ರೈಸ್ ದಾಲ್ ಗೊತ್ತು.. ಡ್ರಗ್ಸ್ ಗೊತ್ತಿಲ್ಲ !! ಸ್ಯಾಂಡಲ್ ವುಡ್ಡಿನ ಡ್ರಗ್ಸ್ ಬಗ್ಗೆ ಮಾತಾಡಲ್ಲ ; ನಟ ಸುದೀಪ್

01-09-20 06:23 pm       Headline Karnataka News Network   ಕರ್ನಾಟಕ

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿನ ಆರೋಪಗಳು ಕೇಳಿಬಂದಿರುವ ಬಗ್ಗೆ ಸ್ಯಾಂಡಲ್​ವುಡ್ ನಟ ಸುದೀಪ್​ ಪ್ರತಿಕ್ರಿಯಿಸಿದ್ದು ನನಗೆ ರೈಸ್ ದಾಲ್ ಗೊತ್ತು ಇದರ ಬಗ್ಗೆ ಏನು ಗೊತ್ತಿಲ್ಲ ಎಂದಿದ್ದಾರೆ

ತುಮಕೂರು, ಸೆಪ್ಟೆಂಬರ್ 1 : ನಮಗೆ ರೈಸ್ ದಾಲ್ ಗೊತ್ತು. ಬಟ್ ಡ್ರಗ್ಸ್ ಬಗ್ಗೆ ಗೊತ್ತಿಲ್ಲ.. ಸ್ಯಾಂಡಲ್ ವುಡ್ಡಿನ ಡ್ರಗ್ಸ್ ನಂಟಿನ ಬಗ್ಗೆ ಮಾತಾಡಲ್ಲ.. ಹೀಗೆಂದವರು ಸ್ಯಾಂಡಲ್ವುಡ್ಡಿನ ಖ್ಯಾತ ನಟ ಸುದೀಪ್.‌

ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದ ನಟ ಸುದೀಪ್, ಸ್ಯಾಂಡಲ್ ವುಡ್ಡಿನ ಡ್ರಗ್ಸ್ ನಂಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. ರೈಸ್ ದಾಲ್ ತಿಂದು ಜೀವನ ಮಾಡಿದ್ದೀನಿ.. ಆದರೆ ಡ್ರಗ್ಸ್ ಬಗ್ಗೆ ನಂಗೆ ಗೊತ್ತೇ ಇಲ್ಲ. ಅದರ ಬಗ್ಗೆ ಚರ್ಚೆನೂ ಮಾಡಲ್ಲ. ಚರ್ಚೆ ಮಾಡೋದೂ ತಪ್ಪಾಗುತ್ತೆ. ಈವಾಗ ನಡೀತಿರೋ ವಿಷ್ಯದ ಬಗ್ಗೆ ಮಾತಾಡೋದೂ ತಪ್ಪು ಆಗತ್ತೆ. ಡ್ರಗ್ಸ್ ಚಿತ್ರರಂಗಕ್ಕೆ ಕಳಂಕ ಅನ್ನೋದು ಕೂಡ ತಪ್ಪು.. ಆದರೆ ಸಮಸ್ಯೆ ಏನಿದ್ದರೂ ಸಾಲ್ವ್ ಆಗುತ್ತೆ. ಹಾಗಂತ ಇಲ್ಲದೇ ಇರೋದನ್ನ ಲಿಂಕ್ ಕೊಟ್ಟು ಮಾತಾಡಬಾರದು ಅಂತ ಸುದೀಪ್ ಅಡ್ಡಗೋಡೆ ಮೇಲೆ ದೀಪವಿಟ್ಟ ರೀತಿ ಹೇಳಿಕೆ ಕೊಟ್ಟಿದ್ದಾರೆ. 

ಚಿರಂಜೀವಿ ಸಾವಿಗೆ ಡ್ರಗ್ಸ್ ಕಾರಣವಾಗಿತ್ತಾ ಎಂಬ ಪ್ರಶ್ನೆಗೆ, ಚಿರಂಜೀವಿ ನನ್ನ ತಮ್ಮನ ಥರ. ಡ್ರಗ್ ನಲ್ಲಿ ಅವನ ಹೆಸರು ಥಳಕು ಹಾಕೋದು ಸರಿ ಕಾಣೋದಿಲ್ಲ ಎಂದಿದ್ದಾರೆ. ಇನ್ನು ನಟ ಚೇತನ್ ಟ್ವೀಟ್ ಕುರಿತ ಪ್ರಶ್ನೆಗೆ ಸುದೀಪ್ ವ್ಯಂಗ್ಯದ ನಗೆ ಬೀರಿದ್ದಾರೆ. ಬಹುಶಃ ಅವರು ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು ಎಂದು ಲೇವಡಿ ಆಡಿದ್ರು. ರಮ್ಮಿ ಆಡೋರು, ಗುಟ್ಕಾ ತಿನ್ನೋರ ಬಗ್ಗೆ ಯಾರೂ ಹೇಳಲ್ಲ ಎಂದು ನಟ ಚೇತನ್ ಟ್ವೀಟ್ ಮಾಡಿ ಕುಟುಕಿದ್ದರು. 

ಮಾಧ್ಯಮಗಳು ಕೆಲ ಅನಾವಶ್ಯಕ ವಿಚಾರಗಳನ್ನು ಕೆದಕಿ ಜೀವಂತ ಇಡುತ್ತಿದೆ ಎಂದು ಕಟಕಿಯಾಡಿದ ಸುದೀಪ್, ಇಂದ್ರಜಿತ್ ಗೆ ಬೆದರಿಕೆ ಕರೆಯ ವಿಚಾರದಲ್ಲಿ ಅವರ ಬೆಂಬಲಕ್ಕೆ ನಿಲ್ತೀರಾ ಎಂಬ ಪ್ರಶ್ನೆಗೆ, ಬೇರೆಯದ್ದೇ ಕೋನದಲ್ಲಿ ಮಾತಾಡಿದ್ದಾರೆ. ಇಂದ್ರಜಿತ್ ಅವರ ಇಡೀ ಲೈಫ್ ನಾನಿಲ್ಲದೆ ಸಾಗಿದೆ. ಅವರು ನನಗಾಗಿ ಇಲ್ಲ... ನಾನೂ ಅವರಿಗಾಗಿ ಇಲ್ಲ.. ಬಟ್ ಅದಕ್ಕೆಲ್ಲಾ ಅವರು ಹೆದರಲ್ಲ ಎಂದು ಹೇಳಿದ್ರು. 

ಇನ್ನು ಕೊರೋನಾದಿಂದಾಗಿ ಚಿತ್ರರಂಗ ತುಂಬಾ ನಷ್ಟದಲ್ಲಿದೆ. ನಿರ್ಮಾಪಕರು, ಕಾರ್ಮಿಕರು ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ. ಇಂಥ ಸಂದರ್ಭದಲ್ಲಿ ಕೊರೊನೋತ್ತರದಲ್ಲಿ ಇಂಡಸ್ಟ್ರಿಯ ಭವಿಷ್ಯದ ಬಗ್ಗೆ ನಾವು ಚಿಂತನೆ ಮಾಡಬೇಕಿದೆ ಎಂದರು ಸುದೀಪ್.