ಬಿಜೆಪಿ ಈಗ ಕಲಬೆರಕೆ ಪಕ್ಷ , ಕಾಂಗ್ರೆಸ್, ಜೆಡಿಎಸ್ನವರೇ ತುಂಬಿದ್ದಾರೆ, ಒರಿಜಿನಲ್ ಬಿಜೆಪಿ ಈಗ ಇಲ್ಲ ! 

09-11-21 06:44 pm       Headline Karnataka News Network   ಕರ್ನಾಟಕ

ಬಿಜೆಪಿ ಈಗ ಕಲಬೆರಕೆ ಪಕ್ಷ. ಇವತ್ತು ಬಿಜೆಪಿಯಲ್ಲಿ 90 ಶೇ. ಪ್ರತಿಶತ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದವರಿದ್ದಾರೆ‌. ಕಮ್ಯುನಿಸ್ಟರೂ ಬಂದಿದ್ದಾರೆ.. 30 ರಿಂದ 40 ಶೇ. ಮಾತ್ರ ಮೂಲ ಬಿಜೆಪಿಯವರು ಇದ್ದಾರೆ‌‌ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ. 

ಬಾಗಲಕೋಟೆ, ನ.9: ಬಿಜೆಪಿ ಈಗ ಕಲಬೆರಕೆ ಪಕ್ಷ. ಇವತ್ತು ಬಿಜೆಪಿಯಲ್ಲಿ 90 ಶೇ. ಪ್ರತಿಶತ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದವರಿದ್ದಾರೆ‌. ಕಮ್ಯುನಿಸ್ಟರೂ ಬಂದಿದ್ದಾರೆ.. 30 ರಿಂದ 40 ಶೇ. ಮಾತ್ರ ಮೂಲ ಬಿಜೆಪಿಯವರು ಇದ್ದಾರೆ‌‌ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ. 

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ಕಾಂಗ್ರೆಸ್ ನವರಿಗೆ ಹಿಂದುತ್ವ ಇಲ್ಲ. ಅವರಿಗೆ ಬರಿ ಲೂಟಿ ಮಾಡಬೇಕು ಅನ್ನೋದಿದೆ.. ಇಲ್ಲಿ ವರೆಗೆ ಕಾಂಗ್ರೆಸ್ ನವರು ಟೆರರಿಸ್ಟ್ ಗಳನ್ನೇ ಬೆಳೆಸಿದ್ದಾರೆ‌‌..
ಅಂತವರು ಇಂದು ಬಿಜೆಪಿಯಲ್ಲಿದ್ದಾರೆ‌. ಅವರಿಗೆ ಹಿಂದುತ್ವ, ಧರ್ಮ, ದೇಶ, ಸಂಸ್ಕೃತಿ, ಮಾನ ಮರ್ಯಾದೆ ಏನು ಇಲ್ಲ.. ಬಿಜೆಪಿ ಇಂದು ಓರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಮ್ಮ ಕ್ಷೇತ್ರದಲ್ಲಿ 52 ಅಡಿ ಏಸು ಕ್ರಿಸ್ತನ ಪುತ್ಥಳಿ ಕೂರಿಸೋದಕ್ಕೆ ಹೊರಟಿದ್ದರು.‌ ಸೋನಿಯಾ ಗಾಂಧಿ ಮೆಚ್ಚಿಸಲು ಹೀಗೆ ಮಾಡಿದ್ದರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆಯಾದ ಸಂದರ್ಭದಲ್ಲಿ ಇದೇ ಡಿಕೆಶಿ ನಾವೆಲ್ಲ ಬರ್ದರ್ಸ್ ಆ್ಯಂಡ್ ಸಿಸ್ಟರ್ಸ್ ಅಂದ್ರು.. ಆದರೆ ಡಿಕೆಶಿಯ ಡಿಎನ್ ಎ ಟೆಸ್ಟ್ ಮಾಡಿಸಬೇಕು. ಎಲ್ಲೋ ಅದು ಮಿಕ್ಸ್ ಆದಂಗೆ ಕಾಣಿಸುತ್ತದೆ. ಡಿಕೆಶಿ ಅವರೇ ದೇಶವನ್ನು ನೋಡಿ ಮೊದಲು. ದೇಶ ಉಳಿದರೆ ನೀವು ಕೆಪಿಸಿಸಿ ಅಧ್ಯಕ್ಷರಾಗಿಯೇ ಇರುತ್ತೀರಿ. ಇಲ್ಲದೆ ಹೋದರೆ ನೀವು ಇಟಲಿಗೆ ಹೋಗಬೇಕಾಗುತ್ತದೆ. 

ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಪಕ್ಷದವರೇ ಈಗ ದೇವಸ್ಥಾನ ಒಡೆಯುತ್ತಿದ್ದಾರೆ. ಇದಕ್ಕಾಗಿ ಸಿಟ್ಟು, ಬೇಸರ ಎರಡೂ ಇದೆ. ಹಾಗೆಂದು ನಾವು ಈ ಬಗ್ಗೆ ಕೈಕಟ್ಟಿ ಕುಳಿತಿಲ್ಲ.‌ ಆಂದೋಲನ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಆದೇಶ ಅಂತ ಇವರು ಹಿಂದು ದೇವಸ್ಥಾನ ಒಡೆದಿದ್ದಾರೆ ಅಂತೆ. ಮಸೀದಿಯ ಮೈಕ್ ತೆರವುಗೊಳಿಸುವುದಕ್ಕೂ ಸುಪ್ರೀಂ ಕೋರ್ಟ್ ಆದೇಶವಿದೆ. ಇದೇ ರಾಜ್ಯ ಸರಕಾರ ಯಾಕೆ ಅದನ್ನು ತೆಗೆಯೋದಿಲ್ಲ. ನಾವು ಈಗ ಮಸೀದಿ ಮೈಕ್ ತೆರವುಗೊಳಿಸುವಂತೆ ಹೋರಾಟ ಮಾಡುತ್ತಿದ್ದೇವೆ‌. ಮುಂದೆ ದೊಡ್ಡ ಪ್ರಮಾಣದಲ್ಲಿ ಧರಣಿ ಮಾಡಲಿದ್ದೇವೆ. 
ನೀವು ತೆಗಿಯಲ್ಲಾಂದ್ರೆ ನಾವೇ ತೆಗಿಬೇಕಾಗುತ್ತದೆ ಎಂದು ಹೋರಾಡುತ್ತೇವೆ ಎಂದು ಮುತಾಲಿಕ್ ಹೇಳಿದರು. 

ಇದೇ ವೇಳೆ ಕೇಳಿದ ಪ್ರಶ್ನೆಗೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಪ್ರಮೋದ ಮುತಾಲಿಕ್ ಸ್ಪಷ್ಟನೆ ನೀಡಿದ್ದಾರೆ.‌ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಕೇಳಿದ್ದ ಮುತಾಲಿಕ್ ಅವರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿತ್ತು.‌

ಚುನಾವಣೆಯಿಂದ ನಾವು ನಿರ್ಲಿಪ್ತ ಆಗಿದ್ದೇವೆ. ನಮ್ಮಂತವರು ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಕೂಡಲ್ಲ. ಪ್ರಾಮಾಣಿಕರು, ಹೋರಾಟಗಾರರು, ಹಿಂದುವಾದಿಗಳು, ರಾಷ್ಟ್ರೀಯವಾದಿಗಳು ರಾಜಕೀಯಕ್ಕೆ ಬೇಡವಾಗಿದೆ. ನಾವು ಸ್ವಲ್ಪ ದೂರ ಸರಿದಿದ್ದೇವೆ. ಏನಿದ್ದರೂ ಹಿಂದುತ್ವ ಬಿಟ್ಟು ನಮ್ಮ ರಾಜಕೀಯ ಇರಲ್ಲ. ಹಿಂದುತ್ವದ ಒಂದೇ ಧ್ವನಿ ಇಟ್ಟುಕೊಂಡು ಸಂಘಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

Bagalkot Pramod Muthalik slams BJP govt says its an adultered party of congress and JDS.