ಪೊಲೀಸರಿಗೆ ಸವಾಲಾಗಿದ್ದ ಗ್ಯಾಂಗ್ ರೇಪ್ ಕೇಸ್ ಬೆನ್ನು ಹತ್ತಿದ್ದು ಹೇಗೆ ಗೊತ್ತಾ..? ಒಂದೇ ಒಂದು ಬಸ್ ಟಿಕೆಟ್ ಕಿರಾತಕರನ್ನು ಹೆಡೆಮುರಿ ಕಟ್ಟಿತ್ತು...!!

28-08-21 05:50 pm       Headline Karnataka News Network   ಕರ್ನಾಟಕ

ಗ್ಯಾಂಗ್ ರೇಪ್ ಪ್ರಕರಣದ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿದ್ದು ಒಂದೇ ಒಂದು  ಬಸ್ ಟಿಕೆಟ್. ಬಸ್ ಟಿಕೆಟ್ ಜಾಡು ಹಿಡಿದು ಹೊರಟ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. 

ಮೈಸೂರು, ಆಗಸ್ಟ್ 28: ಗ್ಯಾಂಗ್ ರೇಪ್ ಪ್ರಕರಣದ ಕಿರಾತಕರನ್ನ‌ ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆದರೆ, ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದ ಗ್ಯಾಂಗ್ ರೇಪ್ ಪ್ರಕರಣದ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿದ್ದು ಒಂದೇ ಒಂದು  ಬಸ್ ಟಿಕೆಟ್. ಬಸ್ ಟಿಕೆಟ್ ಜಾಡು ಹಿಡಿದು ಹೊರಟ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. 

ಲಲಿತಾದ್ರಿಪುರ ಬಡಾವಣೆಯಲ್ಲಿ ಆಗಸ್ಟ್ 24 ರಂದು ಸಂಜೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಪೊಲೀಸ್ ಇಲಾಖೆಗೆ ತಲೆನೋವಾಗಿತ್ತು. ಆರೋಪಿಗಳನ್ನ ಬಂಧಿಸಲು ಆಗ್ರಹಿಸಿ, ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗಿತ್ತು. ಆದ್ರೀಗ ಮೈಸೂರು ಪೊಲೀಸರು ಗ್ಯಾಂಗ್ ರೇಪ್ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆ ಸಿಗದೆ ಪೊಲೀಸರಿಗೆ ಆರಂಭದಲ್ಲಿ ಈ ಪ್ರಕರಣ ಸವಾಲಾಗಿತ್ತು. ಸ್ಥಳ ಪರಿಶೀಲನೆ ಮಾಡಲು ಹೊರಟ ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕಿದ್ದ ಒಂದೇ ಒಂದು ಬಸ್ ಟಿಕೆಟ್ ಆರೋಪಿಗಳ ಸುಳಿವು ನೀಡಿತ್ತು. ಬಸ್ ಟಿಕೆಟ್ ಹಿಡಿದು ಹೊರಟ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣದ ಕಿರಾತಕರನ್ನ ಪಕ್ಕದ ತಮಿಳುನಾಡಿನಿಂದ ಎಳೆದುತಂದಿದ್ದಾರೆ. 

ಪ್ರಕರಣದಲ್ಲಿ ಐವರು ಆರೋಪಿಗಳನ್ನ ಬಂಧಿಸಿದ್ದು ತಮಿಳುನಾಡಿನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರೇ ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ರೂವಾರಿಗಳು ಅನ್ನೋದು ಕನ್ಫರ್ಮ್ ಆಗಿದೆ. ಆರೋಪಿಗಳಲ್ಲಿ ಒಬ್ಬಾತ ಆಗಸ್ಟ್ 24 ರಂದು ಮಧ್ಯಾಹ್ನ ತಮಿಳುನಾಡಿನ ತಾಳವಾಡಿಯಿಂದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಚಾಮರಾಜನಗರಕ್ಕೆ ಬಂದಿದ್ದ. ಆತನ ಮೊಬೈಲ್ ನಂಬರ್ ಘಟನೆ ನಡೆದ ಜಾಗದಲ್ಲಿ ಮತ್ತು ಚಾಮರಾಜನಗರದಲ್ಲಿಯೂ ಟ್ರೇಸ್ ಆಗಿತ್ತು. ಪೊಲೀಸರು ಬಸ್ ಟಿಕೆಟ್ ಆಧಾರದಲ್ಲಿ 5 ಸಾವಿರಕ್ಕೂ ಹೆಚ್ಚು ಮೊಬೈಲ್ ನಂಬರ್ ಗಳನ್ನು ಟ್ರೇಸ್ ಮಾಡಿದ್ದರು. ಆದರೆ, ಒಂದು ನಂಬರ್ ಮಾತ್ರ ಪೊಲೀಸರ ಕುತೂಹಲಕ್ಕೆ ಕಾರಣವಾಗಿತ್ತು. ಆ ಒಂದು ನಂಬರ್ ಜಾಡು ಹಿಡಿದು ಹೊರಟ ಪೊಲೀಸರ ಒಂದು ತಂಡ ನೇರವಾಗಿ ತಾಳವಾಡಿಗೆ ತೆರಳಿತ್ತು. ಟೆಕ್ನಿಕಲ್ ಸಾಕ್ಷ್ಯ ಪೊಲೀಸರಿಗೆ ಆರೋಪಿಗಳ ಖಚಿತ ಸುಳಿವನ್ನು ನೀಡಿತ್ತು.

ಸದ್ಯಕ್ಕೆ ಐವರನ್ನು ಬಂಧಿಸಿದ್ದು ಎಲ್ಲರೂ ಕೂಲಿ ಕಾರ್ಮಿಕರು. ನಾಲ್ಕು ಮಂದಿ ತಮಿಳುನಾಡಿನ ತಿರುಪೂರಿನವರಾಗಿದ್ರೆ, ಒರ್ವ ಮಾತ್ರ ತಾಳವಾಡಿ ಸಮಿಪದ ಸೂಸೈಪುರಂ ನಿವಾಸಿಯಾಗಿದ್ದ. ಬಂಡಿಪುರ ಎಪಿಎಂಸಿಗೆ ತರಕಾರಿ ಖರೀದಿ ಮತ್ತು ಬಾಳೆಕಾಯಿ ಮಾರಾಟಕ್ಕೆಂದು ಬರುತ್ತಿದ್ದ ಟೆಂಪೋ ಚಾಲಕನ ಜೊತೆ ಇತರ ಐವರು ಸಾಥ್ ಕೊಟ್ಟು ಬರುವುದನ್ನು ರೂಢಿ ಮಾಡಿಕೊಂಡಿದ್ದರು. ಹಿಂತಿರುಗಿ ತೆರಳುವ ವೇಳೆ ಹೆದ್ದಾರಿ ಬದಿಯಲ್ಲೇ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಜೊತೆಗೆ, ಇಲ್ಲಿಂದ ಸಾಗುವ ವೇಳೆಗೆ ಹೆದ್ದಾರಿಯಲ್ಲಿ ಸಿಗುವ ಒಬ್ಬಂಟಿ ಯುವಕರನ್ನು, ವಿಹಾರಕ್ಕೆ ತೆರಳುವ ಜೋಡಿಗಳನ್ನು ದೋಚುತ್ತಿದ್ದರು. ಮೊನ್ನೆ 24 ರಂದು ಕೂಡ ಆರು ಜ‌ನ ಎಂದಿನಂತೆ ಲಲಿತಾದ್ರಿಪುರ ಸಮೀಪದ ನಿರ್ಜನ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ನಡೆಸಿದ್ದರು‌. ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿ ಹಾಗೂ ಸ್ನೇಹಿತ ಗುಡ್ಡದ ನಡುವೆ ಏಕಾಂತದಲ್ಲಿ‌ ಇರೋದನ್ನ ನೋಡಿ ಅಟ್ಯಾಕ್ ಮಾಡಿದ್ದರು. ಯುವಕನಿಗೆ ಥಳಿಸಿ ಯುವತಿಯನ್ನ ಎಳೆದೊಯ್ದು ಅತ್ಯಾಚಾರ ಎಸಗಿದ್ರು. ಆನಂತರ ಯುವಕನ ಬಳಿ 3 ಲಕ್ಷ ರೂ‌. ನೀಡುವಂತೆ ಡಿಮ್ಯಾಂಡ್ ಮಾಡಿದ್ರು. ಹಣ ಸಿಗದೆ ಕೊನೆಗೆ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಬಸ್ ಟಿಕೆಟ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಹರಾಮಿ ಕಿರಾತಕರು ಸಿಕ್ಕಿಬಿದ್ದಿದ್ದರು.


 

How was Mysuru Gang rape case solved by Police a Bus ticket lead to major twist. The Mysuru City Police have successfully nabbed five of six accused in connection with a case related to robbery and gang rape of a college girl near Chamundi Hill. Police arrested the accused from Tamil Nadu. The accused also includes a 17-year-old boy. The gang had raped the girl on August 24 after assaulting her male friend. The police arrested them based on technical evidence.