂ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ತನ್ನ ಸಿಎಂ ಸ್ಥಾನದ ಆಕಾಂಕ್ಷೆಗೆ ಸಿದ್ದರಾಮಯ್ಯ ತೊಡರುಗಾಲು ಹಾಕುತ್ತಿದ್ದಾರೆ ಎಂಬುದನ್ನು ಮನಗಂಡೇ ಡಿಕೆಶಿ ಇತ್ತೀಚೆಗೆ, ಹೆಚ್ಚೆಂದರೆ ಇನ್ನು ಹತ್ತು ವರ್ಷ ಕಾಲ ರಾಜಕಾರಣದಲ್ಲಿ ಇರಬಹುದು, ನನಗ್ಯಾಕೆ ಸಿಎಂ ಸ್ಥಾನದ ಬಯಕೆ ಇರಬಾರದೇ ಎಂಬ ಪ್ರಶ್ನೆಯನ್ನೂ ಮಾಧ್ಯಮದವರ ಮುಂದಿಟ್ಟಿದ್ದರು. ಸಿದ್ದರಾಮಯ್ಯ ಕರ್ನಾಟಕ ರಾಜ್ಯದಲ್ಲಿ ದೇವರಾಜು ಅರಸು ಬಳಿಕ ಸುದೀರ್ಘ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ನವೆಂಬರ್ ವೇಳೆಗೆ ಸರಿಗಟ್ಟಲಿದ್ದಾರೆ. ಆದರೆ ಆನಂತರವೂ ಅದೇ ಸ್ಥಾನದಲ್ಲಿ ಮುಂದುವರಿಯುತ್ತಾರೋ, ಬೇರೇನಾದರೂ ಬದಲಾವಣೆ ಆಗುತ್ತೋ ಅನ್ನುವುದನ್ನು ಈಗಲೇ ಹೇಳುವಂತಿಲ್ಲ.

DK Shivakumars Strategic Ties with BJP Spark Political Speculation, A Play for the CM Post? Report by Headline Karnataka. Karnataka Deputy Chief Minister DK Shivakumar on Wednesday termed as rumours the reports suggesting that he is getting close to the BJP, saying that there are no such developments.