ದೇವೇಗೌಡ್ರ ಪಕ್ಷದಲ್ಲಿ ಟಿಕೆಟ್ ಪಡೆಯೋಕೆ ದುಡ್ಡು ಕೊಡಬೇಕು ; ಕುಟುಕಿದ ರಾಜಣ್ಣ ! 

16-09-20 06:47 pm       Headline Karnataka News Network   ಕರ್ನಾಟಕ

ಟೆಕೆಟ್ ವಿಚಾರದಲ್ಲಿ ರಾಜ್ಯದ ಮುಖಂಡರು ಯಾವ ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ನನಗೆ ಟಿಕೆಟ್ ಕೊಟ್ಟರೆ ಮಾತ್ರ ಆಗಲ್ಲ. ಪಕ್ಷದಿಂದ ದುಡ್ಡು ಕೊಡಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ತುಮಕೂರು, ಸೆಪ್ಟೆಂಬರ್ 16: ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲು ಅಭ್ಯರ್ಥಿಗಳು ದುಡ್ಡು ಕೊಡಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತಾಡಿ ಬಂದಿದ್ದೇನೆ. ಶಿರಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದರು. 

ಬಿಹಾರ ಚುನಾವಣೆ ಸಂದರ್ಭದಲ್ಲಿ ಶಿರಾ ಉಪ ಚುನಾವಣೆ ನಡೆಯಬಹುದು ಎಂದು ಅಂದುಕೊಂಡಿದ್ದೇನೆ. ಅದಕ್ಕೂ ಮುಂಚೆಯೇ ನಡೆಯಬಹುದು, ಅದನ್ನು ಹೇಳುವುದಕ್ಕೆ ಬರುವುದಿಲ್ಲ. ಟೆಕೆಟ್ ವಿಚಾರದಲ್ಲಿ ರಾಜ್ಯದ ಮುಖಂಡರು ಯಾವ ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ನನಗೆ ಟಿಕೆಟ್ ಕೊಟ್ಟರೆ ಮಾತ್ರ ಆಗಲ್ಲ. ಪಕ್ಷದಿಂದ ದುಡ್ಡು ಕೊಡಬೇಕು. ದುಡ್ಡು ಇಲ್ಲದೇ ಟಿಕೆಟ್ ತಗೊಂಡು ಏನ್ ಮಾಡಲಿ ಎಂದು ಕೆ.ಎನ್ ರಾಜಣ್ಣ ಪ್ರಶ್ನಿಸಿದರು.

ನಂತರ ಯಾರು ದುಡ್ಡು ಕೊಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಪಕ್ಷವೇ ನಮಗೆ ದುಡ್ಡು ಕೊಡಬೇಕು. ಇದೇನು ದೇವೇಗೌಡ್ರ ಪಕ್ಷನಾ ಅಭ್ಯರ್ಥಿಗಳೇ ದುಡ್ಡು ಕೊಟ್ಟು ಬಿ-ಫಾರ್ಮ್ ಇಸ್ಕೊಂಡು ಬರೋಕೆ. ಇದು ಕಾಂಗ್ರೆಸ್ ಪಕ್ಷ. ಟಿಕೆಟ್ ಕೊಟ್ಟು ಖರ್ಚಿಗೆ ಹಣವನ್ನೂ ಕೊಡಬೇಕು. ದೇವೇಗೌಡರ ಪಕ್ಷದಲ್ಲಿ ಟಿಕೆಟ್ ಪಡೆಯಲೂ ಅಭ್ಯರ್ಥಿಗಳು ದುಡ್ಡು ಕೊಡಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಟ್ಟು ಪಕ್ಷವೇ ಅಭ್ಯರ್ಥಿಗಳಿಗೆ ಹಣ ಕೊಡುತ್ತದೆ ಎಂದು ಕುಟುಕಿದ್ದಾರೆ.

Join our WhatsApp group for latest news updates