ನೀರಾವರಿ ಇಲಾಖೇಲಿ ಜೈಲಿಗೆ ಹೋದವರೂ ಇಂಜಿನಿಯರ್ ಇದ್ದಾರೆ, ಎಂಡಿಯಿಂದ ಹಿಡಿದು ಎಲ್ಲರೂ ಭ್ರಷ್ಟರು ಸಿದ್ದರಾಮಯ್ಯ ಇದ್ದಾಗ 326 ಭ್ರಷ್ಟ ಅಧಿಕಾರಿಗಳಿದ್ದರು !

11-10-21 04:46 pm       Headline Karnataka News Network   ಕರ್ನಾಟಕ

ಎಂಡಿ ಹಂತದ ಅಧಿಕಾರಿಗಳಿಂದ ಹಿಡಿದು ಎಲ್ಲರೂ ಭ್ರಷ್ಟರಾಗಿದ್ದು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಹೇಳಿದ್ದಾರೆ. 

ಮೈಸೂರು, ಅ.11 : ನೀರಾವರಿ ಇಲಾಖೆಯಲ್ಲಿ ಭ್ರಷ್ಟರು ತುಂಬಿದ್ದಾರೆ.‌ ಜೈಲಿಗೆ ಹೋಗಿ ಬಂದವರೂ ಅಲ್ಲಿ ಇಂಜಿನಿಯರ್ ಆಗಿ ಇದ್ದಾರೆ. ಎಂಡಿ ಹಂತದ ಅಧಿಕಾರಿಗಳಿಂದ ಹಿಡಿದು ಎಲ್ಲರೂ ಭ್ರಷ್ಟರಾಗಿದ್ದು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಹೇಳಿದ್ದಾರೆ. 

ನೀರಾವರಿ ಇಲಾಖೆಯಲ್ಲಿ ಜೈಲಿನಲ್ಲಿದ್ದ ವ್ಯಕ್ತಿಯೂ ಕೆಲಸ ಮಾಡುತ್ತಿದ್ದಾನೆ. ಲಕ್ಷ್ಮಣ ರಾವ್ ಪೇಶ್ವೆ ಅಂತ ಒಬ್ಬ ಇದ್ದಾನೆ. ಆತ ಕಾವೇರಿ ನೀರಾವರಿ ನಿಗಮದ ಇಂಜಿನಿಯರಿಂಗ್ ಚೀಫ್. ಇದೇ ಪೇಶ್ವೆ ಈ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ 8 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ. ದುರಂತ ಅಂದ್ರೆ, ಈತ ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾನೆ.‌ ಅನಿಲ್ ಕುಮಾರ್ ಮಳಲಿ ಅಂತ ನೀರಾವರಿ ಮಂತ್ರಿಗಳ ಸಲಹೆಗಾರ ಇದ್ದಾನೆ. ಅವನೂ ಅಷ್ಟೇ, ಭ್ರಷ್ಟ. ಎಂಡಿ ಹಂತದ ಹಲವು ಅಧಿಕಾರಿಗಳ ವಿರುದ್ಧ ಕೋಟ್ಯಂತರ ರೂ‌‌.ಗಳ ಅಕ್ರಮದ ಆರೋಪಗಳಿವೆ ಎಂದು ವಿಶ್ವನಾಥ್ ಹೊರಗೆಡವಿದ್ದಾರೆ. 

ಬೃಹತ್ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಐಟಿ, ಇಡಿ ದಾಳಿ ನಡೆಯುತ್ತಿದೆ. ಇದು ಜನರಲ್ಲಿ ಅಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಅನುಮಾನ ಮೂಡುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ರಾಜಕೀಯದ ವಾಸನೆ ಬರುತ್ತಿದೆ ಅಂತ ಹೇಳಿಕೆ ನೀಡಿದ್ದಾರೆ. ಇವರು ಮೊದಲು ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಅಪ್ಪ- ಮಗ ಅಂತ ಏನೆಲ್ಲ ಮಾತನಾಡಿದ್ದಿರಿ ಅನ್ನೋದನ್ನು ನೆನಪು ಮಾಡಿಕೊಳ್ಳಬೇಕು. ಯಡಿಯೂರಪ್ಪ ಅವರನ್ನು ವಾಚಾಮಗೋಚರ ತೆಗಳಿದವರು ಈಗ ಹುಸಿ ಪ್ರೇಮ ತೋರಿಸುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಯಾರಿಗೂ ಲಾಭವಿಲ್ಲ. ಕಾಂಗ್ರೆಸ್, ಜೆಡಿಎಸ್‌ಗೆ ಲಾಭವೂ ಇಲ್ಲ. 
ಬಿಜೆಪಿಗೆ ನಷ್ಟವೂ ಇಲ್ಲ. ಯಡಿಯೂರಪ್ಪ ಅವರ ಓಲೈಕೆಯಿಂದ ಲಿಂಗಾಯತ ಸಮುದಾಯದ ಮತ ಅಂತೂ ಬರಲ್ಲ. ಯಡಿಯೂರಪ್ಪ ಅವರೇ ಸ್ವಾಗತ ಮಾಡಿರುವಾಗ ನಿಮ್ಮದೇನು ಕೊಸರು? ಇಂತಹ ಬೂಟಾಟಿಕೆ ಮಾತನಾಡುವುದು ಶೋಭಾಯಮಾನ ಅಲ್ಲ. ಸಿಬಿಐ, ಸಿಐಡಿ, ಐಟಿ, ಇಡಿ ಮುಂತಾದವು ಸಾಂವಿಧಾನಿಕ ಸಂಸ್ಥೆಗಳು. ಭ್ರಷ್ಟಾಚಾರದ ಮೇಲೆ ದಾಳಿ ಮಾಡುವಾಗ ನಿಮ್ಮದೇನು ತಕರಾರು? ನೀವು ಭ್ರಷ್ಟಾಚಾರದ ಪರವೋ, ವಿರುದ್ಧವೋ ಎನ್ನೋದನ್ನು ಹೇಳಬೇಕು. 

ಈ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ 326 ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಆದರೆ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಆ ವಿಚಾರವನ್ನೇ ತಳ್ಳಿ ಹಾಕಿದ್ದರು. ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಯಾರ ಪರ ಇದ್ದೀರಿ ಅಂತ ಸ್ಪಷ್ಟವಾಗಿ ಹೇಳಿ ಎಂದು ಎಂಎಲ್‌ಸಿ ವಿಶ್ವನಾಥ್ ಛೇಡಿಸಿದರು.‌ 

ಮಾಜಿ ಸಿಎಂ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು ಹಾಕುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಸಿದ್ದರಾಮಯ್ಯನಿಗೆ ರಾಷ್ಟ್ರ ರಾಜಕೀಯಕ್ಕೆ ಹೋಗಲು ಪುಕ್ಕಲುತನ. ಕರ್ನಾಟಕ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ದೇವೇಗೌಡ ಈ ದೇಶದ ಪ್ರಧಾನಿಯಾದರು. ಪ್ರಧಾನಿಯಾಗುವ ಅವಕಾಶ ಸಿಕ್ಕಾಗ ಒಪ್ಪಿಕೊಳ್ಳುವ ಧೈರ್ಯ ತೋರಿದರು. ದೇವೇಗೌಡರಿಗೆ ಹೋಲಿಸಿದರೆ ಸಿದ್ದರಾಮಯ್ಯನಿಗೆ ಅಂತಹ ಧೈರ್ಯ ಇಲ್ಲ. 3ನೇ ಬಾರಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಕಳೆದ ಏಳು ವರ್ಷದಿಂದ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಹುದ್ದೆ ದೇಶದ ಪರಮೋಚ್ಚ ಸ್ಥಾನವಾಗಿದೆ. ನನಗೂ ಪ್ರಧಾನಿ ಹುದ್ದೆ ಕೊಟ್ಟರೆ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆ ಅಂತ  ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಹೇಳಬೇಕಿತ್ತು. ಸಿದ್ದರಾಮಯ್ಯ ಮತ್ತೇಕೆ ಮೋದಿ ವಿರುದ್ಧ ಗುಡುಗಬೇಕು ವ್ಯಂಗ್ಯವಾಡಿದರು.

The Irrigation Department is full of corrupt people. The people who went to jail is now enginear. from the post of MD they are all corrupted says adaguru vishwanath