13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ, ರಿಜ್ವಾನ್ ಆಹಾರ, ಜಮೀರ್ ವಸತಿ, ಸವದಿಗೆ ಸಹಕಾರ, ನಾಗೇಂದ್ರ ಸೇರಿ ಆರು ಮಂದಿಗೆ ಖಾಲಿ!

12-08-26 02:58 pm       HK News Staffer   ಕರ್ನಾಟಕ

ಹಲವು ಸುತ್ತಿನ ಸಭೆ, ಹೈಕಮಾಂಡ್ ನಾಯಕರ ಜೊತೆಗಿನ ಮಾತುಕತೆ ಬಳಿಕ ಡಿಕೆ ಶಿವಕುಮಾರ್‌ ಸಂಪುಟದಲ್ಲಿ ಇತ್ತೀಚೆಗೆ ಪ್ರಮಾಣ ಸ್ವೀಕರಿಸಿದ 13 ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆಗಳ ಪಟ್ಟಿಯನ್ನು ಸಿದ್ದಪಡಿಸಿರುವ ಸಿಎಂ ಡಿಕೆ ಶಿವಕುಮಾರ್ ಅಧಿಕೃತ ಮುದ್ರೆಗಾಗಿ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಿದ್ದಾರೆ.

ಬೆಂಗಳೂರು, ಆ.12: ಹಲವು ಸುತ್ತಿನ ಸಭೆ, ಹೈಕಮಾಂಡ್ ನಾಯಕರ ಜೊತೆಗಿನ ಮಾತುಕತೆ ಬಳಿಕ ಡಿಕೆ ಶಿವಕುಮಾರ್‌ ಸಂಪುಟದಲ್ಲಿ ಇತ್ತೀಚೆಗೆ ಪ್ರಮಾಣ ಸ್ವೀಕರಿಸಿದ 13 ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆಗಳ ಪಟ್ಟಿಯನ್ನು ಸಿದ್ದಪಡಿಸಿರುವ ಸಿಎಂ ಡಿಕೆ ಶಿವಕುಮಾರ್ ಅಧಿಕೃತ ಮುದ್ರೆಗಾಗಿ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಖಾತೆಯನ್ನು ಹೊಂದಿದ್ದ ಕೆ.ಎಚ್. ಮುನಿಯಪ್ಪ ಅವರಿಗೆ ಒತ್ತಾಸೆಯಂತೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಮುನಿಯಪ್ಪ ಅವರು ಸಮಾಜ ಕಲ್ಯಾಣ ಖಾತೆಯೇ ಬೇಕೇಂದು ಒಂದು ತಿಂಗಳಿನಿಂದಲೂ ಪಟ್ಟು ಹಿಡಿದಿದ್ದರು. ಅದರಂತೆ ಅದೇ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ರಾಜ್ಯಪಾಲರ ಅಧಿಕೃತ ಮುದ್ರೆ ನಂತರ ಖಾತೆ ಹಂಚಿಕೆ ಘೋಷಣೆಯಾಗಲಿದೆ.

ಆದರೆ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ 19 ಮಂದಿ ಪೈಕಿ 13 ಮಂದಿಗೆ ಮಾತ್ರ ಈಗ ಖಾತೆ ಹಂಚಿಕೆ ಮಾಡಲಾಗಿದೆ. ಅಧಿವೇಶನ ಹಿನ್ನೆಲೆಯಲ್ಲಿ ಖಾತೆಗಳ ಹಂಚಿಕೆ ಮಾಡಲೇಬೇಕಾಗಿತ್ತು. ಆದರೆ ಅಬಕಾರಿ ಸೇರಿದಂತೆ ಇನ್ನೂ ಕೆಲವು ಪ್ರ‌ಮುಖ ಖಾತೆಗಳ ಹಂಚಿಕೆ ಆಗಿಲ್ಲ. ತೀವ್ರ ಆಕ್ಷೇಪಕ್ಕೆ ಗುರಿಯಾಗಿರುವ ನಾಗೇಂದ್ರ ಸೇರಿದಂತೆ 6 ಮಂದಿಗೆ ಖಾತೆ ಹಂಚಿಕೆ ಮಾಡಿಲ್ಲ.

ಸದ್ಯಕ್ಕೆ ಚಲುವರಾಯಸ್ವಾಮಿ – ಕೃಷಿ, ರಿಜ್ವಾನ್ ಅರ್ಷದ್‌ – ಆಹಾರ ಮತ್ತು ನಾಗರಿಕ ಸರಬರಾಜು, ಮುನಿಯಪ್ಪ – ಸಮಾಜ ಕಲ್ಯಾಣ, ಸಂತೋಷ್ ಲಾಡ್ – ಕಾರ್ಮಿಕ, ಬಸಂತಪ್ಪ- ಮೀನುಗಾರಿಕೆ, ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತೆ, ರಾಯರೆಡ್ಡಿ- ಉನ್ನತ ಶಿಕ್ಷಣ, ಜಮೀರ್ ಖಾನ್ – ವಸತಿ ಖಾತೆ, ಲಕ್ಷ್ಮಣ ಸವದಿ – ಸಹಕಾರ ಇಲಾಖೆ, ಅಜಯ್ ಸಿಂಗ್ – ಅರಣ್ಯ ಇಲಾಖೆ, ಎಸ್‌. ಎಸ್‌ ಮಲ್ಲಿಕಾರ್ಜುನ – ಗಣಿ ಮತ್ತು ವಿಜ್ಞಾನ, ಮಾಗಡಿ ಬಾಲಕೃಷ್ಣ ಅವರಿಗೆ ಸಣ್ಣ ನೀರಾವರಿ ಇಲಾಖೆ ನೀಡಲಾಗಿದೆ. 

ಬಾಲಕೃಷ್ಣ, ನಾಗೇಂದ್ರ ಬದಲಾವಣೆ ಆಗುತ್ತದೆ, ಬೇರೆಯವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ವದಂತಿ ಹಬ್ಬಿತ್ತು. ಆದರೆ ಬಾಲಕೃಷ್ಣ ಅವರಿಗೆ ಖಾತೆ ಹಂಚಿಕೆ ಆಗಿರುವುದರಿಂದ ಬದಲಾವಣೆ ಸುಳಿವು ಬಿಟ್ಟು ಕೊಟ್ಟಿಲ್ಲ.‌