ಸೆಪ್ಟೆಂಬರ್​ನಿಂದ ಶಾಲೆಗಳನ್ನು ಪ್ರಾರಂಭಿಸಲ್ಲ ; ಸಚಿವ ಸುರೇಶ್​ ಕುಮಾರ್ ಸ್ಪಷ್ಟನೆ

13-08-20 03:38 pm       Headline Karnataka News Network   ಕರ್ನಾಟಕ

ರಾಜ್ಯದಲ್ಲಿ ಸೆಪ್ಟೆಂಬರ್​​​​​​ನಿಂದ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಖಂಡಿತ ಯಾವುದೇ ಕಾರಣಕ್ಕೂ ಸೆಪ್ಟೆಂಬರ್​ನಿಂದ ಶಾಲೆಗಳನ್ನು ಪ್ರಾರಂಭಿಸಲ್ಲ ಎಂದು ಸಚಿವ ಸುರೇಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಮಂಡ್ಯ, ಆಗಸ್ಟ್ 13: ಕೊರೋನಾ ಭೀತಿ ನಡುವೆ ರಾಜ್ಯದಲ್ಲಿ ಸೆಪ್ಟೆಂಬರ್​​​​​​ನಿಂದ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಗೊಂದಲಗಳು ಸಹ ಮೂಡಿವೆ. ಆದರೆ ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸ್ಪಷ್ಟನೆ ನೀಡಿದ್ದಾರೆ. 

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಮ್ಮ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂದು ಯೋಚನೆ ಮಾಡುವಂತಾಗಿದೆ. ಸುರೇಶ್ ಕುಮಾರ್ ಶಾಲೆ ಪ್ರಾರಂಭ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ಬಿರುದನ್ನೂ ನನಗೆ ಕೊಟ್ಟಿದ್ದಾರೆ. ಖಂಡಿತ ಯಾವುದೇ ಕಾರಣಕ್ಕೂ ಸೆಪ್ಟೆಂಬರ್​ನಿಂದ ಶಾಲೆಗಳನ್ನು ಪ್ರಾರಂಭಿಸಲ್ಲ ಎಂದು ಸಚಿವ ಸುರೇಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಎಲ್ಲರ ಮನೆಗೆ ಪಠ್ಯ ಪುಸ್ತಕ ತಲುಪಿಸಿದ್ದೇವೆ. ಟಿವಿಯಲ್ಲಿ ಸೇತುಬಂಧ ಕಾರ್ಯಕ್ರಮ ಮಾಡ್ತಿದ್ದೇವೆ. ಶಿಕ್ಷಣ ಇಲಾಖೆಯಿಂದ ಎರಡು ಚಾನಲ್​ಗಳನ್ನು ಪ್ರಾರಂಭಿಸುತ್ತಿದ್ದೇವೆ. ಎಲ್ಲಾ ತರಗತಿಗಳಿಗೆ ಪಾಠ ಮಾಡಲು ಸಿದ್ದತೆ ನಡೆದಿದೆ, ಪಠ್ಯಕ್ರಮ ಕೂಡ ಸಿದ್ಧವಾಗಿದೆ. ಸಮಾಜಕ್ಕೆ ಭರವಸೆ ಕೊಡುವ ಕಾರ್ಯವನ್ನ ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದರು.